ಜಕಾರ್ತ: ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ವ್ಯಾಪಕ ಮಳೆಯಿಂದಾಗಿ ಪ್ರವಾಹ ಭೂ ಕುಸಿತ ಉಂಟಾಗಿದ್ದು, 19 ಜನ ಸಾವನ್ನಪ್ಪಿ, 7 ಜನ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಅಲ್ಲದೇ, ನಾಪತ್ತೆಯಾದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ವಿಪತ್ತು ನಿರ್ವಹಣಾ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಆರಂಭಿಸಿವೆ ಎಂದು ಭಾನುವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟನ್ಗಟ್ಟಲೆ ಮಣ್ಣು, ಬಂಡೆಗಳು ಮತ್ತು ಬೇರುಸಹಿತ ಮರಗಳು ಪರ್ವತದಿಂದ ಉರುಳಿ ನದಿ ತಲುಪಿವೆ. ಈ ದುರಂತದಲ್ಲಿ ಸತ್ತವರ ಸಂಖ್ಯೆ 19 ಕ್ಕೆ ತಲುಪಿದೆ ಎಂಬುದಾಗಿ ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಡೋನಿ ಯುಸ್ರಿಜಾಲ್ ಹೇಳಿದ್ದಾರೆ.
ಭೂ ಕುಸಿತದಿಂದಾಗಿ 14 ಮನೆಗಳು ಧ್ವಂಸವಾಗಿ, 80 ಸಾವಿರಕ್ಕೂ ಅಧಿಕ ಜನರನ್ನು ತಾತ್ಕಾಲಿಕ ಸರ್ಕಾರಿ ಆಶ್ರಯಕ್ಕೆ ಕಳುಹಿಸಲಾಗಿದೆ. ಆದರೆ ಪಶ್ಚಿಮ ಸುಮಾತ್ರಾ ಪ್ರಾಂತ್ಯದ 9 ಜಿಲ್ಲೆಗಳು ಮತ್ತು ನಗರಗಳಲ್ಲಿ ಸುಮಾರು 20 ಸಾವಿರ ಮನೆಗಳು ಜಲಾವೃತವಾಗಿವೆ.