ದುಡ್ಡು ದುಡ್ಡ ಅಂತ ಸಾಯ್ತೀರಾ.. ಈಗ ದುಡ್ಡು ಕೊಡ್ತೀನಿ ನಮ್ಮ ತಂದೆಯನ್ನ ಬದುಕಿಸಿಕೊಡಿ.. ಬೆಡ್ ಬ್ಲಾಕಿಂಗ್ ಕೇಸ್.. ಮೃತನ ಮಕ್ಕಳ ಆಕ್ರಂದನ..!
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ಪರಿಸ್ಥಿತಿ ಅತಿ ಭೀಕರವಾಗಿದೆ. ರಾಜ್ಯದಲ್ಲಿ ಜನರು ಬೆಡ್ ಕೊರತೆ ಆಕ್ಸಿಜನ್ ಕೊರತೆಯಿಂದಾಗಿ ಸಾಯುತ್ತಿದ್ದಾರೆ. ಆದ್ರೆ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಕೆಟ್ಟ ಪರಿಸ್ಥಿಯಲ್ಲಿ ಜನರ ಜೀವ ಲೆಕ್ಕಿಸದೇ ದುಡ್ಡು ಮಾಡುವ ದಂಧೆಗೆ ಕೈಹಾಕಿರುವ ಆರೋಪಗಳು ಕೇಳಿ ಬರುತ್ತಿದೆ. ನಿನ್ನೆ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಾಗಿದ್ದು, ಆರೋಪಗಳಿಗೆ ಪುಷ್ಠಿ ನೀಡಿವೆ. ಬೆಂಗಳೂರು ಆಸ್ಪತ್ರೆಗಳ ವಂಚನೆಯನ್ನ 63ವರ್ಷದ ತಂದೆಯನ್ನು ಕಳೆದುಕೊಂಡ ಮಕ್ಕಳು ಬಟಾಬಯಲು ಮಾಡಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಯನ್ನು ಕರೆದುಕೊಂಡು 100 ಆಸ್ಪತ್ರೆಗಳನ್ನು ಸುತ್ತಿದರೂ ಆಕ್ಸಿಜನ್ ಸಿಕ್ಕಿಲ್ಲ. ಪ್ರೈವೇಟ್ ಆಸ್ಪತ್ರೆಯವರು ಒಳಗಡೆ ಬಿಟ್ಟಿಕೊಳ್ಳಲು ಹಿಂದೇಟು ಹಾಕಿದರು. ಎಲ್ಲಿ ಹೋದರೂ BU ನಂಬರ್ ಅಂತ ಕೇಳ್ತಾರೆ. ಆದ್ರೆ, 4 ದಿನ ಕಳೆದ್ರೂ ನಂಬರ್ ಜನರೇಟ್ ಆಗಿಲ್ಲ. ನೈಸರ್ಗಿಕ ಗಾಳಿ ಸಿಕ್ಕು ಅದರಿಂದಾದರೂ ತಂದೆ ಉಳಿಯಬಹುದು ಎಂದು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿದ್ದೀವಿ. ಅಂತೂ ಕೊನೆಗೆ ಸರ್ಕಾರಿ ಆಸ್ಪತ್ರೆ ಬೌರಿಂಗ್ನಲ್ಲಿ ಬೆಡ್ ಸಿಕ್ಕಿತು. ಆದ್ರೆ ಅವರು ಆಕ್ಸಿಜನ್ ಕೊಡದೇ ನಮ್ಮ ತಂದೆಯನ್ನು ಸಾಯಿಸಿಯೇ ಬಿಟ್ಟರು ಎಂದು ಮೃತ ವ್ಯಕ್ತಿಯ ಮಗ ಹಾಗೂ ಮಗಳು ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಒಂದು ರೀತಿಯಾದ್ರೆ ಸರ್ಕಾರಿ ಆಸ್ಪತ್ರೆಗಳದ್ದು ಇನ್ನೊಂದು ರೀತಿಯ ಅವಸ್ಥೆ. ಎಲ್ಲಿ ಹೋದ್ರೂ, ಎಲ್ಲದಕ್ಕೂ ದುಡ್ಡು ದುಡ್ಡು ಅಂತ ಸಾಯ್ತಾರೆ. ಮೊಬೈಲ್ ಚಾರ್ಜ್ ಹಾಕ್ಬೇಕು ಅಂದ್ರೂ, ರೋಗಿನಾ ನೋಡ್ಬೇಕಂದ್ರೂ ದುಡ್ಡು ಕೇಳ್ತಾರೆ. ಈಗ ದುಡ್ಡು ಕೊಡ್ತೇನೆ ನಮ್ಮ ತಂದೆಯನ್ನ ವಾಪಾಸ್ ಕೊಡ್ತಾರಾ ಎಂದು ಕಣ್ಣೀರಾಕಿದ್ದಾರೆ. ಕುಡಿಯೋಕೆ ನೀರು ಕೇಳಿದ್ರೆ ಕೊಟ್ಟಿಲ್ಲ. ಡೈಪರ್ ಹಾಕಿ ಅಂತ ತಂದು ಕೊಟ್ರೆ ಅದನ್ನೂ ಹಾಕಿಲ್ಲ. ಆಸ್ಪತ್ರೆಯಲ್ಲಿ ಎಲ್ಲವನ್ನೂ ಮಾರಿಕೊಳ್ತಿದ್ದಾರೆ. ನಮ್ಮ ತಂದೆ ಮೈ ಮೇಲಿನ ಒಡವೆಗಳನ್ನೆಲ್ಲಾ ಕೊಟ್ರೂ ಅವರನ್ನ ಶವವಾಗಿ ಕೊಟ್ಟಿದ್ದಾರೆ ಅಂತ ಮೃತರ ಮಕ್ಕಳು ಕಣ್ಣೀರು ಹಾಕಿದ್ದಾರೆ.
ತಂದೆಯನ್ನ ಉಳಿಸಿಕೊಳ್ಳಲು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಆಕ್ಸಿಜನ್ ಸಿಗದೇ ನಮ್ಮ ತಂದೆ ತೀರಿಕೊಂಡಿದ್ದಾರೆ. ಅವರ ಸಾವಿಗೆ ಈ ಸರ್ಕಾರವೇ ಕಾರಣ. ನಾವು ಇಬ್ಬರು ಮಕ್ಕಳಿದ್ದರೂ ತಂದೆಯನ್ನ ಉಳಿಸಿಕೊಳ್ಳಲಾಗಲಿಲ್ಲ. ಈ ರೀತಿ ವ್ಯವಸ್ಥೆ ಇದ್ದರೆ ಏನು ಮಾಡ್ಬೇಕು. ಬರೀ ಹಣಕ್ಕಾಗಿ ಆಸ್ಪತ್ರೆಗಳು ಕೆಲಸ ಮಾಡ್ತಾವಾ. ಅಲ್ಲಿ ಇರುವವರಿಗೆ ಹಣ ಕೊಟ್ಟರೆ ಸತ್ತವರನ್ನೂ ಬದುಕಿಸ್ತಾರಾ. ಎಂದು ದುಃಖ ಹೊರಹಾಕಿದ್ದಾರೆ.
ಒಂದೆಡೆ ದೇಶದಲ್ಲಿ ಕೊರೊನಾಗೆ ಲೆಕ್ಕವಿಲ್ಲದಷ್ಟು ಮಂದಿ ಬಲಿಯಾಗ್ತಿದ್ದಾರೆ. ಅದೆಷ್ಟೋ ಜನರು ತಮ್ಮವರನ್ನ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಿನಿ ತಾರಯರು ಸಹ ತಮ್ಮರನ್ನ ಕಳೆದುಕೊಂಡು ನೋವನ್ನ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ತಿದ್ದಾರೆ. ಸೋಂಕಿತರು ಬೆಡ್ ಸಿಗದೇ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಗೆ ಬಂದು ದೇಶ ತಲುಪಿದೆ. ಅಂತಹದ್ರಲ್ಲಿ ತೀರಾ ಮನಕಲಲಕುಂತಹ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇದೆ.. ಇಂತಹ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗಳು ಧನದಾಹಿಗಳಂತೆ ವರ್ತಿಸುತ್ತಾ ಜನರ ಜೀವದ ಜೊತೆಗೆ ಚೆಲ್ಲಾಟವಾಡ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಕೊರೊನಾಗೆ ತಂದೆ ಬಲಿ – ದುಃಖ ತಾಳಲಾರದೇ ಚಿತೆಗೆ ಹಾರಿದ ಮಗಳು