ರಾಮನಗರ: ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಹಿಂದೂ ಪೂಜೆಗೆ ಅವಕಾಶ ನೀಡಿದ ನ್ಯಾಯಾಧೀಶರ ವಿರುದ್ಧ ವಕೀಲನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದು, ಆಕ್ರೋಶ ವ್ಯಕ್ತವಾಗಿದೆ.
ರಾಮನಗರದ (Ramanagara) ಐಜೂರಿನ ವಕೀಲ ಚಾನ್ ಪಾಷಾ ಉತ್ತರ ಪ್ರದೇಶದ ವಾರಣಾಸಿ ಜಿಲ್ಲಾ ನ್ಯಾಯಾಧೀಶರ (Varanasi District Judge) ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾನೆ. ನಾಲಾಯಕ್, ಚಡ್ಡಿ ನ್ಯಾಯಾಧೀಶ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪೋಸ್ಟ್ ಮಾಡಿದ ವಕೀಲನ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ಪರ ಸಂಘಟನೆಗಳು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿವೆ.
ರೌಡಿಶೀಟರ್ ಹಿನ್ನೆಲೆ ಹೊಂದಿರುವ ಚಾನ್ ಪಾಷಾನನ್ನು ಗಡಿಪಾರು ಮಾಡುವಂತೆ ಹಿಂದೂ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಜ್ಞಾನವಾಪಿ ಮಸೀದಿಯಲ್ಲಿ ಪುರಾತತ್ವ ಇಲಾಖೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯಲ್ಲಿ ಮಸೀದಿ ನಿರ್ಮಾಣ ಆಗಿರುವುದು ಮಂದಿರದ ಮೇಲೆ ಎಂಬ ಸತ್ಯ ಬಯಲಾಗಿದೆ. ಬೆನ್ನಲ್ಲೇ ವಾರಣಾಸಿ ನ್ಯಾಯಾಲಯ ( District Court Varanasi) ಜ.31ರಂದು ನೀಡಿದ್ದ ಆದೇಶದಲ್ಲಿ ನೆಲ ಮಹಡಿಯಲ್ಲಿರುವ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ ನೀಡಿತ್ತು. ಹೀಗಾಗಿ ಆತ ಆಕ್ರೋಶ ವ್ಯಕ್ತಪಡಿಸಿದ್ದಾನೆ.