ಮೈಸೂರು : ಸಾಗರದಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಎಫ್ ಐಆರ್ ದಾಖಲಾದ ಹಿನ್ನೆಲೆ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಗರದ ಪ್ರವೀಣ್ ಎಂಬ ವ್ಯಕ್ತಿ ಸೋನಿಯಾ ಗಾಂಧಿಯವರ ಮೇಲೆ ಮೊಕದ್ದಮೆ ದಾಖಲು ಮಾಡಿರುವುದು ರಾಜಕೀಯ ಪ್ರೇರಿತ. ಅದು ಅವರ ವೈಯಕ್ತಿಕ ಟ್ವೀಟ್ ಅಲ್ಲ. ಅದು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆಯಾಗಿದೆ. ಜೆ. ಪಿ. ನಡ್ಡಾ ಅವರು ಡಿಜಿ ಐಜಿಪಿ ಪ್ರವೀಣ್ ಸೂದ್ ಗೆ ಎಫ್ ಐಆರ್ ದಾಖಲಿಸುವಂತೆ ಪ್ರಭಾವ ಬೀರಿದ್ದಾರೆ. ಎಫ್ ಐಆರ್ ದಾಖಲಿಸಿದ ಮಾತ್ರಕ್ಕೆ ನಾವು ಯಾವುದೇ ಕಾರಣಕ್ಕೂ ಧೃತಿಗೆಡುವುದಿಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ರಾಮ ಮಂದಿರ ವಿಚಾರದಲ್ಲಿ ಜನತೆಯ ಬಳಿ ಚಂದಾ ಎತ್ತಿದ್ದೀರಾ? ಆ ಹಣದ ಲೆಕ್ಕ ಕೇಳುವುದು ತಪ್ಪಾ..? ಒಂದು ಲಕ್ಷ ಕೋಟಿಯನ್ನು ಯಾವ ಬ್ಯಾಂಕ್ ನಲ್ಲಿ ಇಟ್ಟೀದ್ದೀರಿ ಹಾಗೂ ಇದರ ಲೆಕ್ಕ ಕೊಡಿ ಎಂದು ಪ್ರಶ್ನಿಸಿದ ಲಕ್ಷ್ಮಣ್, ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂಬುದು ಒತ್ತಾಯಿಸಿದ್ದಾರೆ.
ಇನ್ನು ಇದೇ ವೇಳೆ ಮೈಸೂರಿನ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಅವರು, ಪತ್ರಿಕೆಗಳಲ್ಲಿ ಅಧಿಕಾರಿಗಳ ಜೊತೆ ಪ್ರತಾಪ್ ಸಿಂಹ ಫೋಟೊ ಹಾಕಿಸುತ್ತಿದ್ದಾರೆ. ಅವರೇನು ಕೊರೊನಾ ಯೋಧರಾ..? ಅವರು ಕೊರೊನಾ ವಿರುದ್ಧ ಎಲ್ಲಿ ಹೋರಾಟ ನಡೆಸಿದ್ದಾರೆ..? ಮೈಸೂರು ಭಾಗದಲ್ಲಿ ಅವರು ಏನ್ ಮಾಡಿದ್ದಾರೆ ಎಂದು ಪ್ರಶ್ನಿಸಿ ಪತ್ರಿಕೆಗಳಲ್ಲಿ ಕೊರೊನಾ ವಾರಿಯರ್ಸ್ ಫೋಟೋ ಹಾಕಲಿ ಎಂದು ಒತ್ತಾಯಿಸಿದರು.
ಇನ್ನು ಬಿಜೆಪಿ ನಾಯಕರು ದುಡ್ಡು ಕೊಟ್ಟು ಜಾಹೀರಾತು ಹಾಕಿಸುತ್ತಿದ್ದಾರೆ. ಬಿಜೆಪಿ ಅವರಿಗೆ ಬುದ್ಧಿ ಇಲ್ಲ. ಪ್ರತಾಪ್ ಸಿಂಹ, ರಾಮದಾಸ್ ಇಬ್ಬರು ಜಿಲ್ಲೆಯಲ್ಲಿ ಮಾಡಿರುವ ಕೆಲಸದ ಬಗ್ಗೆ ಮಾಹಿತಿ ಕೊಡಲಿ ಎಂದು ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.