ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ತಟಾಕ ಅನಂತ ಪದ್ಮನಾಭ ಕ್ಷೇತ್ರದ ‘ಬಬಿಯ’ ಸಸ್ಯಾಹಾರಿ ಮೊಸಳೆಯ ಅಂತೆ-ಕಂತೆಗಳ ಕುರಿತಂತೆ ನೀವರಿಯದ ಕೆಲ ಸತ್ಯ ಸಂಗತಿಗಳು:

Shwetha by Shwetha
October 28, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ತಟಾಕ ಅನಂತ ಪದ್ಮನಾಭ ಕ್ಷೇತ್ರದ ‘ಬಬಿಯ’ ಸಸ್ಯಾಹಾರಿ ಮೊಸಳೆಯ ಅಂತೆ-ಕಂತೆಗಳ ಕುರಿತಂತೆ ನೀವರಿಯದ ಕೆಲ ಸತ್ಯ ಸಂಗತಿಗಳು: vegetarian crocodile Babia

ಆಗಿನ್ನೂ ಜಾಗತೀಕರಣದ ಜೊತೆಗೆ ಇತರ ‘ಕರಣ’ಗಳು ಕಿರಣಗಳಿಗೊಡ್ಡಿಕೊಳ್ಳದ ಕಾಲ. ಸಂಪರ್ಕ ಸೇತುವಂತೂ ಇಲ್ಲವೇನೋ ಅನಿಸುವಷ್ಟು ಕ್ಷೀಣವಾಗಿದ್ದ ಸಮಯ. vegetarian crocodile Babia

Related posts

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

July 4, 2026
ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

July 4, 2026

ಜನಸಂಖ್ಯೆಯೂ ಊರೊಳಗೆ ವಿರಳವೇ ಆಗಿತ್ತು. ಈ ಎಲ್ಲವುಗಳ ನಡುವೆಯೂ ನನ್ನೂರು ‘ಅನಂತಪುರ’ ಸ್ವಚ್ಚಂದ ಪ್ರಕೃತಿಯ ನಡುವೆ ನಿಷ್ಕಲ್ಮಷವಾಗಿ ಪಸರಿ ನಿಂತಿತ್ತು.ಕೇರಳದ ಉತ್ತರ ಭಾಗದ ತುತ್ತ ತುದಿಯು ಆ ರಾಜ್ಯಕ್ಕೆ ಅದರ ಗಡಿಯ ಮುಕ್ತಾಯವಾದರೆ, ಅದೇ ಗಡಿರೇಖೆಯು ಕಾಸರಗೋಡಿನ ಗಡಿನಾಡ ಕನ್ನಡಿಗರಿಗೆ ಕನ್ನಡದ ಭಾವಸ್ಥಿತಿಯೊಳಕ್ಕೆ ಇಳಿಯಲಿರುವ ಆರಂಭದ ರಹದಾರಿ.

vegetarian crocodile Babia

‘ಕಡುಶರ್ಕರ ಪಾಕ’ದಲ್ಲಿ ರೂಪುಗೊಂಡು ‘ಶ್ರೀದೇವಿ-ಭೂದೇವಿ’ ಸಹಿತ ಸರೋವರದ ಮಧ್ಯದಲ್ಲಿ ನೆಲೆಸಿರುವ ‘ಶ್ರೀ ಅನಂತಪದ್ಮನಾಭ ಸ್ವಾಮಿ’ಯ ಜೊತೆಗೆ ಕ್ಷೇತ್ರ ರಕ್ಷಕ ‘ಬಬಿಯ’ ಇಲ್ಲಿನ ಮುಖ್ಯ ಆಕರ್ಷಣೆ. ಇಲ್ಲೇ ಬಿಲ್ವಮಂಗಲ ಸ್ವಾಮಿಯವರ ಗುಹೆಯೂ ಇದೆ. ಶ್ರೀ ಅನಂತಪದ್ಮನಾಭ ಸ್ವಾಮಿಯು ಇದೇ ಗುಹೆಯ ಮೂಲಕ ‘ಅನಂತಪುರದಿಂದ ತಿರುವನಂತಪುರ’ಕ್ಕೆ ಹೋಗಿ ಅಲ್ಲಿ ಶಯನರಾದರು ಎಂಬ ಪ್ರತೀತಿಯೂ ಇದೆ.

“ಈ ಕ್ಷೇತ್ರವು ಸರಿ ಸುಮಾರು 9-10 ನೇ ಶತಮಾನಕ್ಕೆ ಸೇರಿದ್ದು” ಎಂದು ಇತಿಹಾಸ ತಜ್ಞ ಉಡುಪಿಯ ಪಿ. ಗುರುರಾಜ ಭಟ್ ಅಭಿಪ್ರಾಯ ಪಟ್ಟಿರುತ್ತಾರೆ. ಅವರು ಬರೆದ ‘Antiquities of South Kanara’ ಪುಸ್ತಕದಲ್ಲಿ ಕಾಸರಗೋಡು ಜಿಲ್ಲೆಯನ್ನೂ ದಕ್ಷಿಣ ಕನ್ನಡ ವ್ಯಾಪ್ತಿಯೊಳಗೆ ಸೇರಿಸಿ ವಿಷಯವನ್ನು ಪ್ರಸ್ತಾಪಿಸಿರುತ್ತಾರೆ. ಕ್ಷೇತ್ರಕ್ಕೆ ಹೊಂದಿಕೊಂಡೇ ಇರುವ ನನ್ನ ಹಿರಿಕರಿಂದ ಬೆಳಗಿ ಬಾಳಿದ ‘ಅನಂತಪುರ ದೊಡ್ಡ ಮನೆ’ಯ ಮೂಲ ಪಂಚಾಂಗವು ಕೂಡ ‘9-10 ನೇ ಶತಮಾನಕ್ಕೆ ಸೇರಿದ್ದೆಂದೂ ಮನೆಗೆ ಭೇಟಿಯನ್ನಿತ್ತ ಸಂದರ್ಭದಲ್ಲಿ ಅವರು ಅಭಿಪ್ರಾಯಿಸಿದ್ದಾರೆ.

ಆದಿಯಿಂದ ಇಪ್ಪತ್ತನೇ ಶತಮಾನ ಅಂದರೆ 1994ರವರೆಗೂ ಸರೋವರ ಕ್ಷೇತ್ರದ ‘ಆನುವಂಶಿಕ ಮೊಕ್ತೇಸರ’ರಾಗಿ ನನ್ನ ಮನೆಯ ಹಿರಿಕರು ತಮ್ಮ ಕೈಯಲ್ಲಾದ ಸೇವೆಯನ್ನು ಶ್ರೀ ಸ್ವಾಮಿಗೂ ಕ್ಷೇತ್ರಕ್ಕೂ ಮಾಡುತ್ತಾ ಬಂದವರು. ಕೇರಳ ಸರ್ಕಾರದಿಂದ ‘ವಾರ್ಷಿಕ ರೂ. 400 ತಸ್ತಿಕ ಹಣ’ವು ದೇವಸ್ಥಾನದ ಖರ್ಚಿಗೆಂದು ಆನುವಂಶಿಕ ಮೊಕ್ತೇಸರರಾಗಿದ್ದ ನಮಗೆ ದೊರೆಯುತ್ತಿತ್ತು. ಅದು ಯಾವುದಕ್ಕೂ ಸಾಲುತ್ತಿರಲಿಲ್ಲವಾದ್ದರಿಂದ ನಮ್ಮ ಕೈಯಿಂದಲೇ ಕಾಸು ಹಾಕಿ ವಿವಿಧ ಹಬ್ಬ-ಹರಿದಿನಗಳನ್ನು ದೇವಳದಲ್ಲಿ ಆಚರಿಸುತ್ತಿದ್ದೆವಲ್ಲದೆ, ದೇವಳದ ಅರ್ಚಕರ ಊಟ-ವಸತಿಯ ಹೊಣೆಯನ್ನೂ ನಾವೇ ಹೊತ್ತುಕೊಂಡಿದ್ದೆವು. ಅವರ ಊಟ-ವಸತಿ ನಮ್ಮ ಮನೆಯಲ್ಲಿಯೇ ಜೊತೆಗೆ ಅವರಿಗೆ ಸಂಬಳವನ್ನೂ ನಾವೇ ಕೊಡುತ್ತಿದ್ದೆವು. ತದ ನಂತರ ಕೇರಳ ರಾಜ್ಯದ ‘ದೇವಸ್ವಮ್ ಬೋರ್ಡ್ ಅಡಿಯಲ್ಲಿ ದೇವಸ್ಥಾನವು ಬರಲು ಮುಂದೆ ದೇವಸ್ವಮ್ ಬೋರ್ಡ್ ಕ್ಷೇತ್ರದ ಎಲ್ಲಾ ನಿತ್ಯದ ಆಗುಹೋಗುಗಳನ್ನು ನೋಡಿಕೊಳ್ಳುತ್ತಾ ಆಡಳಿತವನ್ನು ನಡೆಸಲು ತೊಡಗಿತು.

ಅನಂತಪುರದ ಪಕ್ಕದಲ್ಲಿರುವ ‘ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ’ ಎಂಬ ವಾಣಿಯ-ಗಾಣಿಗ ಸಮುದಾಯ ಕ್ಷೇತ್ರದ ಆನುವಂಶಿಕ ಯಜಮಾನಿಕೆಯೂ ನಮ್ಮ ಮನೆಯವರದ್ದೇ. ಪ್ರಸಕ್ತ ನನ್ನ ತಂದೆ ‘ಶ್ರೀಕೃಷ್ಣಯ್ಯ ಅನಂತಪುರ’ ಅವರು ಕ್ಷೇತ್ರದ ಆನುವಂಶಿಕ ಯಜಮಾನರಾಗಿರುತ್ತಾರೆ. ‘ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ’ಯ ಬಾಳು ಬಂಡಾರವಿರುವುದು ಕೂಡ ನಮ್ಮ ಮನೆಯಲ್ಲೇ. ಅಂತೆಯೇ ನಮ್ಮ ಮನೆಯ ‘ಧೂಮಾವತಿ’ ಹಾಗು ‘ವಿಷ್ಣುಮೂರ್ತಿ’ ದೈವಗಳ ಬಾಳು ಬಂಡಾರವೂ ಇದೆ. ಇವಿಷ್ಟು ಹಿನ್ನಲೆಯೊಂದಿಗೆ ಇದೀಗ ವಿಷಯಕ್ಕೆ ಬರುತ್ತೇನೆ.

