ಬಿಸಿಸಿಐನಲ್ಲಿ ಇನ್ನು ಮುಂದೆ ನಡೆಯುತ್ತಾ ಬ್ರಿಜೇಶ್ ಪಟೇಲರ ದರ್ಬಾರು..?
ಬಿಸಿಸಿಐನಲ್ಲಿ ದಾದಾಗಿರಿಯ ದಿನಗಳು ಮುಗಿದಿವೆ. ಜುಲೈ 27ಕ್ಕೆ ಸೌರವ್ ಗಂಗೂಲಿಯವರ ಅಧಿಕಾರಾವಧಿ ಅಂತ್ಯಗೊಂಡಿದೆ. ಮುಂದೆ ಗೊತ್ತಿಲ್ಲ. ಲೋಧಾ ಸಮಿತಿಯ ನಿಯಮದ ಪ್ರಕಾರ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಅವರ ಅಧಿಕಾರ ಅವಧಿ ಮುಕ್ತಾಯವಾಗಿದೆ. ಆದ್ರೆ ಈ ವಿಚಾರವಾಗಿ ಈಗ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಆಗಸ್ಟ್ ತಿಂಗಳಲ್ಲಿ ಲೋಧ ಸಮಿತಿಯ ನಿಯಮವನ್ನು ಮುಂದುವರಿಸಬೇಕೋ ಬೇಡ್ವೋ ಎಂಬುದು ಸಹ ನಿರ್ಧಾರವಾಗುತ್ತದೆ.
ಲೋಧಾ ಸಮಿತಿಯ ಪ್ರಕಾರ ಬಿಸಿಸಿಐ ಮತ್ತು ಆಯಾ ಕ್ರಿಕೆಟ್ ಸಂಸ್ಥೆಗಳಲ್ಲಿ ಒಟ್ಟು ಆರು ವರ್ಷಗಳ ಕಾಲ ಮಾತ್ರ ಹುದ್ದೆಗಳಲ್ಲಿ ಮುಂದುವರಿಯಬಹುದು. ಬಳಿಕ ಮೂರು ವರ್ಷದ ನಂತರ ಮತ್ತೆ ಹುದ್ದೆಯಲ್ಲಿ ಮುಂದುವರಿಸಬಹುದು. ಈಗಾಗಲೇ ಸೌರವ್ ಗಂಗೂಲಿ ಅವರು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದ್ದಾಗ ಅವರ ಆಡಳಿತ ಅವಧಿ ಕೇವಲ 9 ತಿಂಗಳುಗಳಿದ್ದವು. ಅದೇ ರೀತಿ ಜೈ ಶಾ ಕೂಡ ಗುಜರಾತ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯಾಗಿದ್ದರು.
ಇದೀಗ ಬಿಸಿಸಿಐ ಮುಂದಿನ ಅಧ್ಯಕ್ಷ ಯಾರು ಎಂಬ ಪ್ರಶ್ನೆ ಎದುರಾಗಿದೆ. ಗಂಗೂಲಿ ಮತ್ತು ಜೈ ಶಾ ಭವಿಷ್ಯವನ್ನು ಸುಪ್ರೀಂ ಕೋರ್ಟ್ ನಿರ್ಧಾರ ಮಾಡುತ್ತೆ. ಈ ನಡುವೆ ಗಂಗೂಲಿಯೇ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಆಗ ಲೋಧ ಸಮಿತಿಯ ನಿಯಮಗಳಿಗೆ ಬೆಲೆನೇ ಇಲ್ಲ ಎಂಬ ಸ್ಥಿತಿಯೂ ನಿರ್ಮಾಣವಾಗುತ್ತದೆ. ಈ ನಡುವೆ ಗಂಗೂಲಿ ಐಸಿಸಿ ಮುಖ್ಯಸ್ಥನಾಗಬೇಕು ಎಂಬ ಕೂಗು ಕೂಡ ಕೇಳಿಬರುತ್ತಿದೆ.
ಹಾಗೊಂದು ವೇಳೆ ಗಂಗೂಲಿ ನಂತರ ಬಿಸಿಸಿಐ ಚುಕ್ಕಾಣಿ ಯಾರು ಹಿಡಿಯುತ್ತಾರೆ ಅನ್ನೋ ಪ್ರಶ್ನೆಗೆ ಕೆಲವರು ಕರ್ನಾಟಕದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಹೌದು, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಐಪಿಎಲ್ ಮುಖ್ಯಸ್ಥನಾಗಿರುವ ಬ್ರಿಜೇಶ್ ಪಟೇಲ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಬ್ರಿಜೇಶ್ ಪಟೇಲ್ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ಸುಮಾರು 10-15 ವರ್ಷ ಸೇವೆ ಸಲ್ಲಿಸಿದ್ದಾರೆ. ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದ ಬ್ರಿಜೇಶ್ ಪಟೇಲ್ ಅಡಳಿತಗಾರನಾಗಿಯೂ ಯಶ ಸಾಧಿಸಿದ್ದಾರೆ. ಚಾಣಕ್ಯನಂತೆ ಬುದ್ಧಿವಂತಿಕೆಯಿಂದ ಆಡಳಿತ ನಡೆಸುವ ಬ್ರಿಜೇಶ್ ಪಟೇಲ್ ಮುಂದಿನ ದಿನಗಳಲ್ಲಿ ಬಿಸಿಸಿಐ ಚಾವಡಿಯಲ್ಲಿ ದರ್ಬಾರು ನಡೆಸಿದ್ರೂ ಅಚ್ಚರಿ ಏನಿಲ್ಲ.
