ಬೆಂಗಳೂರು: ಕೊರೊನಾ ವೈರಸ್ ಹೊಡೆತಕ್ಕೆ ರಾಜ್ಯ ಸ್ತಬ್ಧವಾಗಿದೆ. ಇದರಿಂದ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಭೀಕರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.
ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಗಳಲ್ಲಿ ಖರ್ಚನ್ನು ಕಡಿಮೆ ಮಾಡುವ ನಿಟ್ಚಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮ್ಮ ಸಂಪುಟದ ಸಚಿವರುಗಳಿಗಾಗಿ 21 ಹೊಸ ಇನ್ನೋವಾ ಕ್ರಿಸ್ಟಾ ಕಾರುಗಳ ಖರೀದಿಯನ್ನು ಸಿಎಂ ರದ್ದು ಪಡಿಸಿದ್ದಾರೆ.
ಅಲ್ಲದೆ ಅಧಿಕಾರಿಗಳ ನಿವಾಸಗಳು ಮತ್ತು ಮಂತ್ರಿಗಳ ಕಚೇರಿಗಳ ಎಲ್ಲಾ ನವೀಕರಣಗಳನ್ನು ಸ್ಥಗಿತಗೊಳಿಸಲಾಗಿದೆ. ತಮ್ಮ ಮನೆ ಮತ್ತು ಕಚೇರಿಯ ವಾಸ್ತು ರಿಪೇರಿ ಮಾಡಿಸಿಕೊಳ್ಳಲು ಹವಣಿಸುತ್ತಿದ್ದವರು ಹಾಗೂ ಪೀಠೋಪಕರಣಕ್ಕಾಗಿ ಇನ್ನು ಕೆಲ ದಿನಗಳ ಕಾಲ ಕಾಯಬೇಕಾಗಿದೆ.
ಸದ್ಯ ಸಿಎಂ ಎಲ್ಲಾ ವೆಚ್ಚ ಕಡಿತವನ್ನು ಪ್ರೋತ್ಸಾಹಿಸುತ್ತಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಸಲು ಗಮನ ಹರಿಸಲಿದ್ದಾರೆ. ಬಜೆಟ್ ನಲ್ಲಿ ಘೋಷಿಸಿದ್ದ ನೀರಾವರಿ ಮತ್ತಿತರ ದೊಡ್ಡ ದೊಡ್ಡ ಯೋಜನೆಗಳನ್ನು ಸದ್ಯಕ್ಕೆ ತಡೆ ಹಿಡಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.