ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಮೊದಲ ವಿಜಯದ ಖಾತೆ ತೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಟಿ.ಬಿ ಜಯಚಂದ್ರ ಎದುರು ಸುಮಾರು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಗೆಲುವು ಸಾಧಿಸುವ ಮೂಲಕ ಶಿರಾ ಕೋಟೆಯಲ್ಲಿ ಕಮಲ ಅರಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾದಾಗಿನಿಂದಲೂ ರಾಜೇಶ್ಗೌಡ ಮುನ್ನಡೆ ಕಾಯ್ದುಕೊಳ್ಳುತ್ತಲೇ ಬಂದಿದ್ದರು. 15, 16ನೇ ಸುತ್ತಿನ ಮತ ಎಣಿಕೆ ಸಂಸರ್ಭದಲ್ಲಿ ರಾಜೇಶ್ಗೌಡ ಹಾಗೂ ಕಾಂಗ್ರೆಸ್ನ ಟಿ.ಬಿ ಜಯಚಂದ್ರ ನಡುವೆ ನೆಕ್-ಟು-ನೆಕ್ ಅಂತರ ಏರ್ಪಟ್ಟಿತ್ತು. ನಂತರ ಸುತ್ತುಗಳಲ್ಲಿ ರಾಜೇಶ್ಗೌಡ ಅವರ ಮುನ್ನಡೆಯ ಅಂತರ ಹೆಚ್ಚುತ್ತಾ ಹೋಗಿದ್ದು, 24ನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ರಾಜೇಶ್ಗೌಡ 74,522 ಮತ ಗಳಿಸಿದರೆ, ಕಾಂಗ್ರೆಸ್ ಟಿ.ಬಿ ಜಯಚಂದ್ರ 61,573 ಮತಗಳು ಬಂದಿವೆ. ಜೆಡಿಎಸ್ನ ಅಮ್ಮಾಜಮ್ಮ ಅವರಿಗೆ 35,982 ಮತಗಳು ಬಂದಿವೆ. ಒಟ್ಟು 12,949 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ
ಶಿರಾ: ಮತ ಎಣಿಕೆ ವಿವರ(24ನೇ ಸುತ್ತು)
ರಾಜೇಶ್ಗೌಡ: ಬಿಜೆಪಿ- 74,522-ಅಂತರ 12,949-ಗೆಲುವು
ಟಿ.ಬಿ ಜಯಚಂದ: ಕಾಂಗ್ರೆಸ್-61,573 -ಸೋಲು
ಅಮ್ಮಾಜಮ್ಮ: ಜೆಡಿಎಸ್-35,982-ಸೋಲು
ಹಣ ಹಂಚಿ ಗೆದ್ದಿಲ್ಲ-ರಾಜೇಶ್ಗೌಡ
ಶಿರಾ ಉಪಚುನಾವಣೆಯಲ್ಲಿ ಭರ್ಜರಿ ಗೆಲುವುದು ಸಾಧಿಸಿದ ಬಿಜೆಪಿ ಅಭ್ಯರ್ಥಿ ರಾಜೇಶ್ಗೌಡ, ನಾವು ಹಣ ಹಂಚಿ ಚುನಾವಣೆ ಗೆದ್ದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸ ನೋಡಿ ಜನರು ಮತ ಹಾಕಿದ್ದಾರೆ. ಈವರೆಗೆ ಅಧಿಕಾರ ನಡೆಸಿದ ಯಾವ ಪಕ್ಷಗಳೂ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿಲ್ಲ. ಆದರೆ, ಆ ಕೆಲಸವನ್ನು ಸಿಎಂ ಯಡಿಯೂರಪ್ಪ ಮಾಡಿದ್ದಾರೆ. ಹೀಗಾಗಿ ಕಾಡುಗೊಲ್ಲರ ಸಮುದಾಯ ನಮ್ಮ ಕೈಹಿಡಿದಿದೆ. ಆ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಮದಲೂರು ಕೆರೆಗೆ ನೀರು ಹರಿಸುತ್ತೇವೆ. ನನಗೆ ಯಾವುದೇ ಸನ್ಮಾನ ಬೇಡ. ಈ ಕ್ಷೇತ್ರದ ಗೆಲುವಿಗೆ ಎಲ್ಲರೂ ಶ್ರಮಿಸಿದ್ದಾರೆ. ಗೆಲುವಿನ ಕ್ರೆಡಿಟ್ ಎಲ್ಲರಿಗೂ ಸಲ್ಲುತ್ತದೆ ಎಂದು ರಾಜೇಶ್ಗೌಡ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಯುವ ಸಮುದಾಯ ಶ್ರಮ ನನ್ನ ಗೆಲುವಿನಲ್ಲಿದೆ. ಎಲ್ಲ ಸಮುದಾಯದವರು ನನ್ನನ್ನು ಬೆಂಬಲಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ನೀರಾವರಿ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಬಿಜೆಪಿ ವಿಜೇತ ಅಭ್ಯರ್ಥಿ ರಾಜೇಶ್ಗೌಡ ಭರವಸೆ ನೀಡಿದ್ದಾರೆ.
ಇತಿಹಾಸ ಬರೆದ ಬಿಜೆಪಿ
2008ರ ಚುನಾವಣೆಯಲ್ಲಿ 24, 600 ಮತ ಪಡೆದಿದ್ದ ಬಿಜೆಪಿ, 2018ರಲ್ಲಿ ಕೇವಲ 16 ಸಾವಿರ ಮತ ಪಡೆದು ಹೀನಾಯ ಪರಿಸ್ಥಿತಿಯಲ್ಲಿತ್ತು. ಇಲ್ಲಿಯವರೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾರುಪತ್ಯ ಜೋರಾಗಿಯೇ ಇತ್ತು, ಜತೆಗೆ ಪರಸ್ಪರ ಎದುರಾಳಿಗಳಾಗಿದ್ದವು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಅವರು ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಮ್ಯಾಜಿಕ್ ಮಾಡಿದಂತೆಯೇ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಶಿರಾದಲ್ಲೇ ಠಿಕಾಣಿ ಹೂಡಿದ್ದ ವಿಜಯೇಂದ್ರ, ರಾಜೇಶ್ಗೌಡ ಗೆಲುವಿಗೆ ರಹಸ್ಯ ಕಾರ್ಯತಂತ್ರ ಹೂಡಿದ್ದರು.
ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನೇ ಬಿಜೆಪಿ ಪ್ರಬಲ ಅಸ್ತ್ರವಾಗಿ ಬಳಸಿಕೊಂಡಿದ್ದಲ್ಲದೆ, ಮದ್ದಕನಹಳ್ಳಿ ಕಲ್ಲುಗಣಿಗಾರಿಕೆ ಬಂಡೆ ವಿಚಾರದಲ್ಲಿ ಕಾಂಗ್ರೆಸ್ನ ಟಿ.ಬಿ ಜಯಚಂದ್ರ ನಡೆದುಕೊಂಡ ರೀತಿಯನ್ನು ಬಿಜೆಪಿ ತನ್ನ ಬಂಡವಾಳವಾಗಿಸಿಕೊಂಡು ತನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel