ಸತ್ಯಕ್ಕಾಗಿ ಹೋರಾಡುವವರನ್ನು ಹೆದರಿಸಲು ಸಾಧ್ಯವಿಲ್ಲ – ರಾಹುಲ್ ಗಾಂಧಿ
ಹೊಸದಿಲ್ಲಿ, ಜುಲೈ 9: ಗಾಂಧಿ ಕುಟುಂಬ ಸಂಬಂಧಿತ ಮೂರು ಟ್ರಸ್ಟ್ಗಳನ್ನು ಒಳಗೊಂಡ ಆರ್ಥಿಕ ಅಕ್ರಮಗಳ ಬಗ್ಗೆ ಸರ್ಕಾರ ತನಿಖೆಯನ್ನು ಘೋಷಿಸಿದ ಕೆಲವೇ ಸಮಯಗಳ ನಂತರ, ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದರು.
ಸತ್ಯಕ್ಕಾಗಿ ಹೋರಾಡುವವರನ್ನು ಹೆದರಿಸಲು ಸಾಧ್ಯವಿಲ್ಲ ಎಂದ ರಾಹುಲ್ ಭಯಭೀತವಾಗಿರುವ ಸರ್ಕಾರವು ಹೇಡಿತನದ ಕೃತ್ಯಗಳು ಮತ್ತು ದ್ವೇಷದ ರಾಜಕಾರಣದಿಂದ ನನ್ನನ್ನು ಬೆದರಿಸಲು ನೋಡುತ್ತಿದೆ ಎಂದು ಹೇಳಿದ್ದಾರೆ.
ಜಗತ್ತು ಅವರಂತೆಯೇ ಇದೆ ಎಂದು ಮೋದಿ ನಂಬಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಬೆಲೆ ಇದೆ, ಇಲ್ಲವೇ ಅವರನ್ನು ಬೆದರಿಸಬಹುದು ಎಂಬುದು ಅವರ ಭಾವನೆಯಾಗಿದೆ. ಸತ್ಯಕ್ಕಾಗಿ ಹೋರಾಡುವವರಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಅವರನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಅವರು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಆದಾಯ ತೆರಿಗೆ ಮತ್ತು ವಿದೇಶಿ ದೇಣಿಗೆ ನಿಯಮ ಉಲ್ಲಂಘನೆ ಆರೋಪದ ಮೇಲೆ ಗಾಂಧಿ ಕುಟುಂಬದ ಮೂರು ಟ್ರಸ್ಟ್ ಗಳಾದ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್ ಮೇಲೆ ತನಿಖೆ ನಡೆಸುವುದಾಗಿ ಗೃಹ ಸಚಿವಾಲಯ ತಿಳಿಸಿದೆ.
ರಾಜೀವ್ ಗಾಂಧಿ ಫೌಂಡೇಶನ್ ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಚಿದಂಬರಂ ಟ್ರಸ್ಟಿಗಳಾಗಿದ್ದರೆ, ರಾಜೀವ್ ಗಾಂಧಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಚಾರಿಟೇಬಲ್ ಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ನ ವಿದೇಶಿ ಕಾರ್ಯ, ವ್ಯವಹಾರದ ಬಗ್ಗೆಯೂ ಸೋನಿಯಾ ನೋಡಿಕೊಳ್ಳುತ್ತಿದ್ದರು ಎಂದು ವರದಿ ತಿಳಿಸಿದೆ.
ಇತ್ತೀಚೆಗೆ ಚೀನಾ ರಾಜೀವ್ ಗಾಂಧಿ ಟ್ರಸ್ಟ್ ಗೆ ಕೋಟ್ಯಾಂತರ ರೂಪಾಯಿಗಳನ್ನು ವರ್ಗಾಯಿಸಿರುವುದು ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿತು. ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾದ ನಡೆಯನ್ನು ವಿರೋಧಿಸದೆ ಪ್ರಧಾನಿ ಮೋದಿಯವರನ್ನು ಟೀಕಿಸಿದಕ್ಕೆ ಕಾಂಗ್ರೆಸ್ ನ ಮಿತ್ರ ಪಕ್ಷಗಳು ಸೇರಿದಂತೆ ಬಹುತೇಕ ಪಕ್ಷಗಳು ಬಹಿರಂಗವಾಗಿಯೇ ತಮ್ಮ ವಿರೋಧ ವ್ಯಕ್ತಪಡಿಸಿದ್ದರು.