ಭೂಮಿ ಆಕಾಶವನ್ನು ಒಂದು ಮಾಡುವಂತೆ ‘ಧೋ…’ಎಂದು ಸುರಿಯುವ ಮಳೆಯ ಜೊತೆಗೆ ಮಿಂಚಿನ ಬೆಳಕ ಹಬ್ಬ, ಗುಡುಗಿನ ಢಮರು ನಾದವು ಸರ್ವೇ ಸಾಮಾನ್ಯವಾಗಿದ್ದಂತಹ ಕಾಲಘಟ್ಟವದು. ವಿದ್ಯುತ್ತೀಕರಣವಿನ್ನೂ ಎಲ್ಲಾ ಕಡೆಗೂ ಹಬ್ಬಿರಲಿಲ್ಲ. ಟಾರ್ಚ್ ಬೆಳಕೇ ದಾರಿ ದೀಪವಾಗಿದ್ದ ಕಾಲ. ನಿಪ್ಪೋ,ಫಿಲಿಪ್ಸ್ ಬ್ಯಾಟರಿಗಳೇ ನಂಬಿಕೆಗೆ ಅರ್ಹವಾಗಿದ್ದವು. ಅಂತಹ ದಿನದಲ್ಲಿ ರಜೆಯ ಒಂದು ದಿನ ಕುಂಬಳೆ ಪೇಟೆಯಲ್ಲಿ ಪಪ್ಪ ನಡೆಸುತ್ತಿದ್ದ ‘ಸಂತೋಷ ಸಾಹಿತ್ಯ ಸದನ’ಕ್ಕೆ ಪಪ್ಪನ ಜೊತೆಗೆ ನಾನೂ ಹೋಗಿದ್ದೆ. ಹೆಬ್ಬಾರರ ಹೋಟೆಲಿನಲ್ಲಿ ನನ್ನಿಷ್ಟದ ತಿಂಡಿಯನ್ನು ತಿಂದು ಬೆಳಕು ಕತ್ತಲೆಯತ್ತ ಜಾರುತ್ತಲೇ ನಾವು ಮನೆಯತ್ತ ಹೆಜ್ಜೆ ಹಾಕಲು ಅನುವಾದೆವು.

ಊಹಿಸಲೂ ಅಸಾಧ್ಯವಾದ ಮಳೆಗಾಲದ ಅಬ್ಬರ. ಕುಂಬಳೆ ಪೇಟೆಯಿಂದ ಬಸ್ಸು ಹಿಡಿದು ನಾಯ್ಕಾಪು ಬಸ್ ತಾಣದಲ್ಲಿ ಇಳಿದು, ಪಪ್ಪನ ಕೈಯೊಳಗೆ ನನ್ನ ಪುಟ್ಟ ಕೈಯನ್ನಿಟ್ಟು ರಭಸದಿಂದ ಬೀಸುತ್ತಿದ್ದ ಮಳೆಗೆ ನನಗಿಂತಲೂ ದೊಡ್ಡ ಗಾತ್ರದ ಕೊಡೆಯನ್ನು ಹಿಡಿದುಕೊಂಡು ಹೆಜ್ಜೆಯನ್ನಿಡುತ್ತಿದ್ದೆ.ಗಾಳಿ ಮಳೆಯ ಅಂದಿನ ವೈಭವವನ್ನು ಅನುಭವಿಸಿದವರಿಗೆ ಮಾತ್ರ ಅದರ ಸೊಬಗು ಮತ್ತದರ ರುದ್ರ ರಮ್ಯತೆಯು ಗೊತ್ತಿರಲು ಸಾಧ್ಯ. ನಾಯ್ಕಾಪುವಿನಿಂದ ಅನಂತಪುರದ ನಮ್ಮ ಮನೆಗೆ ಡಾಂಬರು ಕಾಣದ ಕಲ್ಲು ಮಣ್ಣಿನ ಉಬ್ಬು ತಗ್ಗು ಹೊಂಡಗಳ ರಸ್ತೆಯಿತ್ತು. ಮನೆಯನ್ನು ತಲುಪಲಿದ್ದ ಹಾದಿಯುದ್ದಕ್ಕೂ ಜನವಾಸವೇ ಇದ್ದಿರಲಿಲ್ಲ. ಹಾಗಿರಲು ಪಪ್ಪನ ಕೈಯಲ್ಲಿನ ಟಾರ್ಚ್ ನಮಗೆ ದಾರಿದೀಪ. ಉಸಿರ ಮೇಲೆ ಉಸಿರನ್ನೆಳೆದುಕೊಳ್ಳುತ್ತಾ ಉಬ್ಬಿದ ರಸ್ತೆಯನ್ನು ಏರಿ ಇಳಿದು ನಿಟ್ಟುಸಿರು ಬಿಡುತ್ತಿರುವಾಗಲೇ ಟಾರ್ಚ್ ಕೈ ಕೊಟ್ಟೇ ಬಿಟ್ಟಿತು. “ಪಪ್ಪಾ..ಎಂದು ಕೂಗಿದೆ”. “ಇದ್ದೇನಲ್ಲ ಭಯವೇತಕೆ?” ಎಂಬ ಮಾತೇ ಧೈರ್ಯ ರೂಪಕವಾಗಿ (ಇಂದಿಗೂ) ಪಪ್ಪನ ಶೌರ್ಯದೊಳಕ್ಕೆ ನಾನೂ ಇಳಿದುಬಿಟ್ಟೆ. ಕಾಣದ ದಾರಿಗೆ ಮಿಂಚೇ ಬೆಳಕಾಯಿತು. ಕಣ್ಣಳತೆಯಲ್ಲಿ ಕಾಣುವ ಮನೆಯ ಉಪ್ಪರಿಗೆಯ ಹಂಚು ಮಿಂಚ್ವೆಳಕಿಗೆ ಬೆಳಗಿ ಮಾಯವಾಗುತ್ತಿತ್ತು.

vegetarian crocodile Babia

ಹರನ ಮುಡಿಯಿಂದ ಚಿಮ್ಮಿದ ಮಳೆಯು ಸುತ್ತಲಿನ ಗುಡ್ಡದ ಮೇಲೆ ಬಿದ್ದು ಹರಿಯ ಪಾದಕ್ಕೆ ಹರಿಯುವ ಮೊದಲು ತೊರೆಯಾಗಿ, ಝರಿಯಾಗಿ ಹರಿಹರಿದು ಹೋಗುವಾಗ ಮನೆಯ ಪಕ್ಕದಲ್ಲಿರುವ ‘ಚೆಂಬಟೆ ಕೆರೆ’ಯೂ ತುಂಬಿ ತುಳುಕಿ ಹರಿಯುತಿತ್ತು. ರಸ್ತೆ ಮತ್ತು ಕೆರೆಯ ಮಧ್ಯೆ ಒಂದು ಆಳವಾದ ಹರಿವಿದೆ. ಗುಡ್ಡದ ಒಂದು ಭಾಗದಿಂದ ಹರಿದು ಬರುವ ಮಳೆನೀರು ರಭಸದಿಂದ ಆಳವಾದ ಆ ಹರಿವಿನ ಮೂಲಕ ಸಾಗಿ ಚೆಂಬಟೆ ಕೆರೆಯನ್ನು ಸೇರಿ ಅಲ್ಲಿಂದ ಮುಂದಕ್ಕೆ ಪಯಣಿಸುವುದು ಅದರ ಸಹಜ ನಿಯಮ. ಅಂತಹ ಆಳವಾದ ಹರಿವನ್ನು ನಾವಂದು ದಾಟಬೇಕಿತ್ತು. ಪಪ್ಪ ತನ್ನ ಒಂದು ಕೈಯಲ್ಲಿ ನನ್ನನ್ನು ಎತ್ತಿಕೊಂಡು ಜೊತೆಗೆ ಅವನ ಚೀಲವನ್ನೂ, ಇನ್ನೊಂದು ಕೈಯಲ್ಲಿ ಕೊಡೆಯನ್ನೂ ಹಿಡಿದುಕೊಂಡು ಆಳವಾದ ಹರಿವನ್ನು ದಾಟುವಾಗ ನೀರಿನ ರಭಸಕ್ಕೆ ತೂಗಾಡುತ್ತಲೇ ಸಂಭಾಳಿಸಿಕೊಂಡು, ನೀರಿನಲ್ಲಿ ಮುಳುಗಿದ್ದ ಕಾಣದ ಭೂಮಿಯ ಮೇಲೆ ಅಂದಾಜಿಗೆ ಪಾದವನ್ನಿಡುತ್ತ, ಎಲ್ಲಾ ಭಾರವನ್ನು ಹೊತ್ತುಕೊಂಡು, ಕೈಕೊಟ್ಟ ಟಾರ್ಚಿನ ಅನುಪಸ್ಥಿತಿಯೊಳಗೆ ಆಗೊಮ್ಮೆ ಈಗೊಮ್ಮೆ ಆಗಸದಲ್ಲಿ ಮೂಡಿ ಮರೆಯಾಗುವ ಮಿಂಚ್ವೆಳಕಿನ ಸಹಾಯದೊಂದಿಗೆ ಆಳವಾದ ರಭಸದ ಹರಿವನ್ನು ದಾಟಿದೆವು.

ಕೂಗಳತೆಯಲ್ಲಿ ಕಾಣುವ ಮನೆ ಮತ್ತದಕ್ಕೆ ತಾಗಿಕೊಂಡೇ ಇರುವ ಶ್ರೀ ಅನಂತಪದ್ಮನಾಭ ಸ್ವಾಮಿಯ ದೇವಳ. ಸಂಜೆಯ ಪೂಜೆ ಮುಗಿದ ನಂತರದ ದೇವಳದ ಚಾಕರಿಯ ಸದ್ದು ಮಳೆಯ ನಡುವೆಯೂ ಮೆಲ್ಲನೆ ಕೇಳಿ ಬರುತ್ತಿತ್ತು. ಎಣ್ಣೆಯಲ್ಲಿ ಸಣ್ಣಗೆ ಉರಿಯುವ ದೇವಳದ ದೀಪವು ದೂರದಿಂದ ಮಿಣುಕು ಹುಳ ಮಿನುಗಿದಂತೆ ಕಾಣುತ್ತಿತ್ತು. ಕಡಿದಾದ ದಾರಿಯಲ್ಲಿ ಹೆಜ್ಜೆ ಇಡಬೇಕಾದ ಸಮಯವೀಗ. ನಂಬಿದ್ದ ಕೈದೀಪವು ಜೊತೆಯಲ್ಲಿದ್ದೂ ಇಲ್ಲದಂತೆ. ಮಿಂಚ್ವೆಳಕಿಗೆ ಸುಮಾರಾಗಿ ಕಾದು ಅದೂ ಕಾಣದಿರಲು ಸುರಿವ ಧಾರಾಕಾರ ಮಳೆಯು ದಪ್ಪದ ಪರದೆಯಂತಾಗಲು ಮುಂದಿರುವುದೇ ಕಾಣುತ್ತಿರಲಿಲ್ಲ. ಆ ಗಳಿಗೆಯಲ್ಲಿ ಪಪ್ಪಾ ನನ್ನ ಕೈ ಹಿಡಿದು ಇನ್ನೇನು ಮುಂದಡಿ ಇಡಬೇಕು ಎನ್ನುವಷ್ಟರಲ್ಲಿ “ಅಣ್ಣಾ ಬಬಿಯಾ…” ಎನ್ನುವ ಕೂಗು ಎದುರಿನಿಂದ ಹೊರಟಿತು. ಆ ಕೂಗಿಗೆ ಪ್ರತಿಯಾಗಿ ‘ಚೆಂಬಟೆಕೆರೆ’ಯೊಳಕ್ಕೆ ಭಡಾರನೆಂದು ಬಿದ್ದ ಸದ್ದು ಹೊರಡಲು ನಾವರೆಕ್ಷಣ ಸ್ತಂಭೀಭೂತರಾದೆವು !

