ಬೆಂಗಳೂರು : ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸಲ್ ಬೆಲೆ ಏರಿಕೆ ಆಗುತ್ತಿರೋದನ್ನ ಖಂಡಿಸಿ ರಾಜ್ಯ ಕಾಂಗ್ರೆಸ್ ಇಂದು ಸೈಕಲ್ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಭಾಗವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಗೆ ಸೈಕಲ್ ನಲ್ಲಿ ಬಂದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದೆ. ಆದ್ರೂ ಈಗ ದರ ಏರಿಕೆ ಮಾಡಿದ್ದಾರೆ. ನನ್ನ ಪ್ರಕಾರ ಪೆಟ್ರೋಲ್ ಗೆ 25 ರೂ. ಮಾಡಬೇಕಾಗಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟಿತ್ತು. ಈಗ ಈ ಸರ್ಕಾರ ಯಾವುದೂ ಕೊಟ್ಟಿಲ್ಲ. ಸಾಮನ್ಯ ಜನರ ಮೇಲೆ ದುಬಾರಿ ಬೆಲೆ ಹೇರಲಾಗುತ್ತಿದೆ. ಕೋವಿಡ್ ಇದ್ರು ಕಳೆದ 10 ದಿನಗಳಿಂದ ಇಂಧನ ಬೆಲೆಯಲ್ಲಿ 11 ರೂ. ಹೆಚ್ಚಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕಿದೆ ಎಂದು ಕಿಡಿಕಾರಿದ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೀವಿ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ ಆಗಿದೆ ಎಂದು ಗುಡುಗಿದರು.