ವೈಭವ್ ಸೂರ್ಯವಂಶಿ..!
ಊಹಿಸಲು ಅಸಾಧ್ಯವಾಗಿರುವ ಪ್ರತಿಭೆ.. ಕಲ್ಪನೆಗೂ ನಿಲುಕದ ಸಾಮಥ್ರ್ಯ…ಶರವೇಗದ ಎಸೆತಗಳಿಗೆ ಕ್ಷಣಮಾತ್ರದಲ್ಲೇ ದಿಟ್ಟ ಉತ್ತರ ನೀಡುವ ಎದೆಗಾರಿಕೆ..ಬೌಲರ್ ಯಾರೇ ಇರಲಿ, ಮುನ್ನುಗ್ಗಿ ಹೊಡೆಯುವಂತಹ ಅಪ್ರತಿಮ ಧೈರ್ಯ.. ಅಚಲವಾದ ಆತ್ಮವಿಶ್ವಾಸ.. ನನ್ನಿಂದ ಸಾಧ್ಯ ಅನ್ನೋ ದೃಢವಾದ ನಂಬಿಕೆ..ಪುಟಾಣಿ ವಯಸ್ಸಿನಲ್ಲೂ ನಿರಂತರ ಪರಿಶ್ರಮ.. ವಯಸ್ಸಿಗೂ ಮೀರಿದ ಪ್ರಬುದ್ಧತೆ.. ಆಟದ ಮೇಲಿನ ಬದ್ಧತೆ…ಚಿಕ್ಕವಯಸ್ಸಿನಲ್ಲೇ ಮೈಗೂಡಿಸಿಕೊಂಡಿರುವ ಶಿಸ್ತು… ಜಂಟಲ್ ಮ್ಯಾನ್ ಆಟವನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ ಪುಟ್ಟ ಹೃದಯ.. ಹಿರಿಯರ ಹಿತವಚನಗಳನ್ನು ಕೇಳಿಸಿಕೊಳ್ಳುವ ಗುಣ..ದಿಗ್ಗಜ ಕ್ರಿಕೆಟಿಗರನ್ನು ನೋಡಿದ ತಕ್ಷಣ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವ ಸಂಸ್ಕಾರ..ಮೀಸೆ ಚಿಗುರುವ ಮುನ್ನವೇ ಕ್ರಿಕೆಟ್ ಆಟವನ್ನು ಪರವಶಮಾಡಿಕೊಂಡಿರುವ ಪ್ರಚಂಡ ಬಾಲಕ..ಕ್ರಿಕೆಟ್ ಜಗತ್ತನ್ನೇ ವಿಸ್ಮಯಗೊಳಿಸುತ್ತಿರುವ ಮಾಂತ್ರಿಕ ಹುಡುಗ. ಎಐ ಸಾಫ್ಟವೇರ್ ಅನ್ನು ಕೂಡ ಒಂದು ಕ್ಷಣ ತಲ್ಲಣಗೊಳಿಸುತ್ತಿರುವ ಸೂಪರ್ ಮ್ಯಾನ್…ನೆಕ್ಸ್ಟ್ ಜೆನ್ ಕ್ರಿಕೆಟ್ಗೆ ದಿಕ್ಸೂಚಿಯಾಗಿ ಹೊರಹೊಮ್ಮಿರುವ ಬಾಲ ಸೂರ್ಯ. ಭಾರತೀಯ ಕ್ರಿಕೆಟ್ನ ಭವಿಷ್ಯದ ಭರವಸೆಯ ತೇಜಸ್ಸು.. ನೆನಪಿಡಿ.. ಸರಿಯಾದ ಹಾದಿಯಲ್ಲಿ ಸಾಗಿದ್ರೆ ವಿಶ್ವ ಕ್ರಿಕೆಟ್ನ ದಾಖಲೆಗಳನ್ನು ರೀ ರೈಟ್ ಮಾಡುವ ವಂಡರ್ ಬಾಯ್. ಯಾಕಂದ್ರೆ ಈತ ಅಂತಿಂಥನವಲ್ಲ. ಇವನು ದೇವರ ಮಗ..ಅಪ್ಪಟ ಅಪರಂಜಿ..!
ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಂದ್ರೆ ಅದು ಗಲ್ಲಿ ಗಲ್ಲಿಯಲ್ಲಿ ಆಡುವ ಚಿನ್ನಿದಾಂಡು ಆಟವಲ್ಲ. ಯಾವುದೇ ಗಡಿ, ಕಟ್ಟುಪಾಡುಗಳಿಗೆ ಸೀಮಿತವಾಗಿಲ್ಲ. ಒಂಚೂರು ಭಯವಿಲ್ಲದೆ ಮುಕ್ತವಾಗಿ ಬ್ಯಾಟ್ ಬೀಸುವುದನ್ನು ನೋಡಿದಾಗ ಕುವೆಂಪು ಅವರ ಸಾಲುಗಳು ನೆನಪಾಗುತ್ತವೆ. ಎಲ್ಲಾದರೂ ಇರು.. ಎಂತಾದರೂ ಇರು..ಎಂದೆಂದಿಗೂ ಕನ್ನಡವಾಗಿರು..ಅಂದ್ರೆ ಬೌಲರ್ ಯಾರೇ ಇರಲಿ.. ಎಷ್ಟೇ ದೊಡ್ಡವನಾಗಿರಲಿ.. ಸಿಕ್ಕ ಅವಕಾಶದಲ್ಲಿ ಆಗಸದಲ್ಲಿ ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ ಹಾರಾÀಡುವ ಗರುಡನಂತೆ ಈತ ಮೈದಾನಕ್ಕಿಳಿಯುತ್ತಾನೆ.
ಕಣ್ಣು ರೆಪ್ಪೆ ಮುಚ್ಚುವಷ್ಟರಲ್ಲಿ ಚೆಂಡನ್ನು ಮೈದಾನದ ಮೂಲೆ ಮೂಲೆಗಟ್ಟುವ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯೇ ಈತನ ಮೂಲಮಂತ್ರ. ಭಾರತೀಯ ಕ್ರಿಕೆಟ್ನ ಧ್ರುವನಕ್ಷತ್ರ ಎಂಬ ಸೂಚನೆಯನ್ನು ನೀಡುತ್ತಿದ್ದಾನೆ ಈ ಪುಟ್ಟ ಪೋರ.
ಹೌದು.. ಭಾರತೀಯ ಕ್ರಿಕೆಟ್ ನಿಂತ ನೀರಲ್ಲ.
ದ.ರಾ.ಬೇಂದ್ರೆ ಅವರ ಯುಗಾಯುಗಾದಿ ಕಳೆದರು ಯಗಾದಿ ಮರಳಿ ಬರುತ್ತಿದೆ ಎಂಬ ಪದ್ಯದ ಸಾಲಿನಂತೆ, ಭಾರತೀಯ ಕ್ರಿಕೆಟ್ ಕೂಡ. ಒಂದೊಂದು ಕಾಲ ಘಟ್ಟದಲ್ಲಿ ಭಾರತೀಯ ಕ್ರಿಕೆಟ್ಗೆ ಯುಗಪುರುಷರ ಉದಯವಾಗುತ್ತಿದೆ. ಅದು ಸುನೀಲ್ ಗವಾಸ್ಕರ್ನಿಂದ ಹಿಡಿದು, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ತನಕ ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಆದ ಛಾಪು ಮೂಡಿಸಿ ಅದ್ಭುತವಾದ ಪರಂಪರೆಯನ್ನು ಸೃಷ್ಠಿಸಿದ್ದಾರೆ. ಈಗ ವೈಭವ್ ಸೂರ್ಯವಂಶಿ ಎಂಬ ಹೊಸ ಯುಗದ ಪ್ರತಿಭೆಯ ಆಗಮನವಾಗಿದೆ. ಆದ್ರೆ ಈ ಪ್ರತಿಭೆಯನ್ನು ಜೋಪಾನವಾಗಿ ಬೆಳೆಸಿದ್ರೆ ಭಾರತೀಯ ಕ್ರಿಕೆಟ್ನ ಅನಘ್ರ್ಯ ರತ್ನವಾಗುವುದರಲ್ಲಿ ಎರಡು ಮಾತಿಲ್ಲ.
