ಹಲವಾರು ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ ಜ್ಯೋತಿಷಿ ಕೊರೊನಾಗೆ ಬಲಿ ?
ಅಹಮದಾಬಾದ್, ಮೇ 30: ಹಲವಾರು ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ ಸಹಸ್ರಮಾನದ ಜ್ಯೋತಿಷಿ ಎಂದೇ ಖ್ಯಾತಿ ಗಳಿಸಿದ ಬೇಜಾನ್ ದಾರುವಾಲ್ಲ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
90 ವರ್ಷದ ಜ್ಯೋತಿಷಿ ಬೆಜಾನ್ ದಾರುವಾಲ್ಲ ಅವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುಜರಾತ್ ನ ಗಾಂಧಿನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಬೆಜಾನ್ ದಾರುವಾಲ್ಲ ಅವರು ನ್ಯೂಮೋನಿಯಾ ಹಾಗೂ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕಳೆದ ವಾರ ಅವರ ಆರೋಗ್ಯ ಹದಗೆಟ್ಟಿತು. ಹಾಗಾಗಿ ಅವರ ಕುಟುಂಬ ಸದಸ್ಯರು ಅಹಮದಾಬಾದ್ ನ ಗಾಂಧೀನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಈ ವೇಳೆ ಅವರಿಗೆ ಕೊರೋನಾ ವೈರಸ್ ತಗುಲಿರುವುದು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
ಆದರೆ ಅವರ ಕುಟುಂಬ ಸದಸ್ಯರು ಇದನ್ನು ಅಲ್ಲಗಳೆದಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪ್ರಕಟಿಸಿರುವ ಕೊರೋನಾ ವೈರಸ್ ಪ್ರಕರಣಗಳ ಪಟ್ಟಿ ಯಲ್ಲಿ ಬೆಜಾನ್ ದಾರುವಾಲ್ಲ ಅವರ ಹೆಸರು ಕೂಡ ದಾಖಲಾಗಿದೆ. ಬೆಜಾನ್ ದಾರುವಾಲ್ಲ ಅವರ ಪುತ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದು ವೈದ್ಯರ ವರದಿ ಬಂದ ಬಳಿಕ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.
ಗಣೇಶನ ಭಕ್ತರಾಗಿದ್ದ ಜ್ಯೋತಿಷಿ ಬೆಜಾನ್ ದಾರುವಾಲ್ಲ ಗಣೇಶ್ ಸ್ಪೀಕ್ಸ್. ಕಾಂ ಮೂಲಕ ಅಸಂಖ್ಯಾತ ಓದುಗರನ್ನು ಗಳಿಸಿದ್ದರು. ಅನೇಕ ಸೆಲೆಬ್ರೆಟಿಗಳ ಭವಿಷ್ಯವನ್ನು ಕರಾರುವಕ್ಕಾಗಿ ನುಡಿದಿದ್ದ ಜ್ಯೋತಿಷಿ ಬೆಜಾನ್ ದಾರುವಾಲ್ಲ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ವರ್ಷಗಳ ಮೊದಲೇ ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲ ಸಂಜಯ್ ಗಾಂಧಿ ಅಪಘಾತ, ಇಂದಿರಾ ಗಾಂಧಿ ಹತ್ಯೆ, ಗುಜರಾತ್ ಭೂಕಂಪ, ಅಮಿತಾಬ್ ಬಚ್ಚನ್ ಸಿನಿ ಕೆರಿಯರ್ ಬಗ್ಗೆಯೂ ಭವಿಷ್ಯ ನುಡಿದಿದ್ದರು.
