ಯಾತ್ರಿಕ:
ಕುಟುಂಬ ಸಹಿತ ಸಂಭ್ರಮಿಸಲು ಹಾವೇರಿಯ ಅಗಡಿ ತೋಟವೆಂಬ ಪ್ರಾಕೃತಿಕ ತಾಣ ನಿಜಕ್ಕೂ ಅದ್ಭುತ:
ಕೃಪೆ – ಹಿಂದವಿ ಸ್ವರಾಜ್
ಈಗೊಂದಷ್ಟು ದಿನಗಳ ಹಿಂದೆ ನನ್ನ ನಾದಿನಿಯ ತವರಾದ ರಾಣಿಬೆನ್ನೂರಿಗೆ ಹೋದಾಗ ಎಲ್ಲಿ ಸುತ್ತೋಕೆ ಹೋಗಬೇಕು ಅಂತ ಯೋಚನೆಯಾದಾಗ, ಹೊಳೆದಿದ್ದು ಮೂರು ಆಯ್ಕೆಗಳು. ಚಿತ್ರದುರ್ಗದ ಕಲ್ಲಿನ ಕೋಟೆ, ರಾಕ್ ಗಾರ್ಡನ್ ಮತ್ತು ಅಗಡಿ ತೋಟ. ಕೊನೆಗೆ ಹುಬ್ಬಳ್ಳಿಯ ಹೊರವಲಯವಾದ ತಡಸದ ಸಮೀಪವಿರುವ ಅಗಡಿ ತೋಟಕ್ಕೆ ಹೋಗೋಣವೆಂದು ತೀರ್ಮಾನವಾಯಿತು. ಅಗಡಿ ತೋಟ ತೆರೆಯುವಾಗ ೧೦ ಗಂಟೆಯಾಗುತ್ತದೆಯೆಂದು ಗೊತ್ತಿಲ್ಲದೇ ಒಂದು ಗಂಟೆ ಮುಂಚೆಯೇ ನಮ್ಮ ೧೦ ಜನರ ಗ್ಯಾಂಗ್ ಅಲ್ಲಿಗೆ ತಲುಪಿತ್ತು. ಸೆಲ್ಫಿ, ವಿವಿಧ permutation and combinationನಲ್ಲಿ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುತ್ತಾ, ಅದು ಇದು ಹರಟೆ ಹೊಡೆಯುತ್ತಾ ಇದ್ದಂತೆ ಅಂತೂ ಹತ್ತು ಗಂಟೆಯಾಯಿತು.
ಅಲ್ಲಿ ಸ್ವಾಗತಕಾರಿಣಿಯರಾದ ಸ್ಥಳೀಯ ಮಹಿಳೆಯರು ತಲೆಗೆ ಏನೋ ಟೊಪ್ಪಿಯಿಟ್ಟು ವಿಶಿಷ್ಟವೋ ಅಥವಾ ವಿಚಿತ್ರವೋ ಆದ ರೀತಿಯಲ್ಲಿ ಸ್ವಾಗತ ಕೋರಿದರು. ತಲೆಗೆ ೬೫೦ ಪ್ರವೇಶ ಶುಲ್ಕ ಪಾವತಿಸಿದ್ದರಿಂದ ಗೀಟುವುದೋ ಇಲ್ಲವೋ ಅನ್ನುವ ಭಾವನೆ ಬರಲು ಆರಂಭವಾಯಿತು. ಕಣ್ಣು ಹಾಯಿಸಿದೆಡೆ ಗೇರುತೋಟ ಬಿಟ್ಟು ಬೇರೇನೂ ಕಾಣಲಿಲ್ಲ. ಯಾಕೋ ತಪ್ಪು ಮಾಡಿದೆವೋ ಅಂತ ಅನ್ನಿಸತೊಡಗಿತು.