ಇನ್ನು ವೈಭವ್ ಸೂರ್ಯವಂಶಿ ಮನಸಾರೆ ಆಡುತ್ತಾನೆ. ಅದು ಜಿ.ಎಸ್. ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು ಅಂದು ನಾನು ಎಂಬಂತೆ ವೈಭವ್ ಸೂರ್ಯವಂಶಿ ಕಲ್ಮಶವಿಲ್ಲದ ಮನಸ್ಸಿನಿಂದ ಇಲ್ಲಿ ಆಡ್ತಾನೆ. ಆತ ಸಿಡಿಸುವ ಪ್ರತಿ ಸಿಕ್ಸರ್, ಬೌಂಡರಿಗಳು ಕವಿ ಹೃದಯದಿಂದ ಹೊರಹೊಮ್ಮುವ ಪದಗಳಂತೆ ಭಾಸವಾಗುತ್ತವೆ. ಅದು ನೋಡುವುದಕ್ಕೆ ಸ್ಫೋಟಗೊಂಡು ಹೊರಹೊಮ್ಮುವ ರನ್ಗಳಾದ್ರೂ ನೋಡುವ ಅಭಿಮಾನಿಗಳ ಮನಕ್ಕೆ ಮಧುರವಾದ ಗಾಯನವನ್ನು ಆಲಿಸಿದ ಅನುಭವವಾಗುತ್ತದೆ. ಅಷ್ಟೊಂದು ರಸವತ್ತಾಗಿದೆ ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ತಾಳ.
ಅಂದ ಹಾಗೇ, ವೈಭವ್ ಸೂರ್ಯವಂಶಿ ಎರ್ರಾಬಿರಿ ಬ್ಯಾಟ್ ಬೀಸುವ ಆಟಗಾರನಲ್ಲ. ಬೌಲರ್ಗಳ ಪ್ರತಿ ಎಸೆತಗಳನ್ನು ಮೈಂಡ್ ರೀಡ್ ಮಾಡಿಕೊಂಡು ದಿಟ್ಟ ಉತ್ತರ ನೀಡುವ ಕ್ರಿಕೆಟ್ ಲೋಕದ ಎಐ ಸಾಫ್ಟ್ವೇರ್. ಅಷ್ಟೇ ಅಲ್ಲ, ಸಾಂಪ್ರದಾಯಿಕ ಕ್ರಿಕೆಟ್ 2ಜಿ, 3ಜಿ, ಲೇವೆಲ್ನಲ್ಲಿದ್ರೆ ವೈಭವ್ನ ಬ್ಯಾಟಿಂಗ್ 5ಜಿಯನ್ನು ಮೀರಿಸುವಂತಿದೆ. ಸುನಾಮಿಯ ಪ್ರವಾಹದಂತೆ ರನ್ಗಳು ಹರಿದು ಬರುತ್ತಿವೆ. ಪ್ರಚಂಡ ಬೌಲರ್ಗಳ ಪಾಲಿಗೆ ಬಿಡಿಸಲಾಗದ ಒಗ್ಗಟ್ಟಿನಂತೆ ಬ್ಯಾಟ್ ಬೀಸುವ ವೈಭವ್ ಸೂರ್ಯವಂಶಿ ಕ್ರೀಸ್ನಲ್ಲಿದ್ದಷ್ಟು ಸಮಯ ರುದ್ರ ತಾಂಡವ ಗ್ಯಾರಂಟಿ..
