ಗಣಿ ನಾಡು ಬಳ್ಳಾರಿಯಲ್ಲಿ ಕಳೆದ ಕೆಲ ದಿನಗಳಿಂದ ವರುಣ ರೌದ್ರವಾತಾರ ತೋರಿದ್ದು, ಮಳೆ ಆರ್ಭಟಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.. ರಸ್ತೆಗಳೆಲ್ಲಾ ಜಲಾವೃತಗೊಂಡು ನದಿಯಂತೆ ಹರಿಯುತ್ತಿವೆ. ಹೀಗೆ ರಭಸವಾಗಿ ಹರಿಯುತ್ತಿರುವ ನೀರಿನಲ್ಲೇ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಇನ್ನೂ ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹೆಚ್ ಹೊಸಹಳ್ಳಿಯಲ್ಲಿನ ಹಳ್ಳ ಅಪಾಯದ ಮಟ್ಟ ಮೀರಿ ಹರೆಯುತ್ತಿದೆ. ಇದರಿಂದಾಗಿ ಸಿರಗುಪ್ಪ – ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಯಿದೆ. ಕಳೆದ ಒಂದು ವಾರದಿಂದಲೂ ಈ ಹಳ್ಳ ತುಂಬಿ ಹರಿಯುತ್ತಿದ್ದು. ಬೇರೆ ಗ್ರಾಮಗಳಿಗೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಒಂದೆಡೆ ರಭಸವಾಗಿ ಹರಿಯುವ ಹಳ್ಳದಲ್ಲಿ ವಾಹನಗಳನ್ನು ಚಲಾಯಿಸುವುದಾಗಲಿ ನಡೆದುಕೊಂಡು ಹೋಗುವುದಾಗಲಿ ಕಷ್ಟಸಾಧ್ಯ ಎಂಬಂತಾಗಿದೆ. ಹೀಗಿರುವಾಗ ಟ್ರ್ಯಾಕ್ಟರ್ ಬಿಟ್ಟರೆ ಬೇರೆ ವಾಹನಗಳಲ್ಲಿ ಹಳ್ಳ ದಾಟಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಮತ್ತೊಂದೆಡೆ ರಭೆಸವಾಗಿ ಹರಿಯುತ್ತಿರುವ ನೀರಿನಲ್ಲಿ ಕೆಲವರು ಬಟ್ಟೆ ಒಗೆಯುತ್ತಿರುವುದು ಕಂಡುಬಂದರೆ ಇನ್ನೂ ಕೆಲವರು ಜಾನುವಾರಗಳನ್ನು ತೊಳೆಯುತ್ತಿದ್ದಾರೆ.
ಇನ್ನೂ ಹಳ್ಳದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಈವರೆಗೂ 7ಕ್ಕೂ ಹೆಚ್ಚು ದನಕರುಗಳು ಕೊಚ್ಚಿಹೋಗಿ ನೀರುಪಾಲಾಗಿವೆ. ಒಟ್ನಲ್ಲಿ ಮಳೆ ಆರ್ಭಟ ಗಣಿನಾಡು ಬಳ್ಳಾರಿಯಲ್ಲಿ ಅವಾಂತರ ಸೃಷ್ಟಿಸಿದ್ದು, ಜನರು ಹೈರಾಣಾಗಿದ್ದಾರೆ. ಬಳ್ಲಾರಿ ಹೇಳಿಕೇಳಿ ಬರದನಾಡು ಎಂದೇ ಖ್ಯಾತಿ ಪಡೆದಿದ್ದ ಜಿಲ್ಲೆ. ಆದರೆ ಇದಕ್ಕೆ ತದ್ವಿರುದದ್ಧ ಎಂಬಹಾಗೆ ಈ ಬಾರಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಕೆಲವರಲ್ಲಿ ಸಂತಸ ಮುಡಿಸಿದ್ರೆ , ಇನ್ನೂ ಹಲವರು ಕಂಗಾಲಾಗುವಂತೆ ಮಾಡಿದೆ.