ಕೃಪೆ – ಹಿಂಡವಿ
ನಮ್ಮ ನಡುವಿನ ಸಾಧಕರು:
ಕ್ಷೀರ ಸಮೃದ್ಧತೆಯ ಹರಿಕಾರ ವರ್ಗೀಸ್ ಕುರಿಯನ್ ಎಂಬ ಮನುಷ್ಯನನ್ನು ನಾವೆಷ್ಟು ನೆನಪಿಟ್ಟುಕೊಂಡಿದ್ದೇವೆ:
“ತಮ್ಮ ಮೊಮ್ಮಗ ಸಿದ್ಧಾರ್ಥನಿಗೆ ವರ್ಗೀಸ್ ಬರೆದ ಪತ್ರವೊಂದು ಇಲ್ಲಿದೆ ತಪ್ಪದೇ ಓದಿ”
ಸರಿಯಾಗಿ ಎಂಟು ವರ್ಷಗಳ ಹಿಂದೆ ಮುಂಜಾನೆ ಮರಳಿ ಬಾರದ ಲೋಕಕ್ಕೆ ಹೊರಟು ಹೋದರು ವರ್ಗೀಸ್ ಕುರಿಯನ್. ಇಂದು ಎಲ್ಲರ ಮನಸಲ್ಲಿ ಅಚ್ಚಳಿಯದೆ ನಿಂತಿರುವ “ಅಮೂಲ್” ಬ್ರಾಂಡ್’ನ ಹಿಂದಿನ ಪರಿಶ್ರಮಿಕ ಶಕ್ತಿ ಇವರು. “ಭಾರತ ರತ್ನ”ಕ್ಕೆ ಭಾಜನರಾಗಿ ಆ ನಾಗರೀಕ ಗೌರವದ ಗರಿಮೆ ಹೆಚ್ಚಿಸಿದ್ದ ವರ್ಗೀಸ್ ಕುರಿಯನ್ ಕೇರಳದ ಕೊಟ್ಟಾಯಂ ಮೂಲದವರು. ಆಗಷ್ಟೇ ಸ್ವಾತಂತ್ರದ ಸುಖಕ್ಕೆ ತೆರೆದುಕೊಂಡಿದ್ದ ಶೈಶವ ಪ್ರಜಾಪ್ರಭುತ್ವದ ಬಡ ಭಾರತಕ್ಕೆ ಅಮೆರಿಕಾದಿಂದ ಉನ್ನತ ಶಿಕ್ಷಣ ಪಡೆದು ಹಿಂದಿರುಗಿದ ಕುರಿಯನ್ ಎಂಬ ತರುಣ ಇಂಜಿನಿಯರ್ ಯಥೇಚ್ಛ ಸಂಬಳದ ಸರಕಾರಿ ಆಡಳಿತದ ಗದ್ದುಗೆ ಏರುವ ವಿಫುಲ ಅವಕಾಶವಿದ್ದರೂ ಆನಂದ್ ಎಂಬ ಗುಜರಾತಿನ ಕೈರಾ ಜಿಲ್ಲೆಯ ಕುಗ್ರಾಮದ ಮೋಹಕ್ಕೆ ಅದು ಹೇಗೊ ಬಿದ್ದುಬಿಟ್ಟರು. ತ್ರಿಭುವನದಾಸ ಪಟೇಲ್ ಹಾಗೂ ಮಣಿಬೇನ್ (ಸರದಾರರ ಮಗಳು)ರ ಮಾರ್ಗದರ್ಶನದಲ್ಲಿ ತಮ್ಮ ಜೀವನ ಕಟ್ಟಿ ಕೊಳ್ಳುತ್ತಲೇ (ಆಗಷ್ಟೇ ಮೂಲಿಯೊಂದಿಗೆ ಅವರ ಮದುವೆ ಆಗಿತ್ತು, ಎರಡು ವರ್ಷದಲ್ಲಿ ಮಗಳು ನಿರ್ಮಲ ಮನೆ-ಮನ ತುಂಬಿದ್ದಳು.) “ಆಮೂಲ್’ನ್ನೂ ಕಟ್ಟಿ ಬೆಳೆಸಿದವರು. ಡೇರಿ ಉದ್ಯಮ ಇಂದು ದೇಶದಲ್ಲಿ ಬೃಹದಾಕಾರವಾಗಿ ಬೆಳೆದು ಅನೇಕರ ಅನ್ನದ ಆಸರೆಯಾಗಿದೆಯಾದರೆ ಅದಕ್ಕೆ ವರ್ಗೀಸ್ ಕರಿಯನ್ನರ ಕಾರ್ಯತತ್ಪರತೆಯೆ ನೇರ ಕಾರಣ. ಅಂದು ಉಳ್ಳವರ ಸೊತ್ತಾಗಿದ್ದ ಹಾಲಿಗೆ ಬಾಯಿ ಬಾಯಿ ಬಿಡಬೇಕಾಗಿದ್ದ ಭಾರತ ಇಂದು ಕ್ಷೀರ ಸಮೃದ್ಧವಾಗಲು ಅವರ ದೂರದೃಷ್ಟಿಯ ಒಳನೋಟವೆ ಕಾರಣ.
