ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿದ್ರೆ ಗಂಟಲಲ್ಲಿ ಅನ್ನ ಇಳಿಯಲ್ವಾ : ಸಿ.ಟಿ.ರವಿ
ಬೆಂಗಳೂರು : ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೇ ಅನ್ನ ಗಂಟಲಲ್ಲಿ ಇಳಿಯುವುದಿಲ್ಲವೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್ ವಿಚಾರವಾಗಿ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆ.
ಇಂದಿರಾಗಾಂಧಿ ಭಾವಚಿತ್ರ ಇರುವ ಕಾರಣ ಅದನ್ನು ಬದಲಾಯಿಸಿ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ನಾಮಕರಣ ಮಾಡುವ ಬಗ್ಗೆ ಮಾತನಾಡಿದ್ದೇನೆ.
ಅನ್ನಪೂರ್ಣೇಶ್ವರಿ ಪಾರ್ವತಿಯ ಅಂಶ, ಹೆಸರು ಬದಲಾದರೂ ಬಡವರಿಗೆ ಅನ್ನ ನೀಡುವ ಉದ್ದೇಶ ಮುಂದುವರಿಯಲಿದೆ. ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ನೆಹರು ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಒಂದೇ ಕುಟುಂಬ ಸದಸ್ಯರು ನೂರಾರು ಯೋಜನೆಗಳಗೆ ತಮ್ಮದೇ ಹೆಸರು ಇಟ್ಟುಕೊಂಡಿದ್ದಾರೆ.
ಜವಹರಲಾಲ್ ನೆಹರೂ, ಇಂದಿರಾಗಾಂಧಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು 1989- 90ರವರೆಗೆ ಕಾಯಬೇಕಾಯಿತು ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.