ನಟ ಸಂಚಾರಿ ವಿಜಯ್ ಮೆದುಳು ಡೆಡ್ – ಅಂಗಾಂಗ ದಾನ ಪ್ರಕ್ರಿಯೆ ಪ್ರಾರಂಭ
ನಟ ಸಂಚಾರಿ ವಿಜಯ್ ಮೆದುಳು ಡೆಡ್ ಆಗಿದ್ದು, ರಾತ್ರಿ 9.30ಕ್ಕೆ ಅಂಗಾಂಗ ದಾನ ಪ್ರಕ್ರಿಯೆ ಆರಂಭವಾಗಿದೆ.
ಸುದ್ದಿಗೋಷ್ಠಿ ನಡೆಸಿದ ಅಪೋಲೋ ಆಸ್ಪತ್ರೆ ವೈದ್ಯರು, ಸಂಜೆ ಏಳೂವರೆಗೆ ನಡೆಸಿದ ಪರೀಕ್ಷೆಯಲ್ಲಿ ಬ್ರೈನ್ ಡೆಡ್ ಆಗಿದೆ. ಜೀವ ಸಾರ್ಥಕತೆ ತಂಡದಿಂದ ಅಂಗಾಂಗ ದಾನದ ಪ್ರಕ್ರಿಯೆ ಆರಂಭಗೊಂಡಿದೆ. ಅಂಗಾಂಗ ದಾನ ಪ್ರಕ್ರಿಯೆಯು ರಾತ್ರಿ ನಡೆಯಲಿದ್ದು, ದೇಹದ ಪಲ್ಸ್ ರೇಟ್, ರಕ್ತದೊತ್ತಡ ಸ್ಟೇಬಲ್ ಆಗಿದೆ. ಅಂಗಾಂಗ ಕಸಿ ಆಗುವವರೆಗೂ ಇದೇ ರೀತಿ ಇರಲಿದ್ದು, ಈ ಪ್ರಕ್ರಿಯೆ ಮುಗಿಯುವವರೆಗೂ ಸ್ಟೇಬಲ್ ಆಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ವಿಜಯ್ ಅವರ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಅಂಗಾಂಗಗಳನ್ನು ದಾನ ಮಾಡಲಾಗುತ್ತದೆ. ವೇಟಿಂಗ್ ಲಿಸ್ಟ್ ಮೂಲಕ ಅವಶ್ಯಕತೆ ಇರುವ ಆಸ್ಪತ್ರೆಗಳಿಗೆ ಅಂಗಾಂಗಗಳನ್ನು ನೀಡಲಾಗುವುದು. ಜೊತೆಗೆ ನಮ್ಮ ಆಸ್ಪತ್ರೆಯಲ್ಲಿ ಕೂಡ ಕೆಲ ರೋಗಿಗಳಿಗೆ ಕಸಿ ಮಾಡುವ ಸಾಧ್ಯತೆಗಳಿವೆ. ಅಂಗಾಂಗ ಕಸಿ ಬಳಿಕ ಮೃತದೇಹವನ್ನು ನಾಳೆ ಬೆಳಗ್ಗೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟ ಸಂಚಾರಿ ವಿಜಯ್ ಕೊರೋನಾ ಸಮಯದಲ್ಲಿ ಉಸಿರು ಎಂಬ ಸಂಘ ಕಟ್ಟಿ ಕೊರೋನಾ ಸೋಂಕಿತರಿಗೆ ಅಮ್ಲಜನಕ ಸಾಂದ್ರಕವನ್ನು ಪೂರೈಸುತ್ತಿದ್ದರು. ಇದೀಗ ತಮ್ಮ ಸಾವಿನ ನಂತರವೂ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹಲವಾರು ಜನರ ಬಾಳಿಗೆ ಬೆಳಕು ನೀಡುತ್ತಿದ್ದಾರೆ.
#sanchariVijay #organtranslation