ವೆಲ್ಕಂ ಡ್ರಿಂಕ್ ಅಂತ ಕೊಟ್ಟ ಕೋಕಂ ಸಾಧಾರಣವಾಗಿತ್ತಷ್ಟೇ. ನೂರು ಹೆಜ್ಜೆ ಮುಂದಡಿಯಿಟ್ಟಂತೆ ಕಲ್ಲಂಗಡಿ ಹಣ್ಣನ್ನು ಕೊಟ್ಟರು; ೨ ಪೀಸು ತಿಂದು ಮುನ್ನಡೆದ ಮೇಲೆ ಉಪಾಹಾರದ ಜಾಗ ಕಂಡಿತು. ಬೇಕಾದಷ್ಟು ದೋಸೆ, ಚಟ್ನಿ, ತುಪ್ಪ ಮತ್ತು ಬೆಲ್ಲ. ಜೊತೆಗೆ ಕುಡಿಯಲು ಶುಂಟಿ ಹಾಕಿದ ನಿಂಬೆ ಚಹಾ. ೪-೫ ದೋಸೆ ಹೊಟ್ಟೆಗಿಳಿದ ಮೇಲೆ ಇಲ್ಲಿ ಬಂದು ದೊಡ್ಡ ತಪ್ಪೇನೂ ಮಾಡಲಿಲ್ಲ ಅನ್ನೋ ಭಾವನೆ ಬರತೊಡಗಿತು. ದೋಸೆ ಮತ್ತು ಚಟ್ನಿ ನಿಜಕ್ಕೂ ಅದ್ಭುತಗಿತ್ತು. ಉತ್ತಮ ಗುಣಮಟ್ಟದ ತುಪ್ಪವನ್ನೇ ಕೊಟ್ಟಿದ್ದರು ಎಂದು ತಿಂದವರೆಲ್ಲಾ ಪ್ರಾಮಾಣಿಕವಾಗಿ ಒಪ್ಪಿಕೊಂಡೆವು.
ತಿಂಡಿ ಮುಗಿದ ನಂತರ ಮಗನಿಗೆ ಸೀ-ಸಾದಲ್ಲಿ ಸ್ವಲ್ಪ ಆಟವಾಡಿಸಿ, ನಾವೂ ಆಟವಾಡಿ ಬೇರೆ ಏನಿದೆಯೆಂದು ಹುಡುಕಿದಾಗ ಹಗ್ಗದಲ್ಲಿ, ಮರದ ದಿಮ್ಮಿಗಳಲ್ಲಿ ನಡೆಯುವ ಸಾಹಸ ಕ್ರೀಡೆಯ ಆಟವೊಂದು ಕಂಡಿತು. ನಾವು ಹತ್ತರಲ್ಲಿ ೫ ಜನ ಅದನ್ನು ಆಡಲು ಹೊರಟೆವು. ಶುರುವಿನಲ್ಲಿ ಸುಲಭ ಅನ್ನಿಸಿದ್ದ ದಾರಿ ಎಷ್ಟು ಕಠಿಣವೆಂದ ಆಮೇಲೆ ಗೊತ್ತಾಯಿತು. ಸಾಕ್ಷಾತ್ ಬೀಜ ಬಾಯಿಗೆ ಬಂದ ಅನುಭವ. ಕಷ್ಟಪಟ್ಟು ಗುದ್ದಾಡಿ ಐದೂ ಜನರು ಯಶಸ್ವಿಯಾಗಿ ನಮ್ಮ ಗುರಿ ತಲುಪಿದೆವು. ಅದನ್ನು ಮುಗಿಸಿದ ನಂತರ ಇಲ್ಲಿ ಬಂದಿದ್ದು ಸಾರ್ಥಕ ಅನ್ನುವ ಭಾವನೆ ಬಂದಿತು.
ಆಮೇಲೆ ನಾವೇ ಸ್ವತಃ ಗಾಣ ತಿರುಗಿಸಿ ಕಬ್ಬಿನ ಹಾಲನ್ನು ಕುಡಿಯಬೇಕಿತ್ತು. ನಮ್ಮ ಇಬ್ಬರು ಹುಡುಗರು ಜೋಡೆತ್ತುಗಳಂತೆ ಕಬ್ಬನ್ನು ಗಾಣದಲ್ಲಿ ಅರೆದು ಕುಡಿಯಲು ತಾಜಾ ಕಬ್ಬಿನ ಹಾಲನ್ನು ಕೊಟ್ಟರು. ತದನಂತರದಲ್ಲಿ ಕುದುರೆ ಸವಾರಿ, ಕುದುರೆ ಗಾಡಿಯ ಸವಾರಿ, ಎತ್ತಿನಗಾಡಿಯ ಸವಾರಿ, ಪೂರ್ತಿ ಮಣ್ಣುನೀರಿದ್ದ ಕೆರೆಯಲ್ಲಿ ದೋಣಿವಿಹಾರ ಇತ್ಯಾದಿಗಳನ್ನು ಮಾಡಿದೆವು. ದೊಡ್ಡ ವಿಶೇಷ ಅಂತ ಏನಿಲ್ಲ. ಆದರೂ ವೇಳೆ ಕಳೆಯಲು ಏನೂ ತೊಂದರೆಯಿರಲಿಲ್ಲ. ಮನೆಯಲ್ಲಿದ್ದ ಎತ್ತಿನ ಗಾಡಿ ಮಾರಾಟ ಮಾಡಿದ ನಂತರ ಅದರಲ್ಲಿ ಕೂತಿದ್ದೇ ಮರೆತು ಹೋಗಿತ್ತು. ಎಷ್ಟೋ ವರ್ಷದ ನಂತರ ಎತ್ತಿನ ಗಾಡಿಯಲ್ಲಿ ಕೂತ ಸಂಭ್ರಮ ನನ್ನದು.
