ತಾಳಿ ಕಟ್ಟಿಸಿಕೊಂಡು ನೆರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದ ನವವಧು
ಮಂಡ್ಯ, (ಮೇ.12): ಆಗಷ್ಟೆ ತಾಳಿ ಕಟ್ಟಿಸಿಕೊಂಡು, ನವ ಜೀವನಕ್ಕೆ ಕಾಲಿಟ್ಟ ನವವಧು ಮದುವೆ ಮುಗಿದ ತಕ್ಷಣವೆ ಮಂಟಪದಿಂದ ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾಳೆ. ಯುವತಿ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಎಸ್ಟಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿ ಎಲ್.ವೈ.ಐಶ್ವರ್ಯ(ತೇಜಸ್ವಿನಿ) ತಾಳಿ ಕಟ್ಟಿಸಿಕೊಂಡು ನೇರವಾಗಿ ಕಾಲೇಜಿಗೆ ಬಂದು ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.
ಲಿಂಗಪುರ ಗ್ರಾಮದ ಕಮಲಾ ಮತ್ತು ಯೋಗೇಂದ್ರ ಅವರ ಪುತ್ರಿ ಐಶ್ವರ್ಯಾ ಹಾಗೂ ಮೈಸೂರು ತಾಲೂಕು ಲಕ್ಷ್ಮೀಪುರ ಗ್ರಾಮದ ಭಾಗ್ಯಲಕ್ಷ್ಮೀ ಮತ್ತು ಸೋಮಶೇಖರ್ ಅವರ ಪುತ್ರ ಎಲ್.ಎಸ್ಯಶ್ವಂತ್ ಅವರ ವಿವಾಹವನ್ನ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಯಿತು.
ಆದರೆ ಇದೇ ದಿನ ಬಿಕಾಂ ಪ್ರಥಮ ವರ್ಷದ ಡಿಜಿಟಲ್ ಫ್ಲೂಯೆನ್ಸಿ ವಿಷಯ ಪರೀಕ್ಷೆಯೂ ಇತ್ತು, ಬೆಳಗ್ಗೆ 9.30 ರಿಂದ 10.30ರವರೆಗೆ ಮುಹೂರ್ತವಿದ್ದು, ಧಾರೆ ಮುಗಿದ ತಕ್ಷಣ ನವವಧು ಹಿರಿಯರ ಅನುಮತಿ ಪಡೆದು ಮದುಮಗನ ಜೊತೆ ಪರೀಕ್ಷೆಗೆ ಹಾಜರಾಗಿದ್ದಾರೆ.
ಮಧುಮಗಳ ಅಲಂಕಾರದಲ್ಲೇ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಇತರ ಎಲ್ಲ ಹೆಣ್ಣು ಮಕ್ಕಳಿಗೂ ಪ್ರೇರಣೆಯಾಗಿದ್ದಾಳೆ. ಮದುವೆ ದಿನವೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಈಕೆಗೆ ಸಹಕಾರ ನೀಡಿದ ಪಾಲಕರಿಗೆ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಎಸ್ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.