ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆ ಎಸ್ಎಸ್ಎಲ್ಸಿ ಮತ್ತು ಪದವಿ ಪರೀಕ್ಷೆ ರದ್ದುಪಡಿಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ತಮಿಳುನಾಡು, ಪುದುಚೇರಿ ಮತ್ತು ದೆಹಲಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ದೇಶದ 12 ರಾಜ್ಯಗಳು ಪರೀಕ್ಷೆಗಳಿಲ್ಲದೆ ಐಐಟಿಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಡಿಗ್ರಿ ವಿದ್ಯಾರ್ಥಿಗಳನ್ನು ಪಾಸಿ ಮಾಡಿವೆ ಎಂದು ತಿಳಿಸಿದ ವಾಟಾಳ್ ನಾಗರಾಜ್, ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೀವ ಮುಖ್ಯ. ಒಂದು ವೇಳೆ ಪರೀಕ್ಷೆ ನಡೆಸಿದರೆ ಶಿಕ್ಷಣ ಸಚಿವರು ಮಕ್ಕಳ ಜೀವ ಭದ್ರತೆಗೆ 50 ಲಕ್ಷ ಹಾಗೂ ಶಿಕ್ಷಕರ ಜೀವ ಭದ್ರತೆಗೆ 25 ಲಕ್ಷ ರೂ. ವಿಮೆ ಮೀಸಲಿಟ್ಟು ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.