ಹಾಗೇ ನೋಡಿದ್ರೆ ಕಳೆದ ವರ್ಷವೇ ಬ್ರಿಜೇಶ್ ಪಟೇಲ್ ಬಿಸಿಸಿಐ ಅಧ್ಯಕ್ಷನಾಗಬೇಕಿತ್ತು. ಅಂತಹುದ್ದೊಂದು ಅವಕಾವಿತ್ತು. ಆದ್ರೆ ಬಿಜೆಪಿಯ ರಾಜಕೀಯದಾಟದಲ್ಲಿ ರಾತ್ರೋ ರಾತ್ರಿ ಡ್ರಾಮ ನಡೆದು ಅನಿರೀಕ್ಷಿತವಾಗಿ ಗಂಗೂಲಿ ಬಿಸಿಸಿಐ ಗದ್ದುಗೆ ಏರಿದ್ರು. ಅಮೀತ್ ಶಾ ಮಗ ಜೈ ಶಾ ಕಾರ್ಯದರ್ಶಿಯಾದ್ರು. ಹೀಗಾಗಿ ಬ್ರಿಜೇಶ್ ಪಟೇಲ್ ಐಪಿಎಲ್ ಮುಖ್ಯಸ್ಥರಾಗಬೇಕಿತ್ತು.
ಆದ್ರೆ ಈಗ ಬ್ರಿಜೇಶ್ ಪಟೇಲ್ ಬಿಸಿಸಿಐನತ್ತ ಚಿತ್ತವನ್ನಿಟ್ಟಿದ್ದಾರೆ. ಕೆಎಸ್ಸಿಎ ನಲ್ಲಿ ಕೆಲವೊಂದು ಆರೋಪಗಳ ನಡುವೆಯೂ ಪಟೇಲರ ಆಡಳಿತ ವೈಖರಿಯನ್ನು ಮೆಚ್ಚಲೇಬೇಕು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಚಾಣಕ್ಯ ನಡೆಯನ್ನಿಡುವ ಬ್ರಿಜೇಶ್ ಪಟೇಲ್ ಉತ್ತಮ ಆಡಳಿತಗಾರ ಎಂಬುದನ್ನು ಮರೆಯುವ ಹಾಗಿಲ್ಲ. ಹೀಗಾಗಿ ಬಿಸಿಸಿಐ ಗದ್ದುಗೆ ಏರಿದ್ರೂ ಅದನ್ನು ಸರಿಪಡಿಸಿಕೊಂಡು ಹೋಗುವಂತಹ ಸಾಮಥ್ರ್ಯ ಪಟೇಲರಲ್ಲಿದೆ. ಇದೀಗ ಕೋವಿಡ್-19 ನಿಂದಾಗಿ ಯಾವುದೇ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತಿಲ್ಲ. ಕ್ರಿಕೆಟ್ ಮಾರುಕಟ್ಟೆಯನ್ನು ವಿಸ್ತರಿಸುವುದರ ಜೊತೆ ಕ್ರಿಕೆಟ್ ಆಟವನ್ನು ಸುಧಾರಿಸಲು ಸೂಕ್ತ ಅಧ್ಯಕ್ಷರನ್ನೇ ಆಯ್ಕೆ ಮಾಡಬೇಕಿದೆ. ಒಟ್ಟಿನಲ್ಲಿ ಬ್ರಿಜೇಶ್ ಪಟೇಲ್ ಇಷ್ಟು ದಿನ ಕೆಎಸ್ಸಿಎ ಚಾವಡಿಯಲ್ಲಿ ದರ್ಬಾರು ನಡೆಸುತ್ತಿದ್ದರು. ಇನ್ನು ಮುಂದೆ ಬಿಸಿಸಿಐ ಚಾವಡಿಯಲ್ಲಿ ಒಡ್ಡೋಲಗ ನಡೆಸುತ್ತಾರಾ ಅನ್ನೋದಕ್ಕೆ ಕಾಲವೇ ಉತ್ತರ ನೀಡಲಿದೆ.