ಬೊಮ್ಮಾಯಿ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿ : ಸಿದ್ದರಾಮಯ್ಯ
ಹುಬ್ಬಳ್ಳಿ : ರಾಜ್ಯದಲ್ಲಿ ಸಿಎಂ ಬದಲಾಗಿರಬಹುದು, ಆದ್ರೆ ಬಿಜೆಪಿ ಸರ್ಕಾರ ಬದಲಾಗಿಲ್ಲ. ಬೊಮ್ಮಯಿ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಸಿಎಂ ಬದಲಾಗಿದ್ದಾರೆ, ಸರ್ಕಾರ ಬದಲಾಗಿಲ್ಲ. ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಸಚಿವರಾಗಿದ್ರು, ಈಗ ಸಿಎಂ ಆಗಿದ್ದಾರೆ.
ಆದರೆ ಭ್ರಷ್ಟಾಚಾರ ಕಡಿಮೆ ಆಗಿಲ್ಲ. ನಾವೇನೂ ಅವರನ್ನ ರಬ್ಬರ್ ಸ್ಟಾಂಪ್ ಎಂದು ಕರೆದಿಲ್ಲ ಅವರೇ ನಾನು ರಬ್ಬರ್ ಸ್ಟಾಂಪ್ ಸಿಎಂ ಹೇಳಿಕೊಂಡಿರುವುದರಿಂದ ಅವರು ರಬ್ಬರ್ ಸ್ಟಾಂಪ್ ಸಿಎಂ ಆಗಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನು ರಾಜ್ಯದಲ್ಲಿ ಪ್ರವಾಹ ಇದ್ದರೂ ಬಿಜೆಪಿಯವರು ಅಧಿಕಾರಕ್ಕೆ ಓಡಾಡ್ತಾ ಇದ್ದಾರೆ ಎಂದು ಟೀಕಿಸಿದ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ ಕಾಟಾಚಾರದ ಪ್ರವಾಸ ಮಾಡಿದ್ದಾರೆ. ಉತ್ತರ ಕನ್ನಡಕ್ಕೆ ಅಷ್ಟೇ ಹೋಗಿ ಬಂದು ದೆಹಲಿಗೆ ಹೋಗಿ ಕುಳಿತಿದ್ದಾರೆ. ಬಿಜೆಪಿಯವರು ದೆಹಲಿ ಹೋಗಿ ಕುಳಿತು ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.