ಬೆಂಗಳೂರು: ನಾಯಿ ಬೊಗಳಿದ್ದಕ್ಕೆ ನೆರೆಯವರು ಮಾಲೀಕರ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಇಲ್ಲಿಯ ಪಟ್ಟೇಗಾರಪಾಳ್ಯದ ಮುನೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ. ಪಕ್ಕದ ಮನೆಯವರು ನಾಯಿ ಮಾಲೀಕರೊಂದಿಗೆ ಜಗಳ ಮಾಡಿದ್ದಲ್ಲದೇ, ಅವರ ಮಗಳ ಮೇಲೆ ಕೂಡ ಹಲ್ಲೆ ನಡೆಸಿ ಎಳೆದಾಡಿರುವ ಪ್ರಸಂಗ ನಡೆದಿದೆ. ಈ ಕುರಿತು ನಾಯಿ ಮಾಲೀಕರಾದ ಶಾಲಿನಿ ದೂರು ಸಲ್ಲಿಸಿದ್ದಾರೆ.
ಪಕ್ಕದ ಮನೆಯವರು ರಾತ್ರಿ ತಡವಾಗಿ ಸ್ನೇಹಿತರೊಂದಿಗೆ ಬಂದಿದ್ದಾರೆ. ಆಗ ನಾಯಿ ಬೊಗಳಿದೆ. ಅಷ್ಟಕ್ಕೇ ಕೋಪಗೊಂಡ ಶಂಕರ್ ಹಾಗೂ ಅವರ ಸ್ನೇಹಿತರು ನಾಯಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಕಾಲೇಜು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ.
ಅಪ್ಪನ ರಕ್ಷಣೆಗೆ ಬಂದ ಕಾಲೇಜು ವಿದ್ಯಾರ್ಥಿನಿ ಮಾನಸಿಕವಾಗಿ ಕುಸಿದಿದ್ದು, ಮಹಿಳಾ ಆಯೋಗದ ಅಧ್ಯಕ್ಷರಿಗೆ ಅಳುತ್ತಾ ಆಡಿಯೋ ಕಳುಹಿಸಿದ್ದಾರೆ. ಈ ಕುರಿತು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.