ಆಗಿದ್ದಿಷ್ಟೇ…ದಾರಿ ಮಧ್ಯೆ ಅನಂತಪುರ ಕ್ಷೇತ್ರ ರಕ್ಷಕ ‘ಬಬಿಯ’ ಮಳೆಯ ಸೊಬಗನ್ನು ಆಸ್ವಾದಿಸುತ್ತಾ ಅಡ್ಡಲಾಗಿ ಮಲಗಿದ್ದ. ನಮ್ಮ ಇನ್ನೊಂದೇ ಹೆಜ್ಜೆ ಅವನ ಮೇಲೆಯೇ ಇಡುವುದಿತ್ತು. ಆದರೆ ದೇವಸ್ಥಾನಕ್ಕೆ ಹೋಗಿ ತನ್ನ ಮನೆಯತ್ತ ತೆರಳುತ್ತಿದ್ದ ನೆರೆಹೊರೆಯ ‘ಚಂದ್ರಶೇಖರ’ನ ಕೈ ಬೆಳಕಿಗೆ ‘ಬಬಿಯ’ ಕಂಡಿದ್ದರ ಜೊತೆಗೆ ನಮ್ಮನ್ನೂ ಕಂಡಿದ್ದರ ಪರಿಣಾಮ “ಅಣ್ಣಾ ಬಬಿಯಾ…” ಎಂಬ ಅವನ ಕೂಗು ಬಬಿಯನಿಗೆ ಕೇಳಿದ್ದೇ ಆತ ನಮಗೆ ದಾರಿಯನ್ನು ಕಲ್ಪಿಸಿಕೊಟ್ಟಿದ್ದ.

ಎರಡನೇ ಮಹಾಯುದ್ದದ ದಿನಗಳವು. ಮಿಲಿಟರಿ ಕ್ಯಾಂಪ್ (ನಾಡ ಭಾಷೆಯಲ್ಲಿ ಮಿಲಿಟರಿ ಬ್ಲಾಕ್) ‘ಕುಂಬಳೆ, ಪೆರ್ಣೆ, ಕಣ್ಣೂರು, ಸೀತಂಗೋಳಿ ನಾಯಿಕಾಪು, ಅನಂತಪುರ’ಗಳಲ್ಲಿತ್ತು. ಆದ್ದರಿಂದ ನಮ್ಮೂರಿನಲ್ಲಿ ನಮಗಿರಲು ಸಾಧ್ಯವಿರಲಿಲ್ಲ. ನಮ್ಮ ಮನೆಯನ್ನು ಮಿಲಿಟರಿಯವರು ತಮ್ಮದ್ದನ್ನಾಗಿಸಿಕೊಂಡಿದ್ದರು. ನನ್ನ ಹಿರಿಯರನ್ನು ಅನಂತಪುರದಲ್ಲಿ ನೆಲೆಸಲು ‘ಮಿಲಿಟರಿ’ ಅನುವು ಮಾಡಿ ಕೊಟ್ಟಿರಲಿಲ್ಲ. ಹಾಗಾಗಿ ನನ್ನವರು ಪಕ್ಕದ ‘ಮಧೂರು’ ಗ್ರಾಮಕ್ಕೆ ಹೋದರು. 1946 ರಿಂದ 1948 ರವರೆಗೆ ನನ್ನ ಹಿರಿಯರು ಮಧೂರು ಗ್ರಾಮ ಚಾವಡಿಯ ಪಕ್ಕದಲ್ಲಿ ಮನೆಯೊಂದನ್ನು ನಿರ್ಮಿಸಿ ವಾಸ್ತವ್ಯವನ್ನು ಹೂಡಿದ್ದರು. ನನ್ನಜ್ಜ ದಿ.ಅನಂತಪುರ ನಾರಾಯಣಯ್ಯ ಮಧೂರು ಗ್ರಾಮದ ಪಟೇಲರೂ ಆಗಿದ್ದರು.

1946 ಕ್ಕಿಂತಲೂ ಮೊದಲು ನಮ್ಮೂರಿಗೆ ಅಂದೊಮ್ಮೆ ಬಂದ ‘ತಹಶೀಲ್ದಾರ’ರಿಗೆ ಬಬಿಯನನ್ನು ತೋರಿಸಲು ಕೆರೆಯತ್ತ ಅಜ್ಜ ಅವರನ್ನು ಕರೆದುಕೊಂಡು ಹೋದರು. “ಒಂದು ನಿರ್ದಿಷ್ಟ ದಿಕ್ಕಿನಿಂದ ಅಜ್ಜ ‘ಬಬಿಯ…’ ಎಂದು ಕರೆದಾಗ ಬಂದ ಮೊಸಳೆಯನ್ನು ನೋಡಿದ ತಹಶೀಲ್ದಾರರು ಬಹುಶ ಅಭ್ಯಾಸ ಬಲದಿಂದ ಬಂದಿರುವ ಸಾಧ್ಯತೆ ಇರಬಹುದೆಂದೂ, ಬೇರೆ ಬೇರೆ ದಿಕ್ಕುಗಳಿಂದ ಕರೆಯಿರಿ ಎಂದು ಅಜ್ಜನ ಬಳಿ ಕೇಳಿಕೊಂಡರು. ಅದರಂತೆ ನಾಲ್ಕು ದಿಕ್ಕುಗಳಿಂದಲೂ ಅಜ್ಜ ಬಬಿಯ… ಎಂದು ಕೂಗಿದಾಗಲೂ ಬಬಿಯ ಬರುವುದನ್ನು ಕಂಡ ತಹಶೀಲ್ದಾರರಿಗೆ ಇದು ಅಭ್ಯಾಸ ಬಲದಿಂದಲಲ್ಲ ಎನ್ನುವುದು ಖಚಿತವಾಗಿ ‘ಕರೆದಾಗ ಬರುವ ಮೊಸಳೆ’ಯೆಂದು ಅವರಿಗೆ ಮನವರಿಕೆಯಾಯಿತು. ನಂತರ ಅವರ ಸಮ್ಮುಖದಲ್ಲೇ ಅಜ್ಜ ಕೆಲಸದಾಳಿಗೆ ಕೋಳಿಯನ್ನು ಕೊಡಲು ಹೇಳಿದರು. ಕೆಲಸದಾಳು ಕೊಟ್ಟ ಕೋಳಿಯನ್ನು ತೆಗೆದುಕೊಂಡು ಬಬಿಯ ತನ್ನ ಬಿಡಾರಕ್ಕೆ ಹೋದ ಘಟನೆಯನ್ನು ನೋಡಿ ಮೆಚ್ಚಿ ಅಜ್ಜನಿಗೆ ಅಭಿನಂದನಾ ಪತ್ರವನ್ನೂ ತಹಶೀಲ್ದಾರರು ಬರೆದಿದ್ದರು”.ಕಾಲದೊಳಗೆ ಪತ್ರವುರುಳಿ ಅಜೀರ್ಣಗೊಂಡ ಪರಿಣಾಮ ಇದೀಗ ಅಭಿನಂದನಾ ಪತ್ರ ಕೇವಲ ನೆನಪು ಮಾತ್ರ.

ಎರಡು ವರ್ಷ ನನ್ನ ಹಿರಿಕರು ಊರಲ್ಲಿ ಇಲ್ಲದ ವೇಳೆಯಲ್ಲಿ ಕರೆದಾಗ ಮೊಸಳೆ ಬರುತ್ತದೆನ್ನುವುದನ್ನು ಅರಿತುಕೊಂಡಿದ್ದ ‘ಮಿಲಿಟರಿ ಅಧಿಕಾರಿ’ಯು ಬಬಿಯನನ್ನು ಕೂಗಿದ್ದೇ ಅದು ರುಮ್ಮನೆಂದು ಬರಲು ಗುಂಡಿನಿಂದ ಹೊಡೆದು ಕೊಂದು ಶಿಕಾರಿಯ ಮಜಾವನ್ನು ಅನುಭವಿಸಿದ್ದ. ಮುಂದೆ ಆತ ಐವತ್ತು ಹೆಜ್ಜೆಯನ್ನಿಡುವಷ್ಟರಲ್ಲಿ ಅಲ್ಲೇ ಇದ್ದ ಅಶ್ವಥ ಮರದಿಂದ ವಿಷ ಜಂತುವೊಂದು ಇಳಿದು ಬಂದು ಆ ಅಧಿಕಾರಿಯನ್ನು ಕಚ್ಚಲು, ವಿಷವೇರಿ ಆತ ಅಸುನೀಗಿದ ಎನ್ನುವುದು ಕಟ್ಟು ಕತೆಯಲ್ಲ. ಮೌಖಿಕವಾಗಿ ಕೇಳಿ ತಿಳಿದುಕೊಂಡ ನಿಜದ ವಿಷಯವಷ್ಟೇ. ಅಂದು ಹಾಗೆ ತನ್ನ ಜೀವವನ್ನು ಕಳೆದುಕೊಂಡ ‘ಬಬಿಯ-1ರ‘ನಂತರ ಕಾಣಿಸಿಕೊಂಡದ್ದು ಈಗಿರುವ ‘ಬಬಿಯ-2’.

ಹೇಗೆ? ಎಲ್ಲಿಂದ? ಯಾವಾಗ ಬಂದ ಎನ್ನುವ ಸಣ್ಣ ಕುರುಹೂ ಇಲ್ಲದೆ ನನ್ನೂರಿನ ಗೌರವ ,ಅಭಿಮಾನವಾಗಿ ಇಂದಿಗೂ ನಮ್ಮೊಂದಿಗಿದ್ದಾನೆ. ಬಬಿಯನ ಲಿಂಗ ಪತ್ತೆಗೆ ಯಾರೂ ಹೋಗಲಿಲ್ಲ. ಹಾಗಾಗಿ ನಮಗೆ “ಬಬಿಯ ದೇವನೂ ಹೌದು ದೇವಿಯೂ ಹೌದು.” ಆಕಾರದಲ್ಲಿ ನೋಡಿದರೆ ಇದು ‘ಮಗ್ಗರ್’ ಪ್ರಭೇದಕ್ಕೆ ಸೇರಿದ ಮೊಸಳೆಯಂತೆ ಕಾಣುತ್ತದೆ. ನೀರೊಳಗೂ ಭೂಮಿಯ ಮೇಲೂ ವಾಸಿಸಬಲ್ಲ ಉಭಯ ಜೀವಿ ಮೊಸಳೆ. ಇದರ ಆಯಸ್ಸು ಸರಿ ಸುಮಾರು ಮನುಷ್ಯರಂತೆಯೇ ನೂರು ವರ್ಷ. ಇದು ಒಂಟಿಯಾಗಿ ಜೀವಿಸುವ ಪ್ರಾಣಿಯಲ್ಲ. ಜಂಟಿಯಾಗಿ ಜೀವಿಸುವ ಸಸ್ತನಿ. ಹಾಗಿದ್ದೂ ಇದು ಇಲ್ಲಿ ಒಂಟಿಯೇ. ಸಿಹಿನೀರಲ್ಲಿ ಕಾಣಸಿಗುವ ಈ ಪ್ರಭೇದದ ಮೊಸಳೆಯು ಆಹಾರಕ್ಕಾಗಿ ಮೀನುಗಳನ್ನೇ ಹೆಚ್ಚಾಗಿ ಅವಲಂಬಿಸುತ್ತವೆ ಎಂದು ಓದಿ ತಿಳಿದುಕೊಂಡಿದ್ದೇನೆ. ಬೇಸಗೆಯಲ್ಲಿ ಗುಂಪಿನಲ್ಲಿ ನೀರು ಕುಡಿಯಲು ಬರುತ್ತಿದ್ದ ಪಾರಿವಾರಿಗಳನ್ನು ಹಿಡಿಯುವ ದೃಶ್ಯವನ್ನು ಬಹಳಷ್ಟು ಬಾರಿ ನಾವು ನೋಡಿದ್ದುಂಟು. ಈಗಿನ ಬಬಿಯ-2ಗೆ ಸರಿ ಸುಮಾರು ಎಪ್ಪತ್ತರಿಂದ -ಎಪ್ಪತ್ತೈದರ ಹರಯ.