ಅಷ್ಟಕ್ಕೂ ವೈಭವ್ ಸೂರ್ಯವಂಶಿ ಕೈಗೆ ಬ್ಯಾಟ್ ಬಂದಿದ್ದು ನಾಲ್ಕರ ಹರೆಯದಲ್ಲಿ. ವೈಭವ್ನ ಕ್ರಿಕೆಟ್ ಟ್ಯಾಲೆಂಟ್ ಅನ್ನು ಮೊದಲು ಗುರುತಿಸಿದ್ದು ಅಪ್ಪ ಸಂಜೀವ್ ಸೂರ್ಯವಂಶಿ. ಕ್ರಿಕೆಟ್ ಆಟಗಾರನಾಗಬೇಕು ಎಂಬ ಕನಸು ಕಂಡಿದ್ದ ಸಂಜೀವ್ ಅವರು ಬದುಕಿನಲ್ಲಿ ನಿರಾಸೆ ಅನುಭವಿಸಿದ್ರು. ರಂಗಭೂಮಿ ಮೇಲೆ ಆಸಕ್ತಿ ಹೊಂದಿದ್ದÀ ಸಂಜೀವ್, ಕ್ರಿಕೆಟ್ ಹಾಗೂ ಚಿತ್ರರಂಗದಲ್ಲಿ ತೋಡಗಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿದ್ರು. ಆದ್ರೆ ಅವರ ಕನಸು ಕನಸಾಗಿಯೆ ಉಳಿಯಿತ್ತು. ಆದ್ರೆ ಸಂಜೀವ್ ಅವರು ಮಗನ ಕ್ರಿಕೆಟ್ ಬದುಕನ್ನು ಹಸನಾಗಿಸಿದ್ರು. ಪ್ರತಿ ದಿನ ನಾಲ್ಕು ಗಂಟೆಗೆ ಎದ್ದು, ಟಿಫಿನ್, ಊಟ ರೆಡಿಮಾಡಿಕೊಂಡು 200 ಕಿಲೋ ಮೀಟರ್ ಸ್ಕ್ರಾಪಿಯೋದಲ್ಲಿ ಓಡಾಡಿಕೊಂಡು ಮಗನ ಭವಿಷ್ಯವನ್ನು ರೂಪಿಸಿದ್ರು. ಮಗನ ಬ್ಯಾಟಿಂಗ್ ತರಬೇತಿಗಾಗಿ ನಾಲ್ಕೈದು ನೆಟ್ಸ್ ಬೌಲರ್ಗಳನ್ನು ಆಯ್ಕೆಮಾಡಿಕೊಂಡಿದ್ದರು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ತನ್ನ ಜಮೀನನ್ನು ಕೂಡ ಮಾರಿದ್ದರು. ಸಂಜೀವ್ ಸೂರ್ಯವಂಶಿ ಅಂದು ಪಟ್ಟ ಶ್ರಮಕ್ಕೆ ಈಗ ಮಗ ಪ್ರತಿಫಲವನ್ನು ನೀಡುತ್ತಿದ್ದಾನೆ.
