ಕುಟುಂಬ ನಿರ್ವಹಣೆ ಮಾಡುತ್ತಿದ್ದ ತಂದೆಯ ನಿಧನದ ನಂತರ ಮನೆಯ ಜವಾಬ್ದಾರಿ ಹೊತ್ತಿದ್ದ ಬಿಕಾಂ ಪದವಿಧರೆ ಈಗ ರೈತ ಕುಲವೇ ಸಂತಸ ಪಡುವಂತಹ ಸಾಧನೆ ಮಾಡಿದ್ದಾಳೆ.
ಬೆಳಗಾವಿ(Belagavi) ತಾಲೂಕಿನ ಜಾಫರವಾಡಿ ಗ್ರಾಮದ ನಿಕಿತಾ ಪಾಟೀಲ್ ಭರ್ಜರಿ ಆದಾಯ ಗಳಿಸಿದ್ದಾರೆ. ಸಿಎ ವ್ಯಾಸಂಗ ಮಾಡುತ್ತಿದ್ದ ಇವರು, ತಂದೆ ಅಕಾಲಿಕ ನಿಧನ ಹೊಂದಿದ ಹಿನ್ನೆಲೆಯಲ್ಲಿ ನಿಕಿತಾ, ತನ್ನ ಚಿಕ್ಕಪ್ಪ ತಾನಾಜಿ ಸಹಾಯದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿ ನಾಲ್ಕು ಎಕರೆ ಜಮೀನಿನ ಪೈಕಿ ಮೂವತ್ತು ಗುಂಟೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದರು.
ನವಲ ಭಟಕಾ ಎಂಬ ತಳಿಯ ಮೆಣಸಿನ ಬೀಜವನ್ನು ತಾವೇ ಸ್ವತಃ ಬಿತ್ತಿ ಸಸಿ ಮಾಡಿ 30 ಗುಂಟೆಯಲ್ಲಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಪದ್ಧತಿ ಸೇರಿ ಸುಧಾರಿತ ಬೇಸಾಯ ಕ್ರಮ ಅನುಸರಿಸಿ ವ್ಯವಸಾಯ ಮಾಡುತ್ತಾ ಬಂದಿದ್ದು ಕಳೆದ ಆರು ತಿಂಗಳಲ್ಲಿ ಎಂಟು ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ನಿಕಿತಾ ಬೆಳೆಯುವ ಮೆಣಸಿನಕಾಯಿಗೆ ಭಾರೀ ಬೇಡಿಕೆ ಕೂಡ ಇದೆ.
ಮೂರರಿಂದ ಐದು ಇಂಚು ಬೆಳೆಯುವ ಈ ಮೆಣಸಿನಕಾಯಿಯನ್ನು ಮಹಾರಾಷ್ಟ್ರದ ಕೊಲ್ಲಾಪುರ, ಗೋವಾಗೆ ಅತಿ ಹೆಚ್ಚು ಸರಬರಾಜು ಮಾಡಲಾಗುತ್ತೆ. ಪಿಜ್ಜಾ, ಬರ್ಗರ್ ತಯಾರಿಕೆಯಲ್ಲಿ ಈ ಮೆಣಸಿನಕಾಯಿ ಬಳಸುವುದರಿಂದ ಗೋವಾದಲ್ಲಿ ಈ ಮೆಣಸಿನಕಾಯಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗುತ್ತಿದೆ.