vegetarian crocodile Babia

ಕ್ಷೇತ್ರದ ಒಳಗಿರುವ ದೊಡ್ಡ ಮತ್ತು ಸಣ್ಣ ಕೆರೆಯಲ್ಲಿ ಮಾತ್ರವಲ್ಲದೆ ಹೊರಗಿನ ‘ತುಪ್ಪೆಕೆರೆ’(ಅಯ್ಯಪ್ಪ ಗುಡಿಯ ಸಮೀಪ) ಹಾಗೂ ನಮ್ಮ ‘ಚಂಬಟೆಕೆರೆ’ಗೂ ಆಹಾರ-ವಿಹಾರಕ್ಕಾಗಿ ಬಬಿಯ ಹೋಗುತ್ತಿದ್ದ. ದೊಡ್ಡ ಮತ್ತು ಸಣ್ಣ ಕೆರೆಯ ಮಧ್ಯದ ದಂಡೆಯಲ್ಲಿ ಬಿಸಿಲಿಗೆ ಮೈ ಕಾಯಿಸಿಕೊಳ್ಳಲೂ ಬರುತ್ತಿದ್ದ. ಹಾಗೆ ಬಂದು ಮಲಗಿದವನ ಮೈಮೇಲೆ ಹಕ್ಕಿಗಳು ಕುಳಿತು ಮಜ್ಜನ ಮಾಡುವುದನ್ನೂ ನೋಡುತ್ತಿದ್ದೆವು. ಮಳೆಗಾಲದಲ್ಲಿ ನಮ್ಮ ಮನೆಯಂಗಳಕ್ಕೆ ಬರುತ್ತಿದ್ದ. ಬಹಳಷ್ಟು ಬಾರಿ ಚಿಕ್ಕಜ್ಜನ ಮನೆಯಂಗಳಕ್ಕೆ ಬಂದು ಮಲಗೆದ್ದು ಹೋದದ್ದಿದೆ.

ಒಂದೊಮ್ಮೆ ಚಿಕ್ಕಜ್ಜನ ಮನೆಯ ನಾಯಿ ‘ದಾಸು’ ದಾಸಾನುದಾಸನಾಗಿ ಮಧ್ಯರಾತಿಯ್ರಲ್ಲಿ ಆಲಾಪವನ್ನು ಮಾಡುತ್ತಿರುಲು ಎಚ್ಚರಗೊಂಡ ‘ಸರಸ್ವತಿ ದೊಡ್ಡಮ್ಮ’ ಕಿಟಕಿಯ ಹೊರಕ್ಕೆ ಟಾರ್ಚ್ ಬೆಳಕನ್ನು ಹಾಯಿಸಿದಾಗ ಕಂಡದ್ದು ‘ಬಬಿಯಾ ಮತ್ತು ದಾಸು’ವಿನ ಮುಖಾಮುಖಿ. ಬೆಳಕಿಗೆ ಹಾಗೂ ದೊಡ್ಡಮ್ಮನ ಮಾತಿನ ಸದ್ದಿಗೆ ಸರಕ್ಕನೆ ಕೆಳಕ್ಕಿಳಿದು ತನ್ನ ಗೂಡಿನತ್ತ ಅಂದು ಬಬಿಯ ಹೊರಟು ಹೋಗಿದ್ದ. ಹಿಂದೆಲ್ಲ ದೊಡ್ಡಕೆರೆಯಿಂದಲೇ ಕುಡಿಯಲು ಮತ್ತು ನಿತ್ಯೋಪಯೋಗಕ್ಕೆಂದು ನೀರನ್ನು ಅಮ್ಮ-ದೊಡ್ಡಮ್ಮಂದಿರು ತರುತ್ತಿದ್ದರು. ಮುಂಜಾನೆ ಐದಕ್ಕೆ ನೀರನ್ನು ತರಲು ಟಾರ್ಚ್ ಬೆಳಕಲ್ಲಿ ಹೋದಾಗ ಅಲ್ಲೇ ಕೆರೆದಂಡೆಯ ಮೇಲೆ ಮಲಗಿ ವಿಶ್ರಮಿಸುತ್ತಿದ್ದ ಬಬಿಯನ ಮೇಲೆ ಬೆಳಕನ್ನು ಚೆಲ್ಲಿ, “ಬಬಿಯಾ.. ಬಬಿಯಾ” ಎಂದು ಕೂಗಿದರೆ ದುಡುಮ್ಮನೆ ನೀರಿಗೆ ಜಿಗಿದು ನೀರನ್ನೆತ್ತಲು ಅನುವು ಮಾಡಿಕೊಡುತ್ತಿದ್ದ.ಅವನ ಸಂಚಾರ ವಿಶೇಷವಾದದ್ದೇನಲ್ಲ. ಅದು ಸಹಜವೂ, ಕಾರ್ಯಕಾರಣವೂ ಆಗಿರುವಂತದ್ದು.

ಅಂದು ದ್ವಿತೀಯ ಪಿ.ಯು.ಸಿ ಪರೀಕ್ಷೆ ಮುಗಿಸಿ ಬಂದಿದ್ದೆ. ಮಟ ಮಟ ಮಧ್ಯಾಹ್ನ ಬೇರೆ. ಮಾಳಿಗೆಯಲ್ಲಿರುವ ಪಪ್ಪನ ಕೋಣೆಯಲ್ಲಿರುವಾಗ ದೇವಸ್ಥಾನದ ಕಡೆಯಿಂದ ‘ಭಡಾರ್..’ ಎಂಬ ಸದ್ದಿನೊಂದಿಗೆ ಜನರ ಕಿರುಚಾಟವೂ ಕೇಳಿತು. ಕಿಟಕಿಯಿಂದಲೇ ಕಾಣುವ ದೇವಳದತ್ತ ಏನೆಂದು ಇಣುಕು ಹಾಕಿದರೆ ಜನರ ಕೈ ಬಾಯಿಗಳ ಸದ್ದು ಜೋರಾಗುತ್ತಿತ್ತು. ಏನೆಂದು ತಿಳಿಯಲು ಅತ್ತ ಧಾವಿಸಿದೆ. ಎಲ್ಲರೂ ಮೊಸಳೆಯ ಗುಹೆಯತ್ತಲೇ ನೋಡುತ್ತಿದ್ದರು. ಆಗಬಾರದ್ದೇನೂ ಆಗಿದೆ ಎಂದುಕೊಂಡು ಥಟ್ಟನೆ ಕಡಿದಾದ ಗುಹೆಯ ಕೆಳಭಾಗಕ್ಕಿಳಿದೆ. ನೋಡಿದರೆ; ಗುಹೆಯೆದುರು ಬಾಯಗಲಿಸಿದ್ದ ಬಬಿಯನ ಮುಂದೆ ಬಿದ್ದ ‘ನಂಬೀಶನ್’ ಏಳುವ ಸಾಹಸದಲ್ಲಿ ಹೆದರಿ ಬೆವರುತ್ತಿದ್ದರು. ಬೇಸಗೆಯಾದ್ದರಿಂದ ನೀರು ದೊಡ್ಡ ಕೆರೆಯಲ್ಲಿ ಕಡಿಮೆಯಿತ್ತು. ತಾನಿದ್ದ ಸ್ಥಿತಿಯಿಂದ ಒಂದಿನಿತೂ ಕದಲದೆ ಬಬಿಯ ಮಾತ್ರ ಹಾಗೆಯೇ ಇದ್ದುಬಿಟ್ಟಿದ್ದ.ಕೆಳಕ್ಕೆ ನೀರಲ್ಲಿ ಬಿದ್ದು ಬೆವರುತ್ತಿದ್ದ ‘ನಂಬೀಶನ್’ ಅವರಿಗೆ ಕೂಡಲೇ ಕೈ ನೀಡಿ ಮೇಲೆಕ್ಕೆತ್ತಿಬಿಟ್ಟೆ. ವಿಷಯವೇನೆಂದರೆ; ಬಬಿಯನಿಗೆ ನೈವೇದ್ಯವನ್ನು ಕೊಡಲು ಬಂದ ‘ನಂಬೀಶನ್’ ಕಾಲು ಜಾರಿ ಬುಡುಕ್ಕನೆ ಮೊಸಳೆಯ ಗುಹೆಯ ಎದುರು ನೈವೇದ್ಯ ತಟ್ಟೆ ಸಮೇತ ಬಿದ್ದು ಬಿಟ್ಟಿದ್ದರು. ಹಾಗಿದ್ದೂ ಬಬಿಯ ಏನೂ ಮಾಡದೆ, ತೆರೆದಿದ್ದ ತನ್ನ ಬಾಯನ್ನೂ ಮುಚ್ಚದೆ, ಒಂದು ಚೂರೂ ಕದಲದೆ ಕಣ್ಣನ್ನು ಪಿಳಿ ಪಿಳಿಗುಡುತ್ತಲಿದ್ದ ದೃಶ್ಯವು ಇನ್ನೂ ಅಚ್ಚಾಗಿಯೆ ನನ್ನ ಮನದಲ್ಲಿ ಉಳಿದಿದೆ. ಈ ಘಟನೆಯಿಂದ ಈತ ನಮ್ಮವನೇ ಎನ್ನುವುದು ನನಗೆ ಖಾತ್ರಿಯಾಯಿತು.

