ಭವಿಷ್ಯದಲ್ಲಿ ಅರಣ್ಯಾಧಿಕಾರಿಯಾಗಬೇಕು ಎಂಬ ಅಪರೂಪದ ಕನಸು ಕಂಡಿರುವ ಗ್ರಾಮೀಣ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಹೈಸ್ಕೂಲ್ನ ವಿದ್ಯಾರ್ಥಿ ಅನುಷ್ ಎ.ಎಲ್ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಇಂದು 2019-20ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, 6 ಮಂದಿ ವಿದ್ಯಾರ್ಥಿಗಳು 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗ್ರಾಮೀಣ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಹೈಸ್ಕೂಲ್ನ ವಿದ್ಯಾರ್ಥಿ ಅನುಷ್ ಎ.ಎಲ್ ಕೂಡ ಒಬ್ಬರು. ಇವರು ಭವಿಷ್ಯದಲ್ಲಿ ಅರಣ್ಯಾಧಿಕಾರಿಯಾಗಬೇಕು ಎಂಬ ಅಪರೂಪದ ಕನಸು ಕಂಡಿರುವ ಹುಡುಗ.
ಎಲ್ಲರೂ ಡಾಕ್ಟರ್ ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವಾಗ ಅರಣ್ಯಾಧಿಕಾರಿಯಾಗಿ ಪರಿಸರ ಸಂರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು ಎಂಬ ವಿಭಿನ್ನ ಧ್ಯೇಯವನ್ನು ಹೊಂದಿದ್ದಾರೆ.
ಶಾಲೆಯಲ್ಲಿ ಗಮನವಿಟ್ಟು ಪಾಠ ಕೇಳುತ್ತಿದ್ದೆ ಮತ್ತು ಮನೆಯಲ್ಲಿ ಅದನ್ನು ಪುನರ್ ಅಭ್ಯಾಸ ಮಾಡಿಕೊಳ್ಳುತ್ತಿದೆ.
ಬಾಯಿ ಪಾಠ ಮಾಡದೆ ವಿಷಯಗಳನ್ನು ಅರ್ಥ ಮಾಡಿಕೊಂಡು ಮನಸ್ಸಿಗೆ ಇಳಿಸುತ್ತಿದ್ದೆ. ನಿದ್ದೆಗೆಟ್ಟು ಓದದೇ ಸರಿಯಾದ ಆರೋಗ್ಯಕರ ರೀತಿಯಲ್ಲಿ ಅಧ್ಯಯನ ನಡೆಸಿರುವುದು ನನ್ನ ಈ ಸಾಧನೆಯ ಗುಟ್ಟು ಎಂದಿರುವ
ಅನುಷ್ ಗ್ರಾಮೀಣ ಭಾಗದಲ್ಲಿ ಬೆಳೆದಿರುವ ನಾನು ಪರಿಸರದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ಐಎಫ್ಎಸ್ ಮಾಡಿ ಅರಣ್ಯಾಧಿಕಾರಿಯಾಗಬೇಕು ಎಂಬ ಗುರಿ ನನ್ನದು ಎಂದಿದ್ದಾರೆ.
ಕೊರೋನಾ ಲಾಕ್-ಡೌನ್ ಸಮಯದಲ್ಲಿ ಶಿಕ್ಷಕರು ಫೋನ್ ಕರೆ ಮಾಡಿ ಪ್ರೋತ್ಸಾಹ ನೀಡುತ್ತಿದ್ದರು ಎಂದಿರುವ ಬಳ್ಪದ ಎಣ್ಣೆಮಜಲು ನಿವಾಸಿ ಲೋಕೇಶ್ ಮತ್ತು ಉಷಾ ದಂಪತಿಗಳ ಪುತ್ರ ಅನುಷ್ ತನ್ನ ಈ ಯಶಸ್ಸಿಗೆ ಶಿಕ್ಷಕರು ಮತ್ತು ಹೆತ್ತವರ ಉತ್ತಮ ಸಹಕಾರ ಕಾರಣ ಎಂದಿದ್ದಾರೆ. ಯಾರಿಂದಲೂ ಓದುವಂತೆ ಒತ್ತಡ ಇರಲಿಲ್ಲ ಮತ್ತು ಪ್ರತಿದಿನ ಕೆಲ ಸಮಯ ಟಿವಿ ವೀಕ್ಷಿಸುತ್ತಿದ್ದೆ ಎಂದಿರುವ ಅನುಷ್ ಶಾಲೆಯಲ್ಲಿ ಮನಸಿಟ್ಟು ಪಾಠ ಕೇಳಿ ಮತ್ತು ಅದನ್ನು ಮನೆಯಲ್ಲಿ ಪುನರ್ ಅಭ್ಯಾಸ ಮಾಡಿಕೊಳ್ಳಿ ಎಂದು ಮುಂದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಟಿಪ್ಸ್ ನೀಡಿದ್ದಾರೆ.