ಬಹುತೇಕ ಅಸಾಧ್ಯವೆ ಆಗಿದ್ದ ಗರಣೆ ಕಟ್ಟುವ ಎಮ್ಮೆ ಹಾಲಿನಿಂದಲೂ ಹಾಲಿನ ಪುಡಿ ಮಾಡಿ ತೋರಿಸಿದ ಸಾಧಕ ವರ್ಗಿಸ್ ಕುರಿಯನ್. ಬಹುಷಃ ಆ ಸಾಧನೆಯ ಪೇಟೆಂಟ್ ಅವರ ಹೆಸರಿನಲ್ಲಿಯೆ ಇದೆ ಅನ್ನಿಸುತ್ತೆ. ನಿವೃತ್ತರಾದ ನಂತರವೂ ತಮ್ಮ ಕಾಯಕ ಭೂಮಿ ಕೈರಾದಲ್ಲಿಯೆ ವಾಸ ಮಾಡೋದನ್ನ ಆಯ್ಕೆ ಮಾಡಿಕೊಂಡ ಅವರಿಗೆ ಕೊನೆಯುಸಿರೆಳೆವಾಗ ತೊಂಬತ್ತು ವರ್ಷ ವಯಸ್ಸಾಗಿತ್ತು. ಆದರೆ ಇಂದು ಆರ್ಥಿಕವಾಗಿ ಬಲಿತಿರುವ ಹಾಲು ಒಕ್ಕೂಟದ ಚಿಲ್ಲರೆ ಆಡಳಿತ ರಾಜಕೀಯದಿಂದ ಕೊನೆಯ ಐದು ವರ್ಷ ಅವರು ನೊಂದು ನರಳುವಂತಾಗಿತ್ತು ಅನ್ನೋದು ಸತ್ಯ. ಸಹಕಾರ ಕ್ಷೇತ್ರದಲ್ಲಿ ಅವರು ಬೆಳೆಸಿದ ಎಳೆಯರೆ ಭ್ರಷ್ಟರಾಗಿ, ಆಡಳಿತ ಮಂಡಳಿಯಲ್ಲಿದ್ದು ತಮ್ಮ ಅನಾಚಾರಗಳಿಗೆ ಅಡ್ಡಿಯಾಗಿದ್ದ ಕುರಿಯನ್ನರಿಗೆ “ಸರ್ವಾಧಿಕಾರಿ” ಅನ್ನೊ ಪಟ್ಟ ಕಟ್ಟಿ ಅವರ ಮನ ನೋಯಿಸಿದರು. ಅವರೆ ಕಟ್ಟಿದ ಸಂಸ್ಥೆಯಿಂದ ಅವರನ್ನ ಹೊರಹಾಕಿ ಹಿಂಸಿಸಲಾಯಿತು. ಒಬ್ಬ ಧೀಮಂತ ಇದರಿಂದ ನೋಯುವಂತಾದದ್ದು ಅಕ್ಷಮ್ಯ. ಅದೇನೆ ಇರಲಿ ಕುರಿಯನ್ ನಮ್ಮೆಲ್ಲರ ಹೀರೋ. ಭಾರತ ರತ್ನ” ರಾಷ್ಟಪತಿಗಳಿಂದ ಪಡೆವ ಸಂದರ್ಭವನ್ನ ನೆನಪಿಸಿಕೊಂಡು ಸಮಾರಂಭದ ನಂತರ ತಮ್ಮ ಎಳೆಯ ಗೆಳೆಯ ಹಾಗೂ ಮೊಮ್ಮಗ ಸಿದ್ಧಾರ್ಥನಿಗೆ ಅವರೆ ಬರೆದಿದ್ದ ಒಂದು ಆತ್ಮೀಯ ಪತ್ರ ಇಲ್ಲಿದೆ.