ಆದಿ ಕಾಲದಲ್ಲಿ ಬಬಿಯನಿಗೆ ‘ನೈವೇದ್ಯ’ವನ್ನು ಕೊಡುವ ಪದ್ಧತಿ ಇರಲಿಲ್ಲ. ಅಂದೆಲ್ಲ ಕೋಳಿಯನ್ನೇ ಕೊಡುತ್ತಿದ್ದರು. ಅಷ್ಟಮಂಗಲ ಪ್ರಶ್ನೆ (ಸ್ವರ್ಣ ಪ್ರಶ್ನೆ) ಯಲ್ಲಿ ಕಂಡಂತೆ “ಕೋಳಿಯನ್ನು ಕೈಯಲ್ಲಿ ಕೊಡುವುದು ಬೇಡವೆಂದೂ, ತೆಂಕು ಭಾಗದಲ್ಲಿ ಗೂಟವನ್ನು ಹಾಕಿ ಅಲ್ಲಿ ಕೋಳಿಯನ್ನು ಕಟ್ಟಿರೆಂದೂ, ಮೊಸಳೆಯೇ ಬಂದು ಕೋಳಿಯನ್ನು ತೆಗೆದುಕೊಂಡು ಹೋಗಲೆಂದೂ” ಹೇಳಿದ್ದರು. ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೆಯೇ ಸುಮಾರು ಸಮಯ ನಡೆಯಿತು. ಸಂಜೆಯ ಐದು-ಆರರ ಹೊತ್ತಿಗೆ ಕೋಳಿಯನ್ನು ತಿನ್ನಲು ಬರುವ ಬಬಿಯನನ್ನು ನೋಡಲೆಂದೇ ಬಹಳಷ್ಟು ಜನರು ಸೇರುತ್ತಿದ್ದರು. ಭಕ್ತಾದಿಗಳೆಲ್ಲರೂ ಸಂಯಮದಿಂದ ಕಾದು ‘ಬಬಿಯ’ ಕೋಳಿ ತಿನ್ನುವುದನ್ನು ಕಣ್ಣ್ ತುಂಬಿಸಿಕೊಳ್ಳುತ್ತಿದ್ದರು. ಅದೊಂದು ಪ್ರಭಲ ಜನಾಕರ್ಷಣೆಯಾಗಿತ್ತು. ಹಸಿವಿದ್ದರೆ ಮಾತ್ರ ಮೊಸಳೆಯು ಕೋಳಿಯನ್ನು ತಿನ್ನುತ್ತಿತ್ತು. ಇಲ್ಲವೆಂದಲ್ಲಿ ಆ ಸಮಯಕ್ಕೆ ಬಂದು ಕೋಳಿಯನ್ನು ನೋಡಿ ಹೋಗುತ್ತಿತ್ತು. ಹಾಗೆ ತಿನ್ನದೇ ಹೋದ ಕೋಳಿಯನ್ನು ಅದೇ ಸಂಜೆ ‘ಸುಬ್ಬಯ್ಯ’ ತೆಗೆದುಕೊಂಡು ಹೋಗಿ ಮರುದಿನ ಪುನಃ ಅಲ್ಲಿಯೇ ಕೋಳಿಯನ್ನು ಕಟ್ಟುತ್ತಿದ್ದ. ಮತ್ತೆ ಅದೇ ಸಮಯಕ್ಕೆ ಬರುವ ಮೊಸಳೆ ಹಸಿವಿದ್ದರೆ ಹರಕೆಯ ಕೋಳಿಯನ್ನು ತಿನ್ನುತ್ತಿತ್ತು ಇಲ್ಲವೆಂದಲ್ಲಿ ಹಾಗೆಯೇ ಬಿಟ್ಟು ಹೋಗುತ್ತಿತ್ತು. ಈ ನಿಯಮವು ಯಾವುದೇ ಅಡಚಣೆಯಿಲ್ಲದೆ ಸಾಗಿದುದರ ಪರಿಣಾಮ ಬಬಿಯನ ಹೊಟ್ಟೆ ತುಂಬುತ್ತಿತ್ತು. ಇದು ಪ್ರಭಲ ಪ್ರವಾಸಿ ಆಕರ್ಷಣೆಯೂ ಆಗಿತ್ತು. ಆದರೆ ಬದಲಾದ ಆಡಳಿತ ಮಂಡಳಿಯ ಸದಸ್ಯರ ತೀರ್ಮಾನದಂತೆ ಒಂದು ದಿನ ಮೊಸಳೆಗೆ ಕೋಳಿ ಕೊಡುವುದನ್ನು ನಿಲ್ಲಿಸಲಾಯಿತು. ಆಡಳಿತ ಮಂಡಳಿಯು ಬಬಿಯನ ಊಟವನ್ನು ಕಿತ್ತುಕೊಂಡಿದ್ದಲ್ಲದೆ ಉತ್ತಮ ಪ್ರವಾಸಿ ಆಕರ್ಷಣೆಯಿಂದಲೂ ಜನರನ್ನು ವಂಚಿತರನ್ನಾಗಿಸಿದರು.

ಹೀಗಿರಲು ಒಂದು ದಿನ ದೇವಾಲಯಕ್ಕೆ ಬಂದ ಗಣ್ಯ ಹಿರಿಯರೊಬ್ಬರು “…ಮೊಸಳೆಗೆ ಕೋಳಿಯನ್ನು ಕೊಡುವುದು ಅಶುದ್ಧ…ಅದು ನಿಷಿದ್ಧವಾಗಬೇಕು” ಎಂದು ಹೇಳಿ ಬಬಿಯನ ಹೊಟ್ಟೆಗೆ ಇನ್ನೊಂದು ಗುದ್ದನ್ನು ನೀಡಿ ಹೊರಟು ಹೋದರು. ಅವರಿಗೆ ತನ್ನ ತಪ್ಪಿನ ಅರಿವಾಗಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕನಸೊಂದು ಅವರನ್ನು ಬಿಡದೇ ಕಾಡಿದ್ದರ ಪರಿಣಾಮ ತಿಂಗಳುಗಳ ಬಳಿಕ ಯಾರ ಗಮನಕ್ಕೂ ಬಾರದೆ ಮೆತ್ತಗೆ ಬಂದು ಬೆಳ್ಳಿಯಿಂದ ಮಾಡಿಸಿದ ಮೊಸಳೆಯನ್ನು ಪ್ರಾಯಶ್ಚಿತ ರೂಪದಲ್ಲಿ ತಪ್ಪುಕಾಣಿಕೆ ಹಾಕಿ ಹೋಗಿದ್ದರು.

ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದ್ದನ್ನು ಅನುಸರಿಸಬೇಕಾದುದು ಧರ್ಮವೂ, ಕರ್ತವ್ಯವೂ ಹೌದು. ಆದರೆ ಅದನ್ನು ಆಡಳಿತ ಮಂಡಳಿಯವರು ಪಾಲಿಸಲಿಲ್ಲ ಎನ್ನುವುದು ಖೇದದ ವಿಚಾರ. ದೇವಾಲಯಕ್ಕೆ ಭೇಟಿ ನೀಡಿದ ಗಣ್ಯ ಹಿರಿಯರೊಬ್ಬರ ಮಾತು ಮತ್ತು ಆಡಳಿತ ಮಂಡಳಿಯ ನಿರ್ಧಾರವು ಒಂದೇ ಆಗಿಬರಲು ‘ಒಂದು ದಿನದ ಪ್ರಶ್ನೆ’ಯನ್ನಿಡಲು ಮಂಡಳಿ ತೀರ್ಮಾನಿಸಿತು. ಅದರಲ್ಲಿ ಮೂಡಿ ಬಂದ ಅಭಿಪ್ರಾಯದಂತೆ ಮೊಸಳೆಗೆ ಕೋಳಿಯನ್ನು ಕೊಡುವುದು ನಿಷಿದ್ಧವಾಗಿ ಹೋಯಿತು. ಪ್ರಶ್ನೆಯಲ್ಲೇ ಹಿರಿದಾದ ಸ್ವರ್ಣಪ್ರಶ್ನೆಯ ಅಭಿಪ್ರಾಯವನ್ನೇ ಅಂದಿನ ಆಡಳಿತ ಮಂಡಳಿಯು ಮೂಲೆಗೆಸೆದಿತ್ತು. ಹಾಗಾದರೆ ಪ್ರಶ್ನೆಗಳಲ್ಲೇ ಶ್ರೇಷ್ಠವಾದ ‘ಅಷ್ಟಮಂಗಲ ಪ್ರಶ್ನೆ’ಯ ಅಭಿಪ್ರಾಯಗಳಿಗೆ ಯಾವುದೇ ಬೆಲೆ-ನೆಲೆ ಇಲ್ಲವೇ ? ಸ್ವರ್ಣಪ್ರಶ್ನೆಯಲ್ಲಿ ಮೂಡಿಬಂದ ವಿಚಾರವನ್ನು ಸಾರಾಸಗಟಾಗಿ ಅಂದಿನ ಆಡಳಿತ ಮಂಡಳಿಯು ತಿರಸ್ಕರಿಸಿತ್ತು ಎನ್ನುವುದು ಆಶ್ಚರ್ಯ ಮತ್ತು ಬೇಸರದ ವಿಚಾರ.

vegetarian crocodile Babia

ನಂಬಿಕೆಯ ಮೇಲೆ ಬದುಕು ನಿಂತಿದೆ ಎನ್ನುವ ಮಾತು ಸತ್ಯವಷ್ಟೇ. ಆದರೆ ಅದೇ ನಂಬಿಕೆಯನ್ನು ಕಾಲಕ್ಕೆ ತಕ್ಕಂತೆ ಕುಣಿಯುವ ಕೋಲಕ್ಕೆ ಬುನಾದಿಯನ್ನಾಗಿಸುವುದು ಸಲ್ಲ. ನಂಬಿಕೆಯಡಿಯಲ್ಲಿ ಅವಾಂತರಗಳನ್ನು ಸೃಷ್ಟಿಸಿಕೊಳ್ಳುವುದೆಲ್ಲವೂ ಅವರವರ ಕರ್ಮವೆಂದೇ ಹೇಳದೆ ಬೇರೆ ವಿಧಿಯಿಲ್ಲ. ಹೀಗೆ ಒಂದು ಪ್ರಾಣಿಯ ಮೂಲ ಗುಣವನ್ನು ಬದಲಿಸಿ ನಂಬಿಕೆಯ ಜೊತೆಗೆ ಆಟವಾಡುವುದು ಒಳ್ಳೆಯ ಲಕ್ಷಣವಲ್ಲ. ತನ್ನ ಸಹಜವಾದ ಬದುಕನ್ನು ಅನಿವಾರ್ಯ ಕಾರಣಗಳಿಂದಾಗಿ ಇರುವ ಪರಿಸ್ಥಿತಿಗೆ ಒಗ್ಗಿಸಿಕೊಂಡು ‘ಬಬಿಯ’ ತನ್ನದೇ ಆದ ಬದುಕನ್ನು ಕಟ್ಟಿಕೊಂಡಿದ್ದಾನೆ. ಅದೆಷ್ಟರವರೆಗೆಂದರೆ; ದೇವ ನೈವೇದ್ಯಕ್ಕೇ ಬಾಯಿ ತೆರೆಯುವಷ್ಟು ದೊಡ್ಡ ಮನಸ್ಸನ್ನು ಆತ ಮಾಡಿದ್ದಾನೆ. ಅಷ್ಟಕ್ಕೇ ನಾವವನಿಗೆ ಕೃತಜ್ಞರಾಗಬೇಕು. ಮಾಂಸಹಾರಿ ಪ್ರಾಣಿಯನ್ನು ಸಸ್ಯಹಾರಿಯನ್ನಾಗಿಸುವ ವ್ಯರ್ಥ ಪ್ರಯತ್ನವು ಕೂಡ ನಮಗೆ ನಂಬಿಕೆಯ ಜೊತೆಗಿನ ಆಟವಿರಬಹುದು, ಆದರೆ ಬಬಿಯನಿಗದು ತನ್ನ ಹಸಿವಿನ ಪ್ರಶ್ನೆ. ಹಸಿವು ಎಲ್ಲರಿಗೂ ಒಂದೇ.

ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ಅಭಿಪ್ರಾಯವನ್ನು ಬದಿಗಿರಿಸಿದ ಪರಿಣಾಮ ಬಬಿಯನಿಗೆ ಹರಕೆಯ ಕೋಳಿ ಬಂದರೂ ಕೊಡುವುದು ನಿಂತಿತ್ತು. ದೇವಸ್ಥಾನದ ಹೊರಕೆಲಸವನ್ನು ಮಾಡುತ್ತಿದ್ದದ್ದು ‘ಚಂದ್ರಶೇಖರ’. ಬಂದ ಭಕ್ತ ಪ್ರವಾಸಿಗರಿಗೆಲ್ಲರಿಗೂ ಕ್ಷೇತ್ರದ ವಿಚಾರವನ್ನು ತಿಳಿಸುತ್ತಿದ್ದ. ಆಗಲೂ ಮೊಸಳೆಗೆ ಹರಕೆಯ ಕೋಳಿ ಸಂದುತ್ತಿರಲಿಲ್ಲ. ಹಾಗಿದ್ದಾಗಲೂ ಸ್ವತಃ ಚಂದ್ರನೇ ತನ್ನ ಖರ್ಚಿನಲ್ಲಿ ಕ್ಷೇತ್ರದ ಹೊರಗಿರುವ ‘ತುಪ್ಪೆಕೆರೆ’ಯಲ್ಲಿ ಮೊಸಳೆಗೆ ಕೋಳಿಯನ್ನು ಕೊಡುತ್ತಲಿದ್ದ. ಬಬಿಯನೂ ಖುಷಿಯಿಂದಲೇ ಅದನ್ನು ಸ್ವೀಕರಿಸುತ್ತಿದ್ದ. ಚಂದ್ರಶೇಖರನ ಕೆಲಸದ ಅವಧಿ ಮುಗಿದು ಹೊಸಬನೊಬ್ಬ ಬಂದ ಮೇಲೆ ಮೊಸಳೆಗೆ ಕೋಳಿ ಕೊಡುವುದೂ ನಿಂತು ಹೋಯಿತು.

ಎಪ್ಪತ್ತು ವರ್ಷದ ಸಹಬಾಳ್ವೆ ಬಬಿಯನದ್ದು. ಅಂತಿಪ್ಪ ಬಬಿಯ ಬೇಸಗೆಯಲ್ಲಿ ದೊಡ್ಡ ಕೆರೆಯಲ್ಲಿ ನೀರು ಕಡಿಮೆಯಾಗಲು ಆತ ತನ್ನ ಸಮ್ಮರ್ ಪ್ಯಾಲೇಸ್ ‘ತುಪ್ಪೆಕೆರೆ’ಗೆ ವಲಸೆ ಹೋಗಿದ್ದ. ಬಹಳ ದಿನಗಳ ಕಾಲ ಅಲ್ಲೇ ಇದ್ದ ಕೂಡ. ಬಬಿಯನನ್ನು ಕಾಣದ ಊರ ಮಂದಿಗೆ ಏನನ್ನೋ ಕಳಕೊಂಡ ಅನುಭವ. ಕೊನೆಗೂ ಆತ ತನ್ನ ಸಮ್ಮರ್ ಪ್ಯಾಲೇಸಿನಲ್ಲಿರುವುದಾಗಿ ತಿಳಿದು ನಿಟ್ಟುಸಿರು ಬಿಟ್ಟಿದ್ದರು. ಒಂದು ದಿನ ತುಪ್ಪೆಕೆರೆಯ ಮೇಲಕ್ಕೆ ಬಂದು ನಿಶ್ಚಲವಾಗಿ ಮಲಗಿದವನನ್ನು ನೋಡಿದ ಮಂದಿ ಮೊಸಳೆ ‘ಸತ್ತೇ’ ಹೋಯಿತು ಎಂದು ಪ್ರಚಾರವನ್ನೂ ಮಾಡಿದರು. ಬೆಂಕಿಯ ಕೆನ್ನಾಲಗೆಯಂತೆ ಈ ಸುದ್ದಿಯು ಸೋಷಿಯಲ್ ಮೀಡಿಯಾಗಳಲ್ಲಿ ಹರಡಿತು. ಒಂದರ ಮೇಲೆ ಒಂದರಂತೆ ಚಿತ್ರಗಳು, ಸುದ್ದಿಗಳು, ಕಂಬನಿಗಳನ್ನು ಮಿಡಿದದ್ದೇ ಮಿಡಿದದ್ದು. ಆದರೆ ನಿಜದ ವಿಷಯ ಅದಾಗಿರಲಿಲ್ಲ. ಊರಮಂದಿ ‘ವೆಟರ್ನರಿ ಡಾಕ್ಟರ್’ ಅನ್ನು ಕರೆದುಕೊಂಡು ಬಂದರು. ಬಂದು ಪರೀಕ್ಷಿಸಿದವರು “ಮೊಸಳೆ ಹಸಿವಿನಿಂದ ಬಳಲಿದೆ. ಆಹಾರ ರೂಪದಲ್ಲಿ ಆಗಾಗ ಕೋಳಿಯನ್ನು ಕೊಡುತ್ತೀರಿ” ಎಂದು ಡಾಕ್ಟರ್ ಸೂಚಿಸಿದರು. ಅದರಂತೆ ಚಂದ್ರ ಮತ್ತು ಊರವರು ಸೇರಿ ಕೋಳಿಯನ್ನು ಕೊಟ್ಟ ಮೇಲೆ ಬಬಿಯ ತುಸು ಚೇತರಿಸಿಕೊಂಡು ಮೊದಲಿನಂತಾದ. ಆ ನಂತರ ಊರ ಮಂದಿ ಆಗಾಗ ಹೊರಗಿನ ತುಪ್ಪೆಕೆರೆಯಲ್ಲಿ ಮೊಸಳೆಗೆ ಕೋಳಿಯನ್ನು ಕೊಡುತ್ತಿದ್ದರು.

ಮನುಷ್ಯನ ಪ್ರೀತಿಯನ್ನು ಬಬಿಯ ಚೆನ್ನಾಗಿಯೇ ಅರಿತುಕೊಂಡಿದ್ದ. ಆದರೆ ನಾವೋ? ಅವನ ಹಸಿವನ್ನು ಕೂಡ ಅರಿಯದೆ ಹೋಗಿಬಿಟ್ಟೆವು! ನಮ್ಮವರಲ್ಲೊಬ್ಬನಾಗಿ ನಮ್ಮವನೇ ಆಗಿದ್ದ ‘ಬಬಿಯ’ ಇಂದಿಗೂ ನಮ್ಮೊಳಗೊಬ್ಬನಾಗಿಯೇ ಇದ್ದಾನೆ ಎನ್ನುವ ಸಮಾಧಾನವಿದೆ.

ಅಣ್ಣ ಮತ್ತು ನಾನು ಓದುತ್ತಿದ್ದ ದಿನಗಳು. ‘ಪಾರ್ಥಸಾರಥಿ’ ದೇವಳದ ಬಳಿಯಿರುವ ಕಪ್ಪು ಕಲ್ಲಿನ ಮೇಲೆ ಸಂಜೆಯ ಬಿಸಿಲಿಗೆ ಮೈಯೊಡ್ಡಿ ‘ಬಬಿಯ’ ಮಲಗಿರುತ್ತಿದ್ದ. ಅಲ್ಲೇ ಮೇಲಿರುವ ಕಲ್ಲಿನಲ್ಲಿ ನಾವು ಸದ್ದು ಮಾಡದೆ, ಅವನ ವಿಶ್ರಾಂತಿಗೆ ಧಕ್ಕೆ ತಾರದೆ ಅಲ್ಲಿ ಕುಳಿತು ಓದುತ್ತಿದ್ದೆವು. ತನ್ನ ಸಮಯವಾದಾಗ ಅಥವಾ ದೇವಳದ ಗಂಟೆ, ಶಂಖನಾದವು ಮೊಳಗಿದಾಗ ಸದ್ದಿಲ್ಲದೆ ನಿರೋಳಕ್ಕಿಳಿದು ತನ್ನ ಗೂಡಿಗೆ ಹೊರಟು ಬಿಡುತ್ತಿದ್ದ.

ಅಣ್ಣ ‘ಶೈಲೇಂದ್ರ’ನ ಮದುವೆಯ ಸಮಯ. ಉಡುಪಿಗೆ ದಿಬ್ಬಣ ಹೊರಡಲು ಹಿಂದಿನ ದಿನವೇ ಬಸ್ಸು ಬಂದು ಮನೆಯ ಪಕ್ಕದಲ್ಲಿರುವ ‘ಗೋಳಿಮರ’ದಡಿಯಲ್ಲಿ ಠಿಕಾಣಿ ಹೂಡಿತ್ತು. ಮರುದಿನ ಬೆಳಗ್ಗಿನ ಕರ್ಮಗಳನ್ನು ಮುಗಿಸಿ ಸ್ನಾನಕ್ಕೆಂದು ಹೋಗುತ್ತೇನೆ ಮನೆಯ ಬಚ್ಚಲ ಬಳಿ ದೊಡ್ಡ ಸಾಲೇ ನಿಂತಿತ್ತು. ಕೆಲವರು ಚಿಕ್ಕಜ್ಜನ ಮನೆಯತ್ತ ಮುಖ ಮಾಡಿದರೆ ನಾನು ಕೆರೆಯತ್ತ ಮುಖಮಾಡಿದೆ. ನನ್ನೊಂದಿಗೆ ‘ಹರ್ಷ’ನೂ ಜೊತೆಯಾದ. ಬೆಳಗ್ಗಿನ ಜಾವ ನಾಲ್ಕೂವರೆ ಐದರ ಸಮಯ. ಮನೆಯ ಹಿಂಭಾಗದ ಕೋಣೆಯ ಕಿಟಕಿಯ ಬಳಿ ‘ಗಿರಿಜ ದೊಡ್ಡಮ್ಮ’ ಅವರ ಸೇವೆಗೆಂದು ಇರಿಸಿದ್ದ ಟಾರ್ಚ್ ನನಗೆ ಬೆಳಕಾಗಲೆಂದು ಪುಸುಕ್ಕನೆ ಅದನ್ನು ಎತ್ತಿಕೊಂಡಿದ್ದೆ. ವೀಳ್ಯವನ್ನು ಹಾಕುತ್ತಿದ್ದ ದೊಡ್ಡಮ್ಮ ಅದನ್ನು ಕಂಡು ” ಏ ಸಂತೂ…ನಂಗೆ ಟಾರ್ಚ್ ಬೇಕು ಕಣೋ.. ಕೊಡೋ ಮಾರಾಯ” ಎಂದು ಕೂಗಿದಾಗ “ಇದೋ ಹೋದೆ…ಇದೋ ಬಂದೆ ದೊಡ್ಡಮ್ಮ” ಎಂದು ಹೇಳಿ ಕೆರೆಯತ್ತ ಹೆಜ್ಜೆಯನ್ನಿಟ್ಟೆ.

