ಕೊತ್ವಾಲನ ಶಿಷ್ಯ ಡಿಕೆಶಿಗೆ ಕತ್ತಿಯ ಸಂಪರ್ಕ ಚೆನ್ನಾಗಿದೆ : ಬಿಜೆಪಿ ಟ್ವೀಟ್
ಬೆಂಗಳೂರು : ಟಿಪ್ಪು ಸುಲ್ತಾನ್ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ.
ನಿನ್ನೆ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ಮಾತನಾಡಿ, ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು.
ನಿಮಗೆ ತಲೆ ಕತ್ತರಿಸುವುದು ಗೊತ್ತಿದೆ. ತಲೆ ತಗ್ಗಿಸುವುದು ಗೊತ್ತಿಲ್ಲ ನಿಮಗೆ ತಲೆ ಬಾಗುವುದು ತಿಳಿದಿಲ್ಲ.
ತಲೆ ಎತ್ತುವುದು ತಿಳಿದಿದೆ ಎಂದಿದ್ದರು. ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯಿತು.
ಇಮ್ರಾನ್ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಕಿಡಿಕಾರಿರುವ ಬಿಜೆಪಿ, ಟಿಪ್ಪು ಒಬ್ಬ ಕ್ರೂರಿ, ಮತಾಂಧ.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಅಧ್ಯಕ್ಷರಿಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಮಾತ್ರ ಸ್ಪೂರ್ತಿಯಾಗಲು ಸಾಧ್ಯ.
ಕೊತ್ವಾಲನ ಶಿಷ್ಯರಾದ ಡಿ.ಕೆ.ಶಿವಕುಮಾರ್ ಅವರಿಗೆ ಕತ್ತಿಯ ಸಂಪರ್ಕ ಚೆನ್ನಾಗಿದೆ.
ಹಿಂದೂ ಕಾರ್ಯಕರ್ತರ ಹತ್ಯೆಗೆ ಪ್ರೇರಣೆ ನೀಡಿದ ಸಿದ್ದರಾಮಯ್ಯ ಅವರಿಗೂ ಕ್ರೂರಿ ಟಿಪ್ಪು ಪ್ರೇರಣಾದಾಯಕ.
ಹೀಗಾಗಿ ಕತ್ತು ತೆಗೆಯುವವರ ಜೊತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ವೇದಿಕೆ ಹಂಚಿಕೊಳ್ಳುತ್ತಾರೆ ಎಂದು ಕುಟುಕಿದೆ.