ಡಾ ವರ್ಗೀಸ್ ಕುರಿಯನ್ ತಮ್ಮ ಮೊಮ್ಮಗ ಸಿದ್ಧಾರ್ಥನಿಗೆ ಬರೆದ ಆತ್ಮೀಯ ಪತ್ರ.
ನನ್ನ ಪ್ರೀತಿಯ ಸಿದ್ಧಾರ್ಥ,
ನಿನಗೆ ಯಾವಾಗ ನಾನು ಬರೆದದ್ದು? ಜ್ಞಾಪಿಸಿಕೊಳ್ಳುವುದೂ ಕೂಡ ನನಗೆ ಕಷ್ಟವಾಗುತ್ತಿದೆ! ವೇಗವಾಗಿ ಓಡುತ್ತಿರುವ ಇಂದಿನ ಪ್ರಪಂಚದಲ್ಲಿ ತಕ್ಷಣದ ಸಂಪರ್ಕಕ್ಕೆ ಮೊಬೈಲನ್ನು ನಾವು ಬಳಸುತ್ತೇವೆ. ಫೋನಿನಲ್ಲಿ ಮಾತನಾಡಿದ ತಕ್ಷಣ ಮಿಂಚಿ ಮರೆಯಾಗುವಂತ ಸಂತೋಷವೇನೋ ಸಿಗುವುದು ನಿಜ. ಆದರೆ ಬರವಣಿಗೆಯ ಛಾಪೆ ಬೇರೆ. ಬರವಣಿಗೆ ಅದು ಕೇವಲ ಪತ್ರವೆ ಇರಲಿ, ನಮ್ಮ ಇಂದಿನ ತಾಪತ್ರಯಗಳು ಹಾಗೂ ಇಂದು ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಆ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಶೇಖರಿಸಿ ವರ್ಷಗಳುರುಳಿದಂತೆ ಓದಿ ಆನಂದಿಸುವ ಆಸ್ತಿಯಾಗುತ್ತದೆ.
ಮುಂದೆ ಬರಲಿರುವ ಅಧ್ಯಾಯಗಳು ಪತ್ರಕ್ಕಿಂತ ಹೆಚ್ಚಿನವು. ನೀನು ಇದನ್ನು ಇಡಿಯಾಗಿ ಓದ ಬಯಸದೆ ಇರಬಹುದು. ಆದರೆ ಹತ್ತಾರು ವರ್ಷ ಕಳೆದ ನಂತರ ಈ ಟಿಪ್ಪಣಿಗಳನ್ನು ಎತ್ತಿಕೊಂಡು ನೀನು ನೋಡಿದಾಗ ನಾನು ಏನು ಮಾಡಿದೆ ಎಂಬುದರ ಅಂತರಾರ್ಥ ಹಾಗು ನಮ್ಮ ದೇಶದ ರೈತರ ಸೇವೆಗೆ ತೊಡಗಿದುದರ ಕಾರಣ ತಿಳಿಯಬಹುದು. ಇಪ್ಪತ್ತೊಂದನೆಯ ಶತಮಾನಕ್ಕೆ ಪ್ರಪಂಚ ಕಾಲಿಡುವ ಮುನ್ನ ಅಮೂಲ್ಯವಾದ ಆ ದಿನಗಳು ನಿನಗೆ ಆಗ ಗೋಚರಿಸುತ್ತವೆ. ಆವಾಗ ನನ್ನ ನೆನಪುಗಳನ್ನು ನಿನ್ನ ಪೀಳಿಗೆಯ-ಇಲ್ಲವೇ ನಿನಗಿಂತ ಕಿರಿಯರಿಗೊ ನಿನ್ನ ಅಜ್ಜಿ ಅಜ್ಜಂದಿರು ಬಾಳಿದ ಮತ್ತು ತಿಳಿದಿದ್ದ ಪ್ರಪಂಚವನ್ನು ಹಂಚಿಕೊಳ್ಳಬಹುದು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದೊಡನೆ ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಅಂದಿನ ದಿನಗಳಲ್ಲಿ ನಮ್ಮ ಕನಸಿನ ಭಾರತದ ಜನ ಸಾಮಾನ್ಯರು ತಲೆಯೆತ್ತಿ ಮೆರೆಯುವುದೆ ಅಲ್ಲದೆ ನಾವು ಈ ದೇಶವನ್ನು ಕಟ್ಟಲು ಯಾವುದೆ ಮಾರ್ಗದಲ್ಲಿ ನಮ್ಮ ಕೊಡುಗೆಗಳನ್ನು ಕೊಡುವುದೆ ಶ್ರೇಷ್ಠ ಕಾರ್ಯವೆಂದು ತಿಳಿದಿದ್ದೆವು. ನಮ್ಮ ಜನ ಪರಸ್ಪರ ಗೌರವ ಮತ್ತು ಸ್ನೇಹ-ಪ್ರೇಮದಿಂದ ಬಾಳುವ ದೇಶ ನಮ್ಮದಾಗಬೇಕು. ಮುಂದುವರೆದ ರಾಷ್ಟ್ರಗಳಲ್ಲಿ ಮೊದಲ ಪಂಕ್ತಿಯಲ್ಲಿ ಪರಿಗಣಿತವಾಗಬೇಕು ಎಂಬ ಆಸೆಯಿತ್ತು. ಒಂದು ರೀತಿಯ ಬಾಳನ್ನು ಆಯ್ಕೆ ಮಾಡಿಕೊಂಡಾಗ ಇನ್ನಿತರ ಆಯ್ಕೆಗಳು ಅದೆಷ್ಟೆ ಆಕರ್ಷಕವಾಗಿದ್ದರೂ ಬದಿಗಿರಿಸುವುದು ಅನಿವಾರ್ಯ ಎಂಬ ಅರಿವಿನ ವಿನೀತ ಭಾವ ನನ್ನಲ್ಲಿ ಮೂಡಿತು. ಈ ಪರಿವರ್ತನೆ ಸಾಧ್ಯವಾದದ್ದು ಐವತ್ತು ವರ್ಷಗಳ ಹಿಂದೆ ತಮ್ಮ ಜೀವನದ ಮೇಲೆ ಹತೋಟಿ ಸಾಧಿಸಿ ಸ್ವಾವಲಂಬಿಗಳಾಗಲು ಯತ್ನಿಸುತ್ತಿದ್ದ ಹೈನುಗಾರ ರೈತರ ಒಂದು ಸಣ್ಣ ಸಹಕಾರಿ ಸಂಘಕ್ಕೆ ಕೆಲಸ ಮಾಡಲು ಒಪ್ಪಿದಾಗ.
ಪ್ರಾಮಾಣಿಕವಾಗಿ ಹೇಳುವದಾದರೆ ನನ್ನ ವೃತ್ತಿಬಾಳ್ವೆ ನಮ್ಮ ನಾಡಿನ ರೈತರ ಸೇವೆಗಾಗಿ ಎಂದು ನಾನು ಎಂದೂ ತೀರ್ಮಾನಿಸಿರಲಿಲ್ಲ. ಆದರೆ ಅದು ಹೇಗೋ ಘಟನೆಗಳ ಸರಮಾಲೆ ನನ್ನನ್ನು ಒಂದು ಗೊತ್ತಾದ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿಸಿತು. ಓದಿದ್ದ ಮೆಟಲರ್ಜಿಯ ಬಲದಿಂದ ಯಾವುದಾದರೂ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿ ಅದರ ಸಿಇಓ ಆಗಬಹುದಿತ್ತು, ಇಲ್ಲವೆ ಸೈನ್ಯಕ್ಕೆ ಸೇರಿ ಬಹುಷಃ ಜನರಲ್ ಆಗಿ ನಿವ್ರತ್ತನಾಗಬಹುದಿತ್ತು. ಆದರೆ ನಾನು ಇವ್ಯಾವುದನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ. ಏಕೆಂದರೆ ಆಳದಲ್ಲೆಲ್ಲೋ ನಾನು ಇಲ್ಲಿ ಅಂದರೆ ಗುಜರಾತಿನ ಆನಂದ್’ನಲ್ಲಿ ಒಂದು ಅರ್ಥಪೂರ್ಣ ಕೊಡುಗೆಗಾಗಿ ದುಡಿಯುವುದು ಸಾಧ್ಯ ಎಂಬ ಅರಿವು ನನಗಿತ್ತು. ನಿನ್ನ ಅಜ್ಜಿ ಕೂಡ ಈ ನನ್ನ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಆ ದಿನಗಳಲ್ಲಿ ನಾವಿಂದು ಸಾಮಾನ್ಯ ಸೌಲಭ್ಯಗಳೆಂದು ಪರಿಗಣಿಸುವ ಸವಲತ್ತುಗಳೂ ಅಲ್ಲಿ ಅಲಭ್ಯ. ಆದರೂ ಅವಳು ಅಲ್ಲೇ ನನ್ನೊಂದಿಗೆ ವಾಸಿಸಿ ಅಲ್ಲೆ ಬದುಕ ಕಟ್ಟುವ ನನ್ನ ಆಯ್ಕೆಯನ್ನು ಮನಸಾರೆ ಬೆಂಬಲಿಸಿದಳು. ನನ್ನ ಬೆಂಗಾವಲಾಗಿ ನಿಂತ ನಿನ್ನ ಅಜ್ಜಿಯ ಆಯ್ಕೆ ನನಗೆ ನೀಡಿದ ಮಾನಸಿಕ ಶಕ್ತಿಯಿಂದಲೆ ಎಲ್ಲ ಮಹತ್ವದ ಹೆಜ್ಜೆಗಳನ್ನು ಹಿಂಜರಿಯದೆ ಮುನ್ನಡೆಸಿತು.
