ಕೊರೋನಾ ಸೋಂಕಿನ ವಿರುದ್ಧದ ಮಹಾ ಯುದ್ಧದಲ್ಲಿ ಗೆಲುವು ಸಾಧಿಸಲು ಕೇಂದ್ರ ಸರಕಾರವು ರಾಜ್ಯಗಳಿಗೆ 15,000 ಕೋಟಿ ರೂಪಾಯಿ ಗಳ ಬೃಹತ್ ತುರ್ತು ಪ್ಯಾಕೇಜನ್ನು ಘೋಷಿಸಿದೆ.
ಕೊರೋನಾ ಸೋಂಕಿನ ತಡೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಪ್ಯಾಕೇಜನ್ನು ಘೋಷಿಸಿದೆ.
ಮೂರು ಹಂತಗಳಲ್ಲಿ ತುರ್ತು ಪ್ಯಾಕೇಜನ್ನು ಅನುಷ್ಠಾನಗೊಳಿಸಲಿದ್ದು, ಮೊದಲ ಹಂತ 2020ರ ಜ. 1ರಿಂದ ಜೂನ್ 2020, ಎರಡನೇ ಹಂತ 2020ರ ಜುಲೈನಿಂದ 2021ರ ಮಾರ್ಚ್ ಹಾಗೂ ಮೂರನೇ ಹಂತ 2021ರ ಎಪ್ರಿಲ್ನಿಂದ 2024ರ ಮಾರ್ಚ್ ಗಳಲ್ಲಿ ಜಾರಿಗೆ ಬರಲಿದೆ.
ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ, ಭವಿಷ್ಯದಲ್ಲಿ ಕೋವಿಡ್-19 ಸೋಂಕಿನ ಹಾವಳಿ ಪುನಃ ಭುಗಿಲೆದ್ದರೆ, ಮತ್ತೆ ಹೋರಾಟಕ್ಕೆ ಸನ್ನದ್ಧವಾಗಿರುವ ಮಹತ್ವದ ಉದ್ದೇಶವೂ ಈ ಪ್ಯಾಕೇಜ್ ನ ಹಿಂದಿದೆ.
ಈಗಾಗಲೇ ಮೊದಲ ಹಂತದ ಪ್ಯಾಕೇಜ್ ನ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 4,113 ಕೋ.ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಮುಂದಿನ ಹಂತಗಳಲ್ಲಿ ಆಯಾ ಸಮಯದ ಅಗತ್ಯಗಳಿಗೆ ಅನುಗುಣವಾಗಿ ಹಣ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಮೊದಲ ಹಂತದ ಪ್ಯಾಕೇಜ್ ನ ಯೋಜನೆಗಳು
1. ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು.
2. ಕೋವಿಡ್ -19 ಪತ್ತೆ ಹಚ್ಚುವ ಪರೀಕ್ಷಾ ಲ್ಯಾಬ್ ಗಳನ್ನು ಮತ್ತು ಐಸೋಲೇಷನ್ ಬ್ಲಾಕ್ಗಳನ್ನು ಮೇಲ್ದರ್ಜೆಗೇರಿಸುವುದು.
3. ಐಸಿಯುಗಳಲ್ಲಿ ವೆಂಟಿಲೇಟರ್, ಆಮ್ಲಜನಕ ಸರಬರಾಜು ವ್ಯವಸ್ಥೆ ಜಾರಿ ಪಡಿಸುವುದು.
4. ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್ ಖರೀದಿಸುವುದು
5. ಪ್ರಯೋಗಾಲಯಗಳಿಗೆ ಸೋಂಕುಪೀಡಿತರ ಪರೀಕ್ಷಾ ಮಾದರಿಗಳನ್ನು ತ್ವರಿತವಾಗಿ ರವಾನಿಸುವ ವ್ಯವಸ್ಥೆ ಜಾರಿಗೊಳಿಸಲು.
6. ಆಸ್ಪತ್ರೆ ಸರಕಾರಿ ಕಚೇರಿ, ಸಾರ್ವಜನಿಕ ವಾಹನ, ಆ್ಯಂಬುಲೆನ್ಸ್ಗಳನ್ನು ಸೋಂಕುರಹಿತವಾಗಿಸುವುದು.
ಕೋವಿಡ್-19 ವೈರಸ್ ಸೋಂಕು ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆಗಳ ನಿರ್ಮಾಣ, ಎಲ್ಲಾ ರೀತಿಯ ಸೌಕರ್ಯಗಳನ್ನು ಒಳಗೊಂಡಿರುವ ಸರ್ವ ಸುಸಜ್ಜಿತ ಐಸೋಲೇಷನ್ ವಾರ್ಡ್ಗಳುಳ್ಳ ಬ್ಲಾಕ್ಗಳ ನಿರ್ಮಾಣ, ಆಸ್ಪತ್ರೆಗಳ ಐಸಿಯುಗಳಲ್ಲಿ ವೆಂಟಿಲೇಟರ್, ಆಮ್ಲ ಜನಕ ಸರಬರಾಜು ವ್ಯವಸ್ಥೆ, ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಪರಿಕರ (ಪಿಪಿಇ)ಗಳ ಸಂಗ್ರಹ
ಮುಂತಾದ ವ್ಯವಸ್ಥೆಗಳನ್ನು ಪ್ಯಾಕೇಜ್ ಒಳಗೊಂಡಿದೆ.