ದುರ್ಗಾಪುರ: ಬಿಜೆಪಿ ಮುಖಂಡ ಹಾಗೂ ಕಲ್ಲಿದ್ದಲು ವ್ಯಾಪಾರಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಬಿಜೆಪಿ ಮುಖಂಡ ರಾಜೇಶ್ ಅಲಿಯಾಸ್ ರಾಜು ಝಾ ಅವರನ್ನು ಶನಿವಾರ ಸಂಜೆ ಪಶ್ಚಿಮ ಬಂಗಾಳದ ದುರ್ಗಾಪುರದ ಶಕ್ತಿಗಢದಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ರಾಜು ಝಾ ತಮ್ಮ ಕಾರಿನಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಶಕ್ತಿಘಡದಲ್ಲಿ ಅವರ ಕಾರಿನ ಪಕ್ಕದಲ್ಲಿ ಮತ್ತೊಂದು ವಾಹನ ಬಂದು ನಿಂತಿದೆ. ಆಗ ಕಾರಿನೊಳಗಿದ್ದ ದುಷ್ಕರ್ಮಿಗಳು ರಾಜು ಝಾ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ರಾಜು ದೇಹ ಹೊಕ್ಕಿದ್ದು, ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ, ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬ್ರಾಟಿನ್ ಬ್ಯಾನರ್ಜಿ ಎಂಬುವವರು ಪರಾರಿಯಾಗಲು ಯತ್ನಿಸಿದ್ದು, ಅವರಿಗೂ ಗುಂಡು ತಗುಲಿದೆ.
ಗಂಭೀರವಾಗಿ ಗಾಯಗೊಂಡಿರುವ ಬ್ಯಾನರ್ಜಿಯನ್ನು ಪೊಲೀಸರು ರಕ್ಷಿಸಿ, ಬುರ್ದ್ವಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಬ್ಯಾನರ್ಜಿ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡರಂಗದ ಆಡಳಿತದಲ್ಲಿ ಕಲ್ಲಿದ್ದಲು – ಬ್ಲ್ಯಾಕ್ ಡೀಲಿಂಗ್ ಸಿಂಡಿಕೇಟ್ ನ ಕಿಂಗ್ ಪಿನ್ ಆಗಿದ್ದ ರಾಜು ಝಾ ಅವರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಿದ್ದರು. ಸಾರಿಗೆ ವ್ಯವಹಾರದಿಂದ ಹೊಟೇಲ್ ಉದ್ಯಮದಲ್ಲಿಯೂ ಅವರು ತೊಡಗಿಕೊಂಡಿದ್ದರು. ಸದ್ಯ ಶಕ್ತಿಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.