ಬದಲಾವಣೆ ಜಗದ ನಿಯಮ : ರಾಜಾಹುಲಿ ವಿರುದ್ಧ ಸೈನಿಕ ಸಿಡಿಗುಂಡು
ಮೈಸೂರು : ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯ ಬಿಜೆಪಿಯಲ್ಲಿ ಬೂದಿಮುಚ್ಚಿದ ಕೆಂಡದಂತಿದೆ ಅನ್ನೋದು ಮತ್ತೆ ಸಾಬೀತಾಗಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಮತ್ತೆ ದಂಡಯಾತ್ರೆ ಮುಂದುವರೆಸಿದ್ದಾರೆ.
ಈ ಹಿಂದೆ ನಾಯಕತ್ವ ಬದಲಾವಣೆ ಕೂಗೆಬ್ಬಿಸಿದ್ದ ಸಿ.ಪಿ. ಯೋಗೇಶ್ವರ್ ಇದೀಗ ಗೊರಿಲ್ಲಾ ಯುದ್ಧ ತಂತ್ರದ ಮೊರೆ ಹೋಗಿದ್ದಾರೆ.
ದೆಹಲಿಯ ದಂಡಯಾತ್ರೆಯ ನಂತರ ಸಿ.ಪಿ. ಯೋಗೇಶ್ವರ್ ಇಂದು ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ಶ್ರೀನಿವಾಸಪ್ರಸಾದ್ ಮನೆಗೆ ಭೇಟಿ ನೀಡಿದ್ದಾರೆ. ಅವರ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಶ್ರೀನಿವಾಸ ಪ್ರಸಾದ್ ಭೇಟಿ ನಂತರ ಮಾತನಾಡಿದ ಸಚಿವ ಸಿ.ಪಿ. ಯೋಗೇಶ್ವರ್, ಅಂಬಾರಿ ಹೊರಲು ಯಾವ ಆನೆ ಸೂಕ್ತ ಎನ್ನುವುದು ಮುಖ್ಯ.
ರಾಜ್ಯದ ಜನತೆಯ ಸಮಸ್ಯೆಗೆ ಸ್ಪಂದಿಸುವವರು ಮುಖ್ಯಮಂತ್ರಿಯಾಗಲಿ. ಮುಖ್ಯಮಂತ್ರಿ ಅಂದರೆ ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ಹುದ್ದೆಯಾಗಿದೆ.
ಬಿಜೆಪಿ ಸರ್ಕಾರ ಬರಲು ನಾವು ಬಹಳಷ್ಟು ಶ್ರಮಿಸಿದ್ದೇವೆ. ಮುಖ್ಯಮಂತ್ರಿ ಹುದ್ದೆ ವೈಭವಕ್ಕೆ ಆಗುವಂತಹುದಲ್ಲ. ಮರಿ ಆನೆಗಳಿಗೆ ಅಂಬಾರಿ ಹೊರಿಸಲು ಆಗುವುದಿಲ್ಲ. ಬದಲಾವಣೆ ಜಗದ ನಿಯಮ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.