ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ : ಮುನಿರತ್ನ
ಬೆಂಗಳೂರು : ಸಚಿವ ಸ್ಥಾನ ತಪ್ಪಿದ್ದಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೆಲ ಶಾಸಕರು ಅಸಮಾಧಾನ ಹೊರಹಾಕುತ್ತಿದ್ದರೇ, ಇತ್ತ ಮುನಿರತ್ನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ,
ವೈಯಾಲಿಕಾವಲ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ವಚನ ಭ್ರಷ್ಟರಲ್ಲ. ಅವರು ಮಾತು ತಪ್ಪಲ್ಲ. ಕೆಲವು ಸಂದರ್ಭಗಳಲ್ಲಿ ಹೀಗೆ ಆಗುತ್ತದೆ.
ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ ಪಕ್ಷಕ್ಕೆ ಕೆಟ್ಟದು ಮಾಡಿದ ಹಾಗೆ ಆಗುತ್ತದೆ. ಸಚಿವ ಸ್ಥಾನ ಸಿಗಲಿಲ್ಲ ಅಂತ ಕೆಟ್ಟದಾಗಿ ಮಾತಾಡಬಾರದು. ನಮ್ಮದು ರಾಷ್ಟ್ರೀಯ ಪಕ್ಷ. ಅಲ್ಲಿಂದ ಆದೇಶ ಬರುವುದು ವಿಳಂಬ ಆಗಬಹುದು.
ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದೇನೆ. ಸಚಿವ ಸ್ಥಾನ ಸಿಗಲಿ, ಸಿಗದೇ ಇರಲಿ. ಶಾಸಕನಾಗಿ ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಕಾರ್ಯಕರ್ತರನಾಗಿ ಪಕ್ಷದಲ್ಲಿ ಮುಂದುವರೆಯುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಅಸಮಾಧಾನ ಇದ್ದರೇ ವರಿಷ್ಠರ ಜೊತೆ ಮಾತನಾಡಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಗೌರವಯುತವಾಗಿ ಮಾತಾಡುವುದಕ್ಕೆ ಮುಖ್ಯಮಂತ್ರಿ ಎಲ್ಲಾ ಅವಕಾಶ ಮಾಡಿಕೊಡುತ್ತಿದ್ದಾರೆ.
ಕೆಲಸ ಮಾಡಿಸಿಕೊಳ್ಳಲು ಅವಕಾಶ ಕೊಟ್ಟಿದ್ದಾರೆ. ಆದರೂ ಪದೇ ಪದೆ ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದರೆ ಮುಖ್ಯಮಂತ್ರಿಗಳು ಇನ್ನೇನು ಹೇಳಲು ಸಾಧ್ಯ. ಹೈಕಮಾಂಡ್ ಬಳಿ ಹೋಗಿ ಎನ್ನಬೇಕು. ಅದನ್ನೇ ಹೇಳಿದ್ದಾರೆ ಎಂದರು.
ಇನ್ನು ನಿಮ್ಮ ಪರ ನಿಮ್ಮ ಜೊತೆಯಲ್ಲಿ ಬಿಜೆಪಿಗೆ ಬಂದವರು ಯಾಕೆ ಮಾತನಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ, ನನ್ನ ಜೊತೆಗೆ ಬಂದವರು ಎಲ್ಲಾ ಬ್ಯುಸಿ ಇದ್ದಾರೆ.
ಅವರು ಹುಬ್ಬಳ್ಳಿ , ಧಾರವಾಡ ಎಲ್ಲಾ ಕಡೆ ಬ್ಯುಸಿ ಇದ್ದಾರೆ. ಯಾರಿಗೂ ಮಾತಾಡುವುದಕ್ಕೆ ಸಮಯ ಇಲ್ಲ ಎಂದು ಮಿತ್ರಮಂಡಳಿ ಸದಸ್ಯರ ಬಗ್ಗೆ ವ್ಯಂಗ್ಯವಾಡಿದರು.