vegetarian crocodile Babia

ಒಂದು ಕೈಯಲ್ಲಿ ಟಾರ್ಚ್ ಮತ್ತೊಂದು ಕೈಯಲ್ಲಿ ಸಣ್ಣ ಕೊಡಪಾನ ಜೊತೆಗೆ ‘ಚಡ್ಡಿ ದೋಸ್ತ್ ಹರ್ಷ’. ನಮ್ಮ ಸವಾರಿ ಕೆರೆಯತ್ತ ಹೊರಟಿತು. ಮುಂಜಾನೆಯ ಮಾತಿಗಿಳಿದವನೇ ಅಂದು ತಿಳಿ ಬೆಳಕಲ್ಲಿ ಅದ್ದಿಕೊಂಡ ಸರೋವರ ಕ್ಷೇತ್ರದ ಸೌಂದರ್ಯೋಪಾಸಕನಾಗಿಬಿಟ್ಟಿದ್ದ ಹರ್ಷ. ಹಾಗೆ ಹೆಜ್ಜೆಯನ್ನು ಜೊತೆಯಲ್ಲಿ ಹಾಕುತ್ತಿರುವಾಗ ಥಟ್ಟನೆ “ಸಂತೂ ಹಾದಿಯಲ್ಲಿ ಬಬಿಯ ಇದ್ದರೆ…?”ಎಂದು ತನ್ನ ಭಯವನ್ನು ವ್ಯಕಪಡಿಸಿದ.” ಏಯ್…ಇರ್ಲಿಕ್ಕಿಲ್ಲ ಮಾರಾಯ…ಇದ್ದರೂ ಅವನು ನಮ್ಮವನೇ ಬಿಡು… ಏನೂ ಆಗದು ” ಎಂದು ಹರ್ಷನಿಗೆ ಧೈರ್ಯ ತುಂಬುವ ಮಾತನ್ನಾಡಿ ಎರಡು ಸೆಕೆಂಡುಗಳಾಗಿರಲಿಲ್ಲ ನಮ್ಮ ಹೆಜ್ಜೆಯ ಸಪ್ಪಳಕ್ಕೆ ಕೆರೆದಂಡೆಯ ಮೇಲೆ ಮುಂಜಾವಿನ ಸವಿ ನಿದ್ರೆಯಲ್ಲಿದ್ದ ಬಬಿಯನಿಗೆ ನಿದ್ರಾಭಂಗವಾಗಲು ಧಡಾರನೆಂದು ದೊಡ್ಡಕೆರೆಗೆ ಜಿಗಿದು ಬಿಟ್ಟ. ನಮ್ಮಿಬ್ಬರ ಜೀವ ಬಾಯಿಗೆ ಬಂದಿತ್ತು. ಹೆದರಿದ ಹರ್ಷನ ಕೈಗಳು ನನ್ನ ತೋಳನ್ನು ಹಿಡಿದಮುಕಿದ ರಭಸಕ್ಕೆ ತೋಳು ಕೆಂಪೇರಿಬಿಟ್ಟಿತ್ತು.”ಅನಂತಪದ್ಮನಾಭ ಸ್ವಾಮಿಯ ಮತ್ತು ನನ್ನ ನಕ್ಷತ್ರ ಒಂದೇ ಅದು ‘ಶ್ರವಣ’…ಹಾಗೆ ನಾವು ಬಚಾವಾದದ್ದು ಮಾರಾಯ” ಎಂದು ಹೇಳಿ ಬಲವಂತದ ನಗುವನ್ನು ಅಂದು ಹರ್ಷ ಬರಿಸಿಕೊಂಡಿದ್ದ. ನಡಗುತ್ತಲೇ ಇದ್ದ ಹರ್ಷ ತಾನು ಸ್ನಾನ ಮಾಡಲಾರೆ ಎಂದು ಒಂದೇ ಹಠ. ಕೊನೆಗೂ ಕರೆದುಕೊಂಡ ಹೋದ ಕರ್ಮಕ್ಕೆ ಕೆರೆಯಿಂದ ನೀರನ್ನು ಹೊತ್ತು ತಂದು ಅವನ ಸ್ನಾನವೆಂಬ ಕರ್ಮವನ್ನು ಧರ್ಮಕಾರಣವಾಗಿ ಮುಗಿಸಿದ್ದೆ.

ದೊಡ್ಡಪ್ಪ “ದಿ.ಈಶ್ವರಯ್ಯ ಉದಯವಾಣಿ ಸಾಪ್ತಾಹಿಕ ಪುರವಣಿಯ ಸಂಪಾದಕ”ರಾಗಿದ್ದ ಸಮಯ. ಒಂದು ದಿನ ತನ್ನ ಹೆಗಲಿಗೆ ಕೆಮರಾವನ್ನೇರಿಸಿ ನಮ್ಮನ್ನೆಲ್ಲಾ ಜೊತೆ ಸೇರಿಸಿಕೊಂಡು ಮಧಾಹ್ನದ ಮಹಾಪೂಜೆಗೆ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಹಿಂದಿನ ದಿನ ನಿಗದಿ ಮಾಡಿದಂತೆ ‘ಸುಬ್ಬಯ್ಯ ’ ಕೋಳಿಯೊಂದರ ಏರ್ಪಾಡನ್ನು ದೊಡ್ಡಪ್ಪನ ನಿರ್ದೇಶನದಂತೆ ಮಾಡಿದ್ದ. ಅವಾಗ ದೇವಳದ ಸುತ್ತಲೂ ಪ್ರದಕ್ಷಿಣೆ ಬರಲು,ಸುತ್ತು ಹಾಕಲು ಅವಕಾಶವಿದ್ದಿತ್ತು (ಈಗ ಪ್ರದಕ್ಷಿಣಾ ಪಥವನ್ನು ತೆಗೆಯಲಾಗಿದೆ). ಸುತ್ತು ಹಾಕಿ ಬರುವಾಗ ಸಿಗುವ ಉತ್ತಮ ಜಾಗದಲ್ಲಿ ನಿಂತರೆ ಮೊಸಳೆಯ ಗುಹೆಯು ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲೇ ನಾವೆಲ್ಲರೂ ನಿಂತಿದ್ದೆವು. ಜೊತೆಗೆ ಊರ ಮಂದಿ ಮತ್ತು ದೇವಳಕ್ಕೆ ಬಂದ ಭಕ್ತರು ಕೂಡ. ಅಪರಾಹ್ನದ ಪೂಜೆಯ ಬಳಿಕ ಬಬಿಯನಿಗೆ ‘ದೇವ ನೈವೇದ್ಯ’ವನ್ನು ನಂಬೀಶನ್ ಕೊಟ್ಟ ಮೇಲೆ ರಂಗಸ್ಥಳಕ್ಕೆ ‘ಸುಬ್ಬಯ್ಯ ಶೆಟ್ಟಿ’ಯ ಪ್ರವೇಶವಾಯಿತು. ಕೋಳಿಯ ಕಾಲಿಗೆ ಹಗ್ಗ ಕಟ್ಟಿ ಬಬಿಯನ ಗುಹೆಯ ಮುಂದೆ ನೇತಾಡಿಸಲಾಯಿತು. ಕೋಳಿಯ ಸದ್ದು ಕೇಳಿ ಮೆಲ್ಲನೆ ಗುಹೆಯಿಂದ ದೇಹವನ್ನು ಹೊರ ಚಾಚಿದ ಬಬಿಯ ಹೆಚ್ಚು ಮುಂದಕ್ಕೆ ಬರುವ ಸಾಹಸವನ್ನು ಮೊದಲಿಗೆ ಮಾಡಲಿಲ್ಲ.

ಇತ್ತ ದೊಡ್ಡಪ್ಪ ತಮ್ಮ ‘ನಿಕೋನ್ ಕೆಮರಾ’ದ ಮಸೂರವನ್ನು ಸರಿಪಡಿಸುತ್ತಾ ನಿರ್ಣಾಯಕ ಗಳಿಗೆಗಾಗಿ ಕಾಯುತ್ತಿದ್ದರು. ಮತ್ತೊಮ್ಮೆ ಬಬಿಯಾನನ್ನು ಕರೆಯುವಂತೆ ‘ಪಪ್ಪಾ’ ಸುಬ್ಬಯ್ಯ ಶೆಟ್ಟಿ’ಗೆ ಹೇಳಿದರು. ಸುಬ್ಬಯ್ಯ ತನ್ನ ಯಕ್ಷಗಾನ ಧಾಟಿಯಲ್ಲಿ ಬಬಿಯನನ್ನು ಕರೆಯಲು ಮಿಂಚಿನ ವೇಗದಲ್ಲಿ ಬಂದ ಬಬಿಯ ಚಂಗನೆ ನೆಗೆದು ಸುಬ್ಬಯ್ಯನ ಪಾದಕ್ಕಿಂತಲೂ ತುಸು ಮೇಲೆ ಆತ ಕೈಯಲ್ಲಿ ಹಗ್ಗ ಕಟ್ಟಿ ಹಿಡಿದುಕೊಂಡಿದ್ದ ಕೋಳಿಯನ್ನು ಗಬಕ್ಕನೆ ಬಾಯೊಳಕ್ಕೆಳೆದುಕೊಂಡು ತನ್ನ ಗುಹೆಯನ್ನು ಸೇರಿಕೊಂಡಿತು. ಆ ಅದ್ಭುತ ದೃಶ್ಯವು ದೊಡ್ಡಪ್ಪನ ಮಸೂರದೊಳಗೆ ಚಕಚಕನೆಂದು ಸೆರೆಯಾಯಿತು. ನೆರೆದಿದ್ದ ನಮಗೆಲ್ಲ ಎಂತಹ ರೋಮಾಂಚನ ಅಂತೀರಿ..! ಮರು ವಾರದ ‘ಉದಯವಾಣಿ ಸಾಪ್ತಾಹಿಕ’ದಲ್ಲಿ “ದೇವರ ಮೊಸಳೆಗೆ ಹರಕೆಯ ಕೋಳಿ” ಎಂಬ ಶೀರ್ಷಿಕೆಯಡಿ ದೊಡ್ಡಪ್ಪನ ಚಿತ್ರ-ಲೇಖನವು ಅಚ್ಚಾಗಿತ್ತು. ತತ್ಪರಿಣಾಮ ಹರಕೆಯ ಕೋಳಿಗಳು ಬರುವುದು ಹೆಚ್ಚಾದವು ಜೊತೆಗೆ ಬಬಿಯನ ಹಸಿವೂ ದೂರವಾಯಿತು. ಆದರೀಗ ‘ಬಬಿಯನಿಗೆ ಹರಕೆಯ ಕೋಳಿ’ ಕೊಡುವುದನ್ನು ನಿಲ್ಲಿಸಲಾಗಿದೆ.