ದೇಶದ ಪ್ರಗತಿಗೆ ಸಂದ ನನ್ನ ದುಡಿಮೆಯನ್ನು ಗುರುತಿಸಿ ಸನ್ಮಾನಿಸಿದಾಗಲೆಲ್ಲ ಅನೇಕ ಜನರ ಸಾಧನೆಗಳಿಗೆ ನನ್ನ ಮೂಲಕ ಸಂದ ಮನ್ನಣೆಯಿದು ಎಂಬುದನ್ನೂ ಒತ್ತಿ ಒತ್ತಿ ಹೇಳುತ್ತೇನೆ. ಹಾಗೂ ನನ್ನವೇ ಆದ ಕೆಲವು ಮೂಲ ಮೌಲ್ಯಗಳೂ ಇವಕ್ಕೆ ಕಾರಣ. ನನ್ನ ತಂದೆ ತಾಯಿಗಳ – ಕುಟುಂಬದ ಹಿರಿಯರ, ಆನಂದ್’ನ ನನ್ನ ಮಾರ್ಗದರ್ಶಕ ತ್ರಿಭುವನದಾಸ್ ಪಟೇಲರಲ್ಲಿ ನಾನು ಕಂಡ ಮೌಲ್ಯಗಳೂ ಇದರ ಹಿಂದಿವೆ. ಒಟ್ಟಾರೆ ಹೇಳಬೇಕೆಂದರೆ ಪ್ರಾಮಾಣಿಕತೆ, ತನಗೆ ತಾನು ಪ್ರಾಮಾಣಿಕನಾಗಿರುವುದು. ನೀನೂ ಸದಾ ನಿನಗೆ ಪ್ರಾಮಾಣಿಕನಾಗಿದ್ದರೆ ಇತರರೊಂದಿಗೂ ಹಾಗೆಯೆ ಇರಲು ಕಷ್ಟವಾಗಲಾರದು.
ನಾನು ಕಂಡಂತೆ ಯಾವ ಕ್ಷಣದಲ್ಲೂ ತಪ್ಪಾಗಬಹುದು. ಅನೇಕ ಬಾರಿ ಹಾಗೆಯೆ ಆಗುತ್ತದೆ. ಜನರು ಬಾಳುತ್ತಿರುವ ಪರಿಸರ ಹಾಗೂ ಅವರೆಷ್ಟು ಸಂತೋಷವಾಗಿದ್ದಾರೆ ಎಂಬುದಕ್ಕೆ ತಾಳಮೇಳ ಇರುವುದಿಲ್ಲ. ನಮ್ಮ ಸಂಬಂಧಿ, ಪರಿಚಿತ ಅಥವಾ ಇನ್ಯಾರೋ ರಸ್ತೆಯಲ್ಲಿ ಹೋಗುವವನೊಂದಿಗೆ ನಮ್ಮನ್ನ ಹೋಲಿಸಿಕೊಂಡು ಕುರುಬುತ್ತೇವೆ.ಆದರೆ ನಾವು ಗಮನವಿಟ್ಟು ಹತ್ತಿರದಿಂದ ನೋಡಿದಾಗ ಅವು ಪೂರ್ಣತೆಯ ಪ್ರತಿಬಿಂಬಗಳು ಎಂಬುದರ ಅರಿವಾಗುತ್ತವೆ. ಇಲ್ಲದಿರುವುದರ ಬಗ್ಗೆ ಚಿಂತಿಸದೆ ಇರುವುದರಲ್ಲೇ ನೆಮ್ಮದಿಯಾಗಿರಲು ಇವು ಸಹಕರಿಸುತ್ತವೆ.
1999ರಲ್ಲಿ ನನಗೆ ರಾಷ್ಟ್ರಾಧ್ಯಕ್ಷರು ಪ್ರಶಸ್ತಿ ನೀಡುವ ಭವ್ಯ ಸಮಾರಂಭಕ್ಕೆ ಬಂದದ್ದು ನಿನಗೆ ನೆನಪಿದೆಯೆ? ತುಂಬ ಹೆಮ್ಮೆಯಿಂದ ಪದಕವನ್ನು ಕೊರಳಿಗೆ ಹಾಕಿಕೊಂಡು ಅದನ್ನು ಅಚ್ಚರಿಯಿಂದ ನೋಡಿ “ಇದನ್ನು ನಾನು ಇಟ್ಟಕೊಳ್ಳಲೆ?” ಎಂದು ಕೇಳಿದೆ. ಆಗ ನಾನು ಮತ್ತು ನಿನ್ನ ಅಜ್ಜಿ ಹೇಳಿದ್ದು ನೆನಪಿದೆಯೆ ನಿನಗೆ? ಈ ಪದಕ ನನ್ನದರಂತೆ ನಿನ್ನದೂ ಕೂಡ ಆದರೆ ನೀನು ನನ್ನ ಪದಕಗಳನ್ನು ಕೂಡುವುದರಲ್ಲಿ ತೃಪ್ತನಾಗಬಾರದು. ಸವಾಲಿರುವುದು ಮುಂದೆ ನಿನ್ನ ಪರಿಶ್ರಮಕ್ಕೆ ತಕ್ಕ ಪ್ರಶಸ್ತಿಗಳನ್ನು ನೀನೆ ಗಳಿಸುವುದರಲ್ಲಿ.
ಕೊನೆಯದಾಗಿ ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವ ಶಕ್ತಿ. ಇನ್ನೊಬ್ಬರ ಸಂತಸದಲ್ಲೂ ನಲಿವ ಎದೆಗಾರಿಕೆ ಹಾಗು ಬಾಳಲು ನಮ್ಮೆಲ್ಲರಿಗೂ ಸಾಕಷ್ಟು ಅವಕಾಶವಿದೆ ಎಂಬ ವಿವೇಕ ನಿನ್ನಲ್ಲಿದ್ದರೆ ಬಾಳು ಅರ್ಥಪೂರ್ಣ. ಸಿದ್ಧಾರ್ಥ, ಈ ಚಿಂತನೆಗಳು ನಿನಗಾಗಿ ಹಾಗು ನಿನ್ನ ತಲೆಮಾರಿನ ನಮ್ಮ ಸುಂದರ ದೇಶದ ಲಕ್ಷಾಂತರ ಮಕ್ಕಳಿಗಾಗಿ. ಇದನ್ನು ಓದಿದ ಮೇಲೆ ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಭಯವಿಲ್ಲದೆ ಮುನ್ನುಗ್ಗಿ ದೇಶದ ಬಹುಜನರ, ಮಾನವತೆಯ ಹಿತಕ್ಕಾಗಿ ಸ್ಫೂರ್ತಿ ಸಿಗುವುದೆಂದು ಭಾವಿಸುತ್ತೇನೆ. ಹಾಗೆಯೆ ನಿಮಗೆ ಬರುವ ಪ್ರಶಸ್ತಿಗಳೆ ನಿಜವಾದ ಪ್ರಶಸ್ತಿಗಳು ಹಾಗು ಸಾರ್ಥಕ ಬದುಕಿಗೆ ಅವೆ ನಿಜವಾದ ಮನ್ನಣೆಗಳು ಎಂಬುದನ್ನು ಮರೆಯದಿರಿ.
ನನ್ನ ನಲುಮೆಯ ಪ್ರೀತಿಯೊಂದಿಗೆ
ನಿನ್ನ ಒಲುಮೆಯ
ದಾದ
-ಶ್ರೀಹರ್ಷ ಹೆಗಡೆ, ಸ್ವತಂತ್ರ ಪತ್ರಕರ್ತ, ಚಿಂತಕ ಹಾಗೂ ಪರಿಸರ ಹೋರಾಟಗಾರ ಬೆಂಗಳೂರು