ನೊಯ್ಡಾ: ಕೊರೊನಾ ಸೋಂಕು ತಗುಲಿದ್ದರೂ ಬಸ್ ಹತ್ತಿದ್ದಾಳೆ ಎಂದು ಆರೋಪಿಸಿ ಬಸ್ನ ಚಾಲಕ ಹಾಗೂ ನಿರ್ವಾಹಕ ಆಕೆಯನ್ನು ಚಲಿಸುತ್ತಿದ್ದ ಬಸ್ನಿಂದ ಎಸೆದ ಘಟನೆ ಉತ್ತರ ಪ್ರದೇಶದ ಮಥುರಾ ಬಳಿ ನಡೆದಿದೆ.
ಉತ್ತರ ಪ್ರದೇಶದ ನೊಯ್ಡಾದಿಂದ ಹುಟ್ಟೂರಿಗೆ ಹೊರಟಿದ್ದ ಆನ್ಶಿಕಾ ಎಂಬ ಯುವತಿಯನ್ನು ಬಸ್ನಿಂದ ತಳ್ಳಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಜೂನ್.15ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ನಡೆದಿದ್ದು ಹೀಗೆ…!
ಉತ್ತರ ಪ್ರದೇಶದ ನೊಯ್ಡಾದಲ್ಲಿ ತಂದೆ ಜತೆ ವಾಸವಿದ್ದ ಯವತಿ ಆನ್ಶಿಕಾ, ತಾಯಿ ಸರ್ವೇಶ್ ದೇವಿ ಜತೆ ಹುಟ್ಟೂರು ಶಿಕೋಹಬಾದ್ಗೆ ಹೊರಟಿದ್ದರು. ನೊಯ್ಡಾದ ಸೆಕ್ಟರ್ 37ರಲ್ಲಿ ಮಧ್ಯಾಹ್ನ 2 ಗಂಟೆಗೆ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಸ್ ಹತ್ತಿದ್ದಾರೆ.
ಬಸ್ ಮಥುರಾ ಬಳಿ ತೆರಳುತ್ತಿದ್ದಾಗ ಆನ್ಶಿಕಾ ಬಿಸಿಲಿನ ತಾಪದಿಂದಾಗಿ ಉಸಿರಾಡಲು ಕಷ್ಟ ಪಡುತ್ತಿದ್ದಳು. ಈ ವೇಳೆ ಕಂಡಕ್ಟರ್ ಹಾಗೂ ಚಾಲಕ ಆನ್ಶಿಕಾ ಜತೆ ಜಗಳಕ್ಕೆ ಇಳಿದಿದ್ದಾರೆ. ನನಗೆ ಕೊರೊನಾ ಇಲ್ಲ, ಬಿಸಿಲಿನ ತಾಪ ಹೆಚ್ಚಳದಿಂದ ಉಸಿರಾಡಲು ಕಷ್ಟವಾಗುತ್ತಿದೆ ಎಂದರೂ ಕೇಳದ ಚಾಲಕ, ಕೊರೊನಾ ಇದ್ದರೂ ಹೇಗೆ ಬಸ್ ಹತ್ತೀದ್ದೀಯಾ ಎಂದು ಜಗಳ ತೆಗೆದು ಆಕೆಯನ್ನು ಬೆಡ್ಶೀಟ್ನಿಂದ ಸುತ್ತಿ ಚಲಿಸುತ್ತಿದ್ದ ಬಸ್ನಿಂದ ಅಮಾನವೀಯವಾಗಿ ಎಸೆದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಯುವತಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಆದರೆ, ಚಾಲಕ ಹಾಗೂ ನಿರ್ವಾಹಕರು ಹೇಳುವುದೇ ಬೇರೆ. ಯುವತಿಗೆ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಬೇರೆ ವಾಹನದಲ್ಲಿ ಹೋಗುವಂತೆ ಮಥುರಾ ಚೆಕ್ಪೋಸ್ಟ್ ಬಳಿ ಕೆಳಗೆ ಇಳಿಸಿದ್ದೇವೆ ಎನ್ನುತ್ತಾರೆ.
ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ನಿರ್ವಾಹಕ, ಚಾಲಕ ಹಲ್ಲೆ ಮಾಡಿದ ಯಾವುದೇ ಗಾಯದ ಗುರುತು ಇರಲಿಲ್ಲ ಎಂದು ಮಂತ್ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಭೀಮ್ಸಿಂಗ್ ಸ್ಪಷ್ಟಪಡಿಸಿದ್ದಾರೆ.