ಎಪ್ರಿಲ್ ತಿಂಗಳ ಪ್ರಾರಂಭದಲ್ಲಿಯೇ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಲಿದೆ ಎಂದು ಭವಿಷ್ಯ ನುಡಿದಿದ್ದ ಬೆಜಾನ್ ದಾರುವಾಲ್ಲ ಕೊರೊನಾದಿಂದಾಗಿ ಭಾರತದಲ್ಲಿ ಅರ್ಥಿಕ ಬಿಕ್ಕಟ್ಟಿನ ಸಮಸ್ಯೆ ಹೆಚ್ಚಾಗಲಿದೆ ಎಂದು ಎಚ್ಚರಿಸಿದ್ದರು. ಆದರೆ ಭಾರತ ಶೀಘ್ರದಲ್ಲೇ ಫೀನಿಕ್ಸ್ನಂತೆ ಕೊರೊನಾ ವೈರಸ್ ವಿರುದ್ಧ ಎದ್ದು ನಿಲ್ಲಲಿದೆ, ಭಾರತಕ್ಕೆ 2020 ಉತ್ತಮ ವರ್ಷವಲ್ಲ ಆದರೆ 2021 ಅತ್ಯುತ್ತಮ ವರ್ಷವಾಗಿದ್ದು ವಿಶ್ವದಲ್ಲೇ ಭಾರತ ಸೂಪರ್ ಪವರ್ ದೇಶವಾಗಿ ಬೆಳೆಯಲಿದೆ ಎಂದು ಭವಿಷ್ಯ ನುಡಿದಿದ್ದರು.
ದಾರುವಲ್ಲಾ ಅವರ ಆತ್ಮೀಯ ಗೆಳೆಯ ಬೆಹ್ರಮ್ ಮೆಹ್ತ ಅವರು ಬೆಜಾನ್ ದಾರುವಾಲ್ಲ ನಿಧನಕ್ಕೆ ಸಂತಾಪ ಸೂಚಿಸಿದ್ದು, ನಾನು ವಿಧಿವಶನಾದಾಗ ನನಗೆ ಅತ್ಯುತ್ತಮ ವಿದಾಯ ಕೋರಬೇಕು ಎಂದು ಅವರ ಅಂತಿಮ ಆಸೆಯನ್ನು ಹಲವಾರು ಬಾರಿ ನನ್ನಲ್ಲಿ ಹೇಳಿಕೊಂಡಿದ್ದರು. ಆದರೆ ಕೊರೊನಾ ವೈರಸ್ ನಿಂದಾಗಿ ಅವರ ಕೊನೆಯ ಆಸೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ ಎಂದು ಹೇಳಿದ್ದಾರೆ. ಗಣೇಶ್ ಸ್ಪೀಕ್ಸ್ .ಕಾಂ ಸಂಸ್ಥಾಪಕ ಹೇಮಂಗ್ ಪಂಡಿತ್ ಮಾತನಾಡಿ ಬೆಜಾನ್ ದಾರುವಲ್ಲ ಅವರು ಇನ್ನಿಲ್ಲ ಎಂಬ ವಾರ್ತೆಯನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಅವರ ಸ್ಥಾನ ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬೆಜಾನ್ ದಾರುವಲ್ಲ ಅವರು ಭಾರತ ನಿರ್ಮಾಣ್ ಸಹಸ್ರಮಾನದ ಜ್ಯೋತಿಷಿ ಪ್ರಶಸ್ತಿ, ಭಾರತೀಯ ಜ್ಯೋತಿಷಿ ಫೆಡರೇಶನ್ನಿಂದ ಮಹಾಮಹೋಪಾಧ್ಯಾಯ ಪ್ರಶಸ್ತಿ, ರಷ್ಯಾ ಅಸ್ಟ್ರಾಲಜಿ ಸೊಸೈಟಿಯಿಂದ ಅತ್ಯುತ್ತಮ ಜ್ಯೋತಿಷಿ, ಉತ್ತರಖಂಡ ಮುಖ್ಯಮಂತ್ರಿಯಿಂದ ಜೀವನಶ್ರೇಷ್ಠ ಸಾಧನೆ ಪ್ರಶಸ್ತಿ, ಬಾಬಾ ಸಾಹೇಬ್ ಅಂಬೇಡ್ಕರ್ ನೋಬೆಲ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.








