ಬೆಂಗಳೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ ಬಾಣಂತಿಗೆ ಬೆಂಗಳೂರಿನ ಯಾವ ಆಸ್ಪತ್ರೆಗಳಲ್ಲೂ ಬೆಡ್ ಸಿಗದೆ ಆಂಬ್ಯುಲೆನ್ಸ್ ನಲ್ಲೇ ಮೃತಪಟ್ಟಿರುವ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.
ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ 6 ದಿನಗಳ ಹಿಂದೆ ಹೆರಿಗೆಯಾಗಿತ್ತು. ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಾಣಂತಿಯನ್ನು ಡಿಶ್ಚಾರ್ಜ್ ಮಾಡಿಮನೆಗೆ ಕಳಿಸಲಾಗಿತ್ತು.
ಆದರೆ, ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಬಾಣಂತಿಯನ್ನು ಕರೆತಂದಿದ್ದಾರೆ. ಬಾಣಂತಿಯನ್ನು ಅಡ್ಮಿಟ್ ಮಾಡುವ ಮೊದಲು ಆಸ್ಪತ್ರೆಯವರು ಅಂಟಿಜೆನ್ ಟೆಸ್ಟ್ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಮಹಿಳೆಯನ್ನು ಕೋವಿಡ್ಗೆ ಚಿಕಿತ್ಸೆ ಕೊಡಿಸುವ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಆಸ್ಪತ್ರೆಯವರು ಕಳಿಸಿದ್ದಾರೆ.
ನಿನ್ನೆ ಸಂಜೆ 4 ಗಂಟೆಗೆ ಖಾಸಗಿ ಆಸ್ಪತ್ರೆಯಿಂದ ಬಾಣಂತಿಯೊಂದಿಗೆ ಹೊರಟ ಕುಟುಂಬಸ್ಥರು ಹಲವು ಆಸ್ಪತ್ರೆಗಳಿಗೆ ಅಲೆದಿದ್ದಾರೆ. ಯಾವ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ದಾಖಲಿಸಿಕೊಳ್ಳಲೇ ಇಲ್ಲ.
ಶಾಸಕಿ ಸೌಮ್ಯರೆಡ್ಡಿ ಮನವಿಗೂ ಸಿಗದ ಕಿಮ್ಮತ್ತು..!
ಈ ನಡುವೆ ಮಹಿಳೆ ಸಂಬಂಧಿಕರು ಜಯನಗರ ಶಾಸಕಿ ಸೌಮ್ಯಾರೆಡ್ಡಿ ಅವರಿಗೆ ಕರೆ ಮಾಡಿ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ತಕ್ಷಣ ಟ್ವಿಟರ್ನಲ್ಲೂ ಮನವಿ ಮಾಡಿದ ಸೌಮ್ಯಾರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ ಎನ್ನಲಾಗಿದೆ. ತಮಗೆ ಗೊತ್ತಿರುವ ಆಸ್ಪತ್ರೆಗಳಿಗೆ ಕರೆ ಮಾಡಿದರೂ ಅಲ್ಲೂ ಬೆಡ್ ಇಲ್ಲ ಎಮಬ ಉತ್ತರ ಬಂದಿದೆ.
ಹೀಗಾಗಿ ವಿಧಿಯಿಲ್ಲದೆ ಹಲವು ಆಸ್ಪತ್ರೆಗಳಿಗೆ ಅಲೆದಾಡಿದ ಕುಟುಂಬಸ್ಥರು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೊಮ್ಮಸಂದ್ರದ ನಾರಾಯಣ ನೇತ್ರಾಲಯಕ್ಕೆ ಕರೆದುಕೊಂಡು ಬಂದರು. ಆದರೆ, ಅಷ್ಟೊತ್ತಿಗಾಗಲೇ ಬಾಣಂತಿಯ ಉಸಿರು ಆಂಬ್ಯುಲೆನ್ಸ್ ನಲ್ಲೇ ನಿಂತು ಹೋಗಿತ್ತು.
ಸತತ 12 ಗಂಟೆಗಳ ಕಾಲ ಒಬ್ಬ ಬಾಣಂತಿಗೆ ಬೆಂಗಳೂರಿನ ಯಾವ ಆಸ್ಪತ್ರೆಗಳಲ್ಲೂ ಬೆಡ್ ಸಿಗುತ್ತಿಲ್ಲ ಎಂದಾದರೆ ಸರ್ಕಾರ ಹಾಗೂ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ.
ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಸತತ 12 ಗಂಟೆ ಅಲೆದಾಡಿದರೂ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ ಎಂದಾದರೆ ರಾಜಧಾನಿ ಬೆಂಗಳೂರು ಎತ್ತ ಸಾಗುತ್ತಿದೆ ಎಂಬುದಕ್ಕೆ ಮತ್ತೆ ಮತ್ತೆ ಸಾಬೀತಾಗುತ್ತಿದೆ.