ತೊಗರಿ ಮತ್ತು ಎಣ್ಣೆಕಾಳು ಬೆಳೆಗಳ ಬಿತ್ತನೆ ಬೀಜ ವಿತರಣೆ: ಹಿರೇಕೆರೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ
ಹಾವೇರಿ – ಕೃಷಿ ಸಚಿವ ಬಿ.ಸಿ.ಪಾಟೀಲ್ ಮತಕ್ಷೇತ್ರ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಸಾತೇನಹಳ್ಳಿ ಗ್ರಾಮದಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ತೊಗರಿ ಮತ್ತು ಎಣ್ಣೆಕಾಳು ಬೆಳೆಗಳ ಬಿತ್ತನೆಬೀಜದ ಕಿರು ಚೀಲಗಳನ್ನು ಸಾಂಕೇತಿಕವಾಗಿ ವಿತರಿಸಿ ಯೋಜನೆಗೆ ರಾಜ್ಯದಲ್ಲಿ ಚಾಲನೆ ನೀಡಿದರು.
ಯೋಜನೆಯಡಿ ಹಿರೇಕೆರೂರಿನ ಸಾತೇನಹಳ್ಳಿಯಲ್ಲಿ 401.20ಕ್ವಿಂಟಾಲ್ ಸುಮಾರು 42.12 ಲಕ್ಷ ರೂ.ಮೌಲ್ಯದ 10,030 ತೊಗರಿ, 1800ಕ್ವಿಂಟಾಲ್ 187.20ಲಕ್ಷ ರೂ.ಮೌಲ್ಯದ 22,500 ಸೋಯಾಬಿನ್ ಹಾಗೂ 240 ಕ್ವಿಂಟಾಲ್ ಸುಮಾರು 19.92 ಲಕ್ಷ ರೂ.ಮೌಲ್ಯದ 1200 ಶೇಂಗಾ ಬೀಜ ಸೇರಿದಂತೆ ಒಟ್ಟು 249.25ಲಕ್ಷ ರೂ.ಮೌಲ್ಯದ ಬಿತ್ತನೆ ಬೀಜಗಳ ಕಿರುಕಿಟ್(ಕಿರು ಚೀಲ)ಗಳನ್ನು ರೈತರಿಗೆ ಸಾಂಕೇತಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿಯನ್ವಯ ವಿತರಿಸಲಾಯಿತು.
ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್,ರೈತರು ಒಂದೇ ಬೆಳೆಗೆ ಸೀಮಿತರಾಗದೇ ಆಧುನಿಕ ಪ್ರಸಕ್ತ ಬದಲಾದ ಕಾಲಘಟ್ಟಕ್ಕನುಸಾರವಾಗಿ ಬೇರೆಬೇರೆ ಬೆಳೆಗಳನ್ನು ಅರ್ಥಾತ್ ಮಿಶ್ರಬೆಳೆಗಳನ್ನು ಬೆಳೆಯಬೇಕು.ಹೀಗೆ ಮಿಶ್ರ ಬೆಳೆ ಬೆಳೆಯುವ ಮೂಲಕ ರೈತರು ಲಾಭವನ್ನೂ ಗಳಿಸಬಹುದಾಗಿದೆ.
ಜಿಲ್ಲೆಯಲ್ಲಿ ಕೇವಲ ದೊಡ್ಡಜೋಳಕ್ಕೆ ಅಷ್ಟೇ ಬೆಳೆಯಲು ರೈತರು ಮೀಸಲಾಗದೇ ಈ ಬಾರಿ ತೊಗರಿ,ಸೋಯಾ,ಶೇಂಗಾವನ್ನು ಸಹ ಬೆಳೆಯಬೇಕೆಂಬ ಸದುದ್ದೇಶದಿಂದ ಈ ಮೂರು ಬಿತ್ತನೆ ಎಣ್ಣೆಕಾಳು ಬೀಜಗಳನ್ನು ವಿತರಿಸಲಾಗಿದೆ.ಬೆಳಗಾವಿ,ಬೀದರ್ಭಾಗಗಳಲ್ಲಿ ಹೆಚ್ಚಾಗಿ ಸೋಯಾ ಬೆಳೆಯಲಾಗುತ್ತದೆ.ಈ ಎಣ್ಣೆಕಾಳು ಸೋಯಾವನ್ನೂ ಹಾವೇರಿ ಭಾಗದಲ್ಲಿಯೂ ಸಹ ರೈತರು ಬೆಳೆಯಬೇಕು.ಈ ನಿಟ್ಟಿನಲ್ಲಿ ಹಿರೇಕೆರೂರಿನಲ್ಲಿಂದು ಸುಮಾರು 18 ಲಕ್ಷ ಮೌಲ್ಯದ ಎಣ್ಣೆಕಾಳು ಬಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.