ಕ್ಷೇತ್ರಕ್ಕೆ ಕ್ರಮೇಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಬಬಿಯನ ದರ್ಶನಕ್ಕಾಗಿ ಅವನ ಗುಹೆಯ ಮೇಲೆ ನಿಂತು ಅವನನ್ನು ಹೊರಕ್ಕೆ ಕರೆಯಲು ಪ್ರವಾಸಿಗರು ಕೈಗೆ ಸಿಕ್ಕಿದ್ದನ್ನು ಎಸೆಯುತ್ತಿದ್ದರು. ಮೊದ ಮೊದಲು ಹೊರಕ್ಕೆ ಚಾಚಿಕೊಂಡವನ ಮೇಲೆ ಸಣ್ಣ ಪುಟ್ಟ ಕಲ್ಲುಗಳು ಬೀಳಲು ಆತ ಮುನಿದು ಹೊರಕ್ಕೆ ಬರುವುದನ್ನೇ ನಿಲ್ಲಿಸಿದ. ಉಭಯ ಜೀವಿಯಾದ ‘ಬಬಿಯ’ನು ನೀರೊಳಗೂ-ಹೊರಗೂ ಬಂದು ಹೋಗಿ ಮಾಡುತ್ತಿದ್ದದ್ದು ಬಲು ಸಹಜವಾಗಿತ್ತು. ದೇವಳದ ಪ್ರಾಂಗಣದೊಳಕ್ಕೆ, ಕೆರೆದಂಡೆಯ ಮೇಲೆಲ್ಲಾ ಬರುವುದು ಅತೀ ಸಾಮಾನ್ಯವಾಗಿತ್ತು. ಅದು ಆತನ ಸಹಜ ನಡಿಗೆ.ಒಂದೊಮ್ಮೆ ರಾತ್ರಿಯ ವೇಳೆಯಲ್ಲಿ ತನ್ನಿಷ್ಟದಂತೆ ನಡೆಯುವ ಸಹಜ ಸಂಚಾರಿಯಾಗಿದ್ದ.

ಗರ್ಭಗುಡಿಯ ಬಾಗಿಲು ಯಾವತ್ತೂ ಮುಚ್ಚಿರುತ್ತದೆ. ಅದನ್ನು ಅರ್ಚಕರೇ ಬಂದು ತೆಗೆಯುವ ಪದ್ಧತಿ. ಹೀಗಿರಲು ಗರ್ಭಗುಡಿಯೊಳಗೆ ಮೊಸಳೆ ಹೇಗೆ ಹೋಗಲು ಸಾಧ್ಯ? ಹಿಂದೆ ಹೋದದ್ದಿಲ್ಲ. ಈಗ ಹೋಗಿಯೂ ಇಲ್ಲ. ಇದೀಗ ಮೊನ್ನೆ ಮೊನ್ನೆ ಪ್ರಾಂಗಣದೊಳಕ್ಕೆ ಕಾಣಿಸಿಕೊಂಡದ್ದರಲ್ಲಿ ಅಂತಹ ವಿಶೇಷವೇನಿಲ್ಲ.ಆದರೆ ಮಾಧ್ಯಮಗಳು ಅತಿರೋಚಕತೆಯನ್ನು ಸೃಷ್ಠಿಸಿ “ಗರ್ಭಗುಡಿಯೊಳಕ್ಕೆ ಬಬಿಯ” ಎಂದು ಬಿತ್ತರಿಸಿದವು. ಇಂದು ಸಂಪರ್ಕ ಸೇತು, ಮಾಧ್ಯಮ, ಮೊಬೈಲ್, ಕೆಮರಾಗಳು ಎಲ್ಲವೂ ಸೇರಿಕೊಂಡು ಹಿಂದೆಯೆಲ್ಲಾ ಸಾಮಾನ್ಯವಾಗಿ ಮೇಲೆ ಬರುತ್ತಲಿದ್ದ ಬಬಿಯ ಬಹಳ ಸಮಯದ ಬಳಿಕ ನೀರಿನ ಮೇಲೆ ಕಾಣಿಸಿದ್ದನ್ನು ಕಂಡದ್ದೇ ಅದನ್ನು ಚಿತ್ರೀಕರಿಸಿಕೊಂಡು ಸಂಪರ್ಕ ಸೇತುಗಳಲ್ಲಿ ಹರಿಯಬಿಟ್ಟದ್ದು ‘ಸಂಭವನೀಯವೊಂದು ಅಸಂಭವನೀಯವೆಂದೇ’ ವರದಿಯಾಯಿತು. ಮುಂದುವರಿದು ಈ ವಿಚಾರವು ಮುಂದಾಗಲಿರುವ ಅನಾಹುತಗಳ ಲಕ್ಷಣವೇನೋ? ಎಂದು ಪ್ರಶ್ನಿಸಿ ಟಿವಿ ಮಾಧ್ಯಮವೊಂದರಲ್ಲಿ ಬಿತ್ತರಿಸಲಾಯಿತು. ಕರೋನಾದಿಂದ ಮನೆಯೊಳಗೇ ಬಂಧಿಯಾಗಿದ್ದ ಮನುಷ್ಯ ಹೊರ ಪ್ರಪಂಚಕ್ಕೆ ತನ್ನನ್ನು ತಾನು ತೆರೆದುಕೊಂಡು ಇತರೆ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡದುದರ ಪರಿಣಾಮವಿದು.

ಯಾವುದೇ ವಿಷಯದ ಕುರಿತಾಗಿ ಬರೆಯುವಾಗ ಆ ವಿಷಯದ ಕುರಿತಂತೆ ಖಚಿತ ಮಾಹಿತಿ ಇದ್ದರೆ ಮಾತ್ರ ಅಧಿಕೃತವಾಗಿ ಬರೆಯಬೇಕು. ಇಲ್ಲವಾದಲ್ಲಿ ಅಂತಹ ದುಸ್ಸಾಹಸಕ್ಕೆ ಹೋಗಲೇಬಾರದು. ಮೊಸಳೆಯ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಮಾಧ್ಯಮದಲ್ಲಿ ಬರುತ್ತಿರುವುದೆಲ್ಲವೂ ತಪ್ಪು ಮಾಹಿತಿಗಳೇ. ಅವರವರ ಕಲ್ಪನೆಗಳಿಗೆ ರಂಜನೀಯ ಅಂಶವನ್ನು ಬೆರೆಸಿ ಅತಿರೋಚಕವನ್ನಾಗಿಸಿ ತಮ್ಮ ಮೂಗಿನ ನೇರಕ್ಕೆ ಕಟ್ಟಿದ ಅಂತೆ-ಕಂತೆಗಳ ಕಟ್ಟು ಕತೆ. ಈ ರೀತಿ ಮನರಂಜನೆಗಾಗಿ ತಪ್ಪು ಮಾಹಿತಿಯನ್ನು ನೀಡುವುದು ಯಾರಿಗಾದರೂ ಶೋಭೆ ತರುವ ಕಾರ್ಯವಲ್ಲ. ಅಷ್ಟಕ್ಕೂ ವಾಸ್ತವ ಈಗ ಯಾರಿಗೆ ಬೇಕಿದೆ ಹೇಳಿ?

ಇಷ್ಟೆಲ್ಲಾ ಆಗಿಯೂ ಕಂಡವರ ಹಾಗು ಕಾಣದವರ ಕಣ್ಣಿಗೆ, ಚಿಂತಿಸದವರ ಮತ್ತು ಯೋಚಿಸುವವರ ಬುದ್ದಿಗೆ, ಕೇಳಿದವರ, ಕೇಳಿಸಿಕೊಳ್ಳದವರ ಕಿವಿಗೆ ಅವರಿಷ್ಠವೇ ಪರರಿಷ್ಠವೂ ಆಗಿಬರುವ ಈ ಹೊತ್ತಲ್ಲಿ, ನನಗೆ ಮಾತ್ರ ನಾನು ಕಂಡ, ತಿಳಿದ ಮತ್ತು ಕೇಳಿದ ಸತ್ಯ ಇಷ್ಟವೂ, ನಿಷ್ಠವೂ ಆಗಿದೆ ಮತ್ತು ಆಗಿರುತ್ತದೆ ಎನ್ನುವುದರಲ್ಲಿ ಸಂತಸ, ತೃಪ್ತಿಯಿದೆ. ಕಾರಣ ನನ್ನೂರು, ನನ್ನೂರಿನ ‘ಬಬಿಯ’ ಎಂಬ ನೈಜ್ಯ ಸತ್ಯವು ನನ್ನ ಹೆಮ್ಮೆ. ಅದು ಎಲ್ಲರದ್ದೂ ಆಗಿಬರಲೆಂಬ ಹಂಬಲ ಮತ್ತು ನಿಜದ ಪ್ರಾರ್ಥನೆ ನನ್ನದು. vegetarian crocodile Babia

ಲೇಖನ:- ಸಂತೋಷ್ ಅನಂತಪುರ
ಹವ್ಯಾಸಿ ಬರಹಗಾರರು
ಬೆಂಗಳೂರು

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

Tags: #saakshatvPadmanabha temple Keralavegetarian crocodile Babia
ShareTweetSendShare
Join us on:

Related Posts

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

by Shwetha
July 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು...

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

by Shwetha
July 4, 2026
0

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟವು, ಈ ಆತಂಕಗಳಿಗೆ ನ್ಯಾಯಾಂಗವು ತಕ್ಷಣವೇ ಸ್ಪಂದಿಸದಿದ್ದರೆ ಭಾರತೀಯ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

₹2,000 ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಾಧ್ಯತೆ; ಶೀಘ್ರದಲ್ಲೇ ಮಾರ್ಗಸೂಚಿ

by Shwetha
July 4, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರು ಹಾಗೂ ಆದಾಯ ತೆರಿಗೆ (IT) ಮತ್ತು GST ಪಾವತಿದಾರರ ಖಾತೆಗಳಿಗೆ ಸಹ ಹಣ ಜಮೆಯಾಗಿರುವ ಪ್ರಕರಣಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ಕಾಂಗ್ರೆಸ್ ಸರ್ಕಾರಕ್ಕೆ ನಡುಕ ತಂದ ಕುಮಾರಸ್ವಾಮಿ ಹೇಳಿಕೆ 50 ಶಾಸಕರಿಂದ ದಿಲ್ಲಿ ಚಲೋ ಸಿದ್ಧತೆ

SIR ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ; ಸರ್ಕಾರದ ವಿರುದ್ಧ ಹೆಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

by Shwetha
July 4, 2026
0

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ...

ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದರೇ ದಿಗ್ವಿಜಯ್ ಸಿಂಗ್: ಕಾಂಗ್ರೆಸ್ ಹಿರಿಯ ನಾಯಕನಿಗೆ ರಾಜ ಮರ್ಯಾದೆಯ ಆಫರ್ ನೀಡಿದ ಬಿಜೆಪಿ!?-ದಿಗ್ವಿಜಯ್ ಸಿಂಗ್ ನಡೆಯಿಂದ ಕಂಗೆಟ್ಟ ಕಾಂಗ್ರೆಸ್ ಹೈಕಮಾಂಡ್!

ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದರೇ ದಿಗ್ವಿಜಯ್ ಸಿಂಗ್: ಕಾಂಗ್ರೆಸ್ ಹಿರಿಯ ನಾಯಕನಿಗೆ ರಾಜ ಮರ್ಯಾದೆಯ ಆಫರ್ ನೀಡಿದ ಬಿಜೆಪಿ!?-ದಿಗ್ವಿಜಯ್ ಸಿಂಗ್ ನಡೆಯಿಂದ ಕಂಗೆಟ್ಟ ಕಾಂಗ್ರೆಸ್ ಹೈಕಮಾಂಡ್!

by Shwetha
July 4, 2026
0

ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಎಂಬ ಮಾತಿಗೆ ಮಧ್ಯಪ್ರದೇಶದ ಈಗಿನ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ. ದಶಕಗಳಿಂದ ಬಿಜೆಪಿಯ ಕಡುವೈರಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram