ಅಯೋಧ್ಯೆ : ಅಯೋಧ್ಯೆಯ ಪವಿತ್ರ ಶ್ರೀರಾಮ ಮಂದಿರದ ಕಾಣಿಕೆ ಪೆಟ್ಟಿಗೆಗೆ ಕನ್ನ ಹಾಕಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈಗ ಬೆಚ್ಚಿಬೀಳಿಸುವ ಸತ್ಯಗಳು ಲಭ್ಯವಾಗಿವೆ. ಭಕ್ತರು ಭಕ್ತಿಯಿಂದ ಅರ್ಪಿಸಿದ ಹಣವನ್ನು ಎಣಿಕೆ ಮಾಡುವ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಮುಖ ಆರೋಪಿ ಅವಿನಾಶ್ ಶುಕ್ಲ ಪೊಲೀಸರ ಮುಂದೆ ತನ್ನ ಐಷಾರಾಮಿ ಜೀವನದ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ.
ಹಣ ಕದ್ದು ರಾಜಾತಿಥ್ಯ ಅನುಭವಿಸಿದ ಕಳ್ಳ
ಕಾಣಿಕೆ ಪೆಟ್ಟಿಗೆಯಿಂದ ಕೋಟ್ಯಂತರ ರೂಪಾಯಿ ಕಳ್ಳತನವಾಗಿರುವ ಶಂಕೆ ವ್ಯಕ್ತವಾಗಿದ್ದರೂ, ಪ್ರಮುಖ ಆರೋಪಿ ಅವಿನಾಶ್ ಶುಕ್ಲ ತಾನು ಸುಮಾರು 20 ಲಕ್ಷ ರೂಪಾಯಿಗಳನ್ನು ಮಾತ್ರ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಣವನ್ನು ಆತ ತನ್ನ ಕುಟುಂಬ ಮತ್ತು ಗೆಳತಿಯ ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿದ್ದಾನೆ.
ಗೆಳತಿಗೆ ಐಫೋನ್ ಉಡುಗೊರೆ
ತಾನು ಕದ್ದ ಹಣದಲ್ಲಿ ಅವಿನಾಶ್ ತನ್ನ ಗೆಳತಿಗೆ ಅತ್ಯಂತ ಬೆಲೆಬಾಳುವ ಐಫೋನ್ ಗಿಫ್ಟ್ ನೀಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಬ್ಯಾಂಕ್ ಖಾತೆಗೆ ಬರೋಬ್ಬರಿ 2.5 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾನೆ. ಇನ್ನು ತನ್ನ ಅಣ್ಣನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು 6 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಇನ್ನೊಬ್ಬ ಸಹೋದರನಿಗೆ 5 ರಿಂದ 6 ಲಕ್ಷ ರೂಪಾಯಿ ಹಣ ನೀಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಐಷಾರಾಮಿ ಹೋಟೆಲ್ ಗಳಲ್ಲಿ ಮೋಜು ಮಸ್ತಿ
ಕಳ್ಳತನ ಮಾಡಿದ ಹಣದಲ್ಲಿ ತನ್ನ ಸ್ನೇಹಿತರು ಮತ್ತು ಸಂಬಂಧಿಕರನ್ನು ಅತ್ಯಂತ ದುಬಾರಿ ಹೋಟೆಲ್ಗಳಿಗೆ ಕರೆದೊಯ್ದು ಈತ ಮೋಜು ಮಸ್ತಿ ಮಾಡಿದ್ದಾನೆ. ಈ ಪ್ರಕರಣದಲ್ಲಿ ಒಟ್ಟು ಎಂಟು ಮಂದಿ ಸಿಬ್ಬಂದಿಗಳ ಮೇಲೆ ಕಳ್ಳತನದ ಆರೋಪವಿದ್ದು, ಅವರಲ್ಲಿ ಅವಿನಾಶ್ ಶುಕ್ಲನೇ ಅತಿ ಹೆಚ್ಚು ಹಣವನ್ನು ಲಪಟಾಯಿಸಿದ್ದಾನೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತಿವೆ.
ಜಾಲಾಡಲಾಗುತ್ತಿದೆ ಬ್ಯಾಂಕ್ ಖಾತೆಗಳು
ಪ್ರಸ್ತುತ ಪೊಲೀಸರು ಈ ಎಂಟು ಮಂದಿ ಶಂಕಿತರ ಬ್ಯಾಂಕ್ ಖಾತೆಗಳು, ಹಣಕಾಸಿನ ವಹಿವಾಟುಗಳು ಮತ್ತು ಅವರು ಇತ್ತೀಚೆಗೆ ಖರೀದಿಸಿದ ಆಸ್ತಿಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾದ ರಾಮ ಮಂದಿರದ ಹಣವನ್ನು ಹೀಗೆ ವೈಯಕ್ತಿಕ ಸುಖಕ್ಕಾಗಿ ಬಳಸಿಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಭಕ್ತರ ಕಾಣಿಕೆಗೆ ದ್ರೋಹ ಬಗೆದ ಈ ವಂಚಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.








