ಸೆಪ್ಟೆಂಬರ್ 30 ಕ್ಕೆ ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು – ಎಲ್ಲಾ ಆಪಾದಿತರಿಗೆ ಕೋರ್ಟ್ ನಲ್ಲಿ ಹಾಜರಿರಲು ಸೂಚನೆ
ಲಕ್ನೋ, ಸೆಪ್ಟೆಂಬರ್16: 1992 ರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ತೀರ್ಪು ನೀಡಲು ಸುಪ್ರೀಂ ಕೋರ್ಟ್ ಲಕ್ನೋದಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ಗಡುವನ್ನು ಸೆಪ್ಟೆಂಬರ್ 30 ಕ್ಕೆ ನಿಗದಿ ಪಡೆಸಿದೆ.
ಈ ಮೊದಲು ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಲು ಸಿಬಿಐ ನ್ಯಾಯಾಲಯಕ್ಕೆ ಉನ್ನತ ನ್ಯಾಯಾಲಯವು ಆಗಸ್ಟ್ 31 ರ ಗಡುವನ್ನು ನಿಗದಿಪಡಿಸಿತ್ತು. ಇದರಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಎಂ.ಎಂ.ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಸಾಧ್ವಿ ರಿತಂಭರ ಸೇರಿದಂತೆ ಒಟ್ಟು 32 ಮಂದಿ ಪ್ರಮುಖ ಆಪಾದಿತರ ಪಟ್ಟಿಯಲ್ಲಿದೆ.
ವಿಶೇಷ ನ್ಯಾಯಾಧೀಶರಾದ ಶ್ರೀ ಸುರೇಂದ್ರ ಕುಮಾರ್ ಯಾದವ್ ಅವರು ವಿಚಾರಣೆಯನ್ನು ಪೂರ್ಣಗೊಳಿಸಿ 2020 ಸೆಪ್ಟೆಂಬರ್ 30 ರಂದು ತೀರ್ಪು ಪ್ರಕಟಿಸಲಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಸೇರಿದಂತೆ ಪ್ರಕರಣದ ಎಲ್ಲಾ ಅಪಾದಿತರಿಗೆ ಕೋರ್ಟ್ ನಲ್ಲಿ ಹಾಜರಿರಲು ಸೂಚನೆ ನೀಡಲಾಗಿದೆ.
ರಾಮ ಮಂದಿರವು ಅದೇ ಸ್ಥಳದಲ್ಲಿದೆ ಎಂದು ಹೇಳಿಕೊಂಡ ಕರ ಸೇವಕರು ಅಯೋಧ್ಯೆಯ ಮಸೀದಿಯನ್ನು ಡಿಸೆಂಬರ್ 6, 1992 ರಂದು ಧ್ವಂಸ ಮಾಡಿದ್ದರು. ಆ ಸಮಯದಲ್ಲಿ ರಾಮ ಮಂದಿರ ಆಂದೋಲನವನ್ನು ಮುನ್ನಡೆಸಿದವರಲ್ಲಿ ಅಡ್ವಾಣಿ ಮತ್ತು ಜೋಶಿ ಸೇರಿದ್ದರು.