Active Voter ID
ಮತದಾರರ ಮಾಹಿತಿ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆಂಗಳೂರಿನ ಚಿಲುಮೆ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಮತದಾರರ ಮಾಹಿತಿ ಕಳವು ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಗಂಭೀರ ಆರೋಪ ಮಾಡಿತ್ತು ಮತ್ತು ಬಿಜೆಪಿ ಪರವಾಗಿ ಚಿಲುಮೆ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿತ್ತು. ಇದು ಬಿಜೆಪಿ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೂ ಕಾರಣವಾಗಿತ್ತು.
ಬಳಿಕ ಸಿಎಂ ಬೊಮ್ಮಾಯಿ ಈ ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು. ಇದೀಗ ಬಿಬಿಎಂಪಿ ನೀಡಿದ ದೂರಿನ ಮೇರೆಗೆ ಅಕ್ರಮ ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು, ಚಿಲುಮೆ ಸಂಸ್ಥೆಯ ನಾಲ್ವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಚಿಲುಮೆ ಸಂಸ್ಥೆ ವಿರುದ್ಧ ವೋಟರ್ ಐಡಿ ಅಕ್ರಮ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಾಗಿದ್ದು, ಚಿಲುಮೆ ಕಚೇರಿ ಮೇಲೆ ಹಲಸೂರು ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಖಾಸಗಿ ಸಂಸ್ಥೆಯಿಂದ ಮತದಾರ ಮಾಹಿತಿ ಸಂಗ್ರಹ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರು ಪ್ರತಿಕ್ರಿಯಿಸಿದ್ದು, ಚಿಲುಮೆ ಸಂಸ್ಥೆಗೆ ಮತದಾನದ ಜಾಗೃತಿ ಮೂಡಿಸೋದಕಷ್ಟೇ ನಾವು ಅನುಮತಿ ಕೊಟ್ಟಿದ್ದೇವೆ. ಡೇಟಾ ಕಲೆಕ್ಟ್ ಮಾಡಿ ಎಂದು ಅನುಮತಿ ಕೊಟ್ಟಿರಲಿಲ್ಲ. ಆದರೆ ಡೇಟಾ ಕಲೆಕ್ಟ್ ಮಾಡ್ತಾ ಇದ್ದಾರೆ ಅಂತಾ ದೂರು ದಾಖಲಾಗಿದ್ದು, ಬಿಬಿಎಂಪಿ ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾಗಿರುವುದಾಗಿ ಹೇಳಿದರು.








