ದಾವಣಗೆರೆ: ಮಹಿಳೆಯೊಬ್ಬರು ತನ್ನ 5 ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಹತ್ತಿರ ಇರುವ ಸೂಳೆಕೆರೆಯಲ್ಲಿ ಈ ಘಟನೆ ನಡೆದಿದೆ. ಕವಿತಾ (27) ಹಾಗೂ ನಿಹಾರಿಕಾ (05) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರ ಪತ್ನಿಯಾಗಿದ್ದಾರೆ.
ಮಗಳು ಹಾಗೂ ಪತ್ನಿ ಕಾಣೆಯಾಗಿದ್ದಾರೆ ಎಂದು ಪತಿ ದೂರು ನೀಡಿದ್ದರು. ಆದರೆ, ಸೂಳೆಕೆರೆಯಲ್ಲಿ ತಾಯಿ-ಮಗಳ ಶವ ಪತ್ತೆಯಾಗಿದೆ. ಸೂಳೆಕೆರೆಗೆ ಹಾರುವ ಮುನ್ನ ಮಗಳನ್ನ ವೇಲ್ ನಿಂದ ಕಟ್ಟಿಕೊಂಡು ಕವಿತಾ ಕೆರೆಗೆ ಹಾರಿದ್ದಾರೆ. ಮದುವೆಯಾದ ನಂತರ ಪತಿಯ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ (Channagiri Police Station) ಪ್ರಕರಣ ದಾಖಲಾಗಿದೆ