Chikkaballapur | ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಆರೋಗ್ಯ ಮೇಳ: ಜಗತ್ತಿನ ಬೃಹತ್ ಆರೋಗ್ಯ ಮೇಳ
1 min read
Chikkaballapur World Book of Records Health Fair World's Largest Health Fair saaksha tv
Chikkaballapur | ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಆರೋಗ್ಯ ಮೇಳ: ಜಗತ್ತಿನ ಬೃಹತ್ ಆರೋಗ್ಯ ಮೇಳ
ಚಿಕ್ಕಬಳ್ಳಾಪುರ : ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ, ತಪಾಸಣೆ ಹಾಗೂ ಚಿಕಿತ್ಸೆಗೆ ಸೂಕ್ತ ಸೌಲಭ್ಯ ಕಲ್ಪಿಸಿದೆ. ಪ್ರತಿಯೊಬ್ಬರೂ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿದರೆ ರೋಗ ನಿವಾರಣೆಗೆ ಅರ್ಧ ಪರಿಹಾರ ಆಗಲೇ ದೊರೆಯುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಟ್ರಸ್ಟ್, ಬಾಲಗಂಗಾಧರನಾಥ ಸ್ವಾಮೀಜಿ ಕ್ಯಾಂಪಸ್ನಲ್ಲಿ ಏರ್ಪಡಿಸಿರುವ ಎರಡು ದಿನಗಳ (ಮೇ 14, 15) ಬೃಹತ್ ಆರೋಗ್ಯ ಮೇಳದಲ್ಲಿ ಸಚಿವರು ಮಾತನಾಡಿದರು.
ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಮೊದಲಾದ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರ ಆದ್ಯತೆ ನೀಡಿದೆ. ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ರೋಗ ಗುರುತಿಸಿದರೆ ಅರ್ಧ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಕಳೆದ ನೂರು ವರ್ಷಗಳಲ್ಲೇ ಕೋವಿಡ್ನಂತಹ ಸಾಂಕ್ರಾಮಿಕವನ್ನು ಸರ್ಕಾರ ಎದುರಿಸಿರಲಿಲ್ಲ. ಅದನ್ನು ನಿಯಂತ್ರಣ ಮಾಡುವ ಸವಾಲು ಮತ್ತು ಅವಕಾಶ ನನಗೆ ದೊರೆತಿದ್ದು, ಅದನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆ. ಅಭಿವೃದ್ಧಿಶೀಲ ದೇಶಗಳಲ್ಲಿ ಇಂತಹ ಸಾಂಕ್ರಾಮಿಕ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಕೆಲ ವಿದೇಶಿ ಮಾಧ್ಯಮಗಳು ವ್ಯಾಖ್ಯಾನ ಮಾಡಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿಯವರು, ಇದರ ನೇತೃತ್ವ ವಹಿಸಿ ಸೂಕ್ತ ಕ್ರಮ ಕೈಗೊಂಡರು. ಎಲ್ಲಾ ಮುಖ್ಯಮಂತ್ರಿಗಳು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರೋಗ್ಯ ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬಿ ತಯಾರು ಮಾಡಿದರು. ಆರಂಭದಲ್ಲಿ ದೇಶದಲ್ಲಿ ಸರಿಯಾಗಿ ಪಿಪಿಇ ಕಿಟ್, ಮಾಸ್ಕ್, ಲಸಿಕೆ ಇರಲಿಲ್ಲ. ಆದರೆ ಪ್ರಧಾನಿಗಳ ದೃಢ ಸಂಕಲ್ಪದಿಂದ ಬೇರೆ ದೇಶಗಳಿಗೂ ಲಸಿಕೆ ಪೂರೈಸುವ ಮಟ್ಟಿಗೆ ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬಂತು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು 130 ಕೋಟಿ ಜನರನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಅಣಿಗೊಳಿಸಿದ್ದರಿಂದಾಗಿ ಅರ್ಧ ಹೋರಾಟ ಗೆಲ್ಲಲು ಸಾಧ್ಯವಾಯಿತು. ರಾಜ್ಯದಲ್ಲಿ ಈವರೆಗೆ 10.80 ಕೋಟಿ ಲಸಿಕೆ ನೀಡಲಾಗಿದೆ. ಮೊದಲ ಡೋಸ್ 100%, ಎರಡನೇ ಡೋಸ್ 98% ಪ್ರಗತಿ ಕಂಡಿದೆ. ಮೂರನೇ ಡೋಸ್ ಕೂಡ 70% ಪ್ರಗತಿಯಾಗಿದೆ. ಈ ಎಲ್ಲಾ ಸಾಧನೆಗೆ ಪ್ರಧಾನಿಗಳ ನಾಯಕತ್ವ ಕಾರಣ ಎಂದರು.
ಒಂದು ಜಿಲ್ಲೆಯಲ್ಲಿರುವ ಜನರಿಗೆ ಉತ್ತಮವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡಲು ಬೃಹತ್ ಆರೋಗ್ಯ ಮೇಳ ಏರ್ಪಡಿಸಲಾಗಿದೆ. 14 ಖಾಸಗಿ ವೈದ್ಯಕೀಯ ಕಾಲೇಜು, 20 ಖಾಸಗಿ ಆಸ್ಪತ್ರೆ, 12 ಕಣ್ಣಿನ ಆಸ್ಪತ್ರೆ ಸೇರಿದಂತೆ ಹಲವು ಸಂಸ್ಥೆಗಳ ವೈದ್ಯರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ತಪಾಸಣೆ ಬಳಿಕ ರೆಫರಲ್ ಮಾಡಿ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಆರು ತಿಂಗಳಲ್ಲಿ ಕಾರ್ಡ್
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ವಿಮೆ ನೀಡಲಾಗುತ್ತಿದೆ. ಇಡೀ ದೇಶದಲ್ಲಿ ಸುಮಾರು 80 ಕೋಟಿ ಜನರಿಗೆ ಈ ಯೋಜನೆ ದೊರೆಯುತ್ತದೆ. ಇನ್ನು ಆರು ತಿಂಗಳಲ್ಲಿ ರಾಜ್ಯದ ಪ್ರತಿಯೊಬ್ಬರ ಅರ್ಹರಿಗೂ ಆಯುಷ್ಮಾನ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಾನು ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ನನ್ನ ತಾಯಿ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು. ಮನೆಯಿಂದ ಆಸ್ಪತ್ರೆಗೆ ಅವರನ್ನು ಕರೆತರಲು ಒಂದು ಗಂಟೆ ಬೇಕಾಗಿತ್ತು. ಈ ಕಾರಣದಿಂದ ಅವರನ್ನು ಕಳೆದುಕೊಳ್ಳಬೇಕಾಯಿತು. ವೈದ್ಯ ಶಿಕ್ಷಣ ಪಡೆದಿದ್ದರೂ, ತಾಯಿಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕೆಂಬ ಅರಿವು ನನಗಿರಲಿಲ್ಲ. ಸಾಮಾನ್ಯ ಜನರಿಗೂ ಈ ಕುರಿತು ಅರಿವಿನ ಕೊರತೆ ಇದೆ ಎಂದರು.