ಬಿಹಾರದ ಸಮಷ್ಠಿಪುರ ಜಿಲ್ಲೆಯ ಮಿಥಿಲಾ ಪ್ರಾಂತ್ಯದ ವೈಭವ್ ಸೂರ್ಯವಂಶಿಗೆ ಮೊದಲ ಕೋಚ್ ಪಾಟ್ನಾದ ಮನೀಶ್ ಒಜ್ಹಾ. ಪ್ರತಿ ದಿನ 600 ಎಸೆತಗಳಿಗೆ ಬ್ಯಾಟಿಂಗ್ ಮಾಡುತ್ತಿದ್ದ ಪುಟ್ಟ ಪೋರ ನೋಡ ನೋಡುತ್ತಿದ್ದಂತೆ ವಿಸ್ಮಯ ಬಾಲಕನಾಗಿದ್ದು ಮಾತ್ರ ಅಚ್ಚರಿಯೇ ಸರಿ. ಆದ್ರೆ ವೈಭವ್ ಅಪ್ಪ ಮತ್ತು ಕೋಚ್ ಹೇಳಿದ ಗೆರೆಯನ್ನು ದಾಟಲ್ಲ. ಯಾವುದು ಸರಿ, ಯಾವುದು ತಪ್ಪು, ಅದನ್ನು ಹೇಗೆ ನಿಭಾಯಿಸಬೇಕು ಎಂಬ ಪರಿಜ್ಞಾನವನ್ನು ಬೆಳೆಸಿಕೊಂಡಿದ್ದಾನೆ. ಮೈದಾನದ ಹೊರಗಡೆ ಮಕ್ಕಳಾಟವಾಡುತ್ತಿದ್ರೂ ಮೈದಾನಕ್ಕಿಳಿದಾಗ ಮಾತ್ರ ಗಾಂಭಿರ್ಯದ ನಡೆಯ ಮೂಲಕ ಸಿಂಹ ಘರ್ಜನೆ ಮಾಡುವ ತಾಕತ್ತನ್ನು ಮೈಗೂಡಿಸಿಕೊಂಡಿದ್ದಾನೆ.
ಕರ್ನಾಟಕದ ತಿಲಕ್ ನಾಯ್ಡು, ರಾಜಸ್ತಾನ ರಾಯಲ್ಸ್ ತಂಡದ ಮಾಜಿ ನಿರ್ದೇಶಕ ಝುಬಿನ್ ಭರೂಚ, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್ ಕಣ್ಣಿಗೆ ಬಿದ್ದ ನೀಲಿಗಣ್ಣಿನ ಪುಟಾಣಿ ವೈಭವ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ರಾಜಸ್ತಾನ ರಾಯಲ್ಸ್ ತಂಡದಲ್ಲಿ ಮೊಳಕೆ ಒಡೆದ ವೈಭವ್ ಸೂರ್ಯವಂಶಿ ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ವಿಶ್ವ ಕ್ರಿಕೆಟ್ನಲ್ಲಿ ಮಹಾ ಕಾವ್ಯ ಬರೆಯಲು ಹೊರಟಿರುವ ವೈಭವ್ ಸೂರ್ಯವಂಶಿಗೆ ಆಲ್ ದಿ ಬೆಸ್ಟ್.
ಕಡೆಯದಾಗಿ ಒಂದು ಮಾತು. ಕ್ರಿಕೆಟ್ ಆಟದ ಯಶಸ್ಸಿನ ಭರಾಟೆಯಲ್ಲಿ ವಿನೋದ್ ಕಾಂಬ್ಳಿ, ಪೃಥ್ವಿ ಶಾ ಆಗುವುದು ಬೇಡ… ಸಚಿನ್, ವಿರಾಟ್ ಕೊಹ್ಲಿ ಹಾದಿಯಲ್ಲಿ ಮುನ್ನಡೆದ್ರೆ ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತಿನಲ್ಲಿ ವೈಭವದ ದಿನಗಳನ್ನು ಎದುರುನೋಡಬಹುದು. ಯಾಕಂದ್ರೆ ಈ ಹುಡುಗ ಕ್ರಿಕೆಟ್ನ ಕ್ರಿಕೆಟ್ನ ಎಲ್ಲಾ ಗ್ರಾಮರ್ಗಳನ್ನು ಮೈಂಡ್ ಒಳಗೆ ಇನ್ಸ್ಟಾಲ್ ಮಾಡಿಕೊಂಡು ಬಂದಿರುವ ಅಪರೂಪದ ಎಐ ಬಾಲಕ.
ಸನತ್ ರೈ