ಅದಾದ ಮೇಲೆ ಊಟಕ್ಕೆ ನಡೆದಾಗ ನಿಜವಾದ ಆಶ್ಚರ್ಯವಾಗಿದ್ದು. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಸಸ್ಯಾಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಏನೇನಿದ್ದವು ಅಂತ ಬರೆಯಹೊರಟರೆ ೨ ಪುಟ ಸಾಲದು. ಎಲ್ಲೂ ಗುಣಮಟ್ಟದಲ್ಲಾಗಲೀ ಶುಚಿತ್ವದಲ್ಲಾಗಲೀ ರಾಜಿಯಾಗದೇ ಅದ್ಭುತವಾದ ಊಟವನ್ನು ಕೊಟ್ಟಿದ್ದರು. ಊಟವಾದಾಗ ನಾವು ಕೊಟ್ಟ ಪ್ರವೇಶ ಶುಲ್ಕ ೬೫೦ ರೂಪಾಯಿಗಳು ಕಮ್ಮಿಯೆಂದೇ ಅನ್ನಿಸತೊಡಗಿತು. ಹಾಗಾಗಿ ಆಮೇಲೆ ಕುಡಿದ ನಿಂಬು ಸೋಡಾ ಚೆನ್ನಾಗಿರದಿದ್ದರೂ ಬೇಜಾರೇನೂ ಆಗಿರಲಿಲ್ಲ. ಆಮೆಲೆ ಜಾದೂ ಪ್ರದರ್ಶನಕ್ಕೆ, ರೈನ್ ಡಾನ್ಸಿಗೆ ನಾನು ಹೋಗಲಿಲ್ಲ. ಆದರೂ ಅವು ಚನ್ನಾಗಿದ್ದವೆಂದು ಲ್ಲಿ ಹೋಗಿ ಬಲ್ಲವರಿಂದ ಕೇಳಿ ತಿಳಿದುಕೊಂಡೆವು.
ಊಟದ ನಂತರ ಸ್ವಲ್ಪ ವಿಶ್ರಾಂತಿ ಮಾಡಿ ಬೇಗ ಊರು ಸೇರಿಕೊಳ್ಳಬೇಕಾಗಿದ್ದ ಕಾರಣ ಸಂಜೆ ಚಹಾ ತಿಂಡಿಗೆ ನಿಲ್ಲದೇ ಮೂರು ಗಂಟೆಗೆ ಹೊರಟೆವು. ಒಟ್ಟಾರೆಯಾಗಿ ಅಲ್ಲಿನ ಕಾನ್ಸೆಪ್ಟ್ ಬಹಳ ಇಷ್ಟವಾಯಿತು. ಪರಿಸರಕ್ಕೆ ಹೆಚ್ಚು ಹಾನಿಯಾಗದ ಹಾಗೇ, ನೂರಕ್ಕೂ ಹೆಚ್ಚಿನ ಸ್ಥಳೀಯರಿಗೆ ಉದ್ಯೋಗ ಕೊಟ್ಟು, ಹೊರಗಿನವರಿಗೆ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಹೊರೆಯಾಗದಂತಹ ಶುಲ್ಕವಿಟ್ಟು ಪರಿಚಯ ಮಾಡಿಕೊಡುವ ವಿಧಾನ ಬಹಳ ಚನ್ನಾಗಿದೆ. ಹುಬ್ಬಳ್ಳಿಯ ಆಸುಪಾಸಿನ ನೂರಿನ್ನೂರು ಕಿಲೋಮೀಟರ್ ಸುತ್ತಳತೆಯ ಜನರು ಆರಾಮಾಗಿ ಒಂದು ದಿನ ಇಲ್ಲಿ ಕಳೆಯಬಹುದು. ನೀವೂ ನಿಮ್ಮ ಕುಟುಂಬದೊಂದಿಗೆ ಒಂದು ದಿನ ಹೋಗಿ ಮಕ್ಕಳೊಂದಿಗೆ ಸಂಭ್ರಮಿಸಿ, ಅಗಡಿ ತೋಟದ ಅನುಭವ ನಿಮಗೆ ಖಂಡಿತಾ ಪೈಸಾ ವಸೂಲ್.
-ಗಿರಿಧರ್ ಭಟ್ ಗುಂಜಗೋಡು, ಹವ್ಯಾಸಿ ಬರಹಗಾರ, ಸಿದ್ದಾಪುರ