ಇತ್ತೀಚೆಗೆ ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲವಾಗಿದೆ. ಮಕ್ಕಳು ಹೆತ್ತ ತಂದೆ- ತಾಯಿಯನ್ನ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ.
ತಂದೆ-ತಾಯಿ ತಮಗೆ ಬಂದ ಕಷ್ಟ ಎದುರಿಸಿ ಮಕ್ಕಳನ್ನು ಸಾಕಿದರೆ, ಮಕ್ಕಳು ಉದ್ಯೋಗ ಸಿಗುತ್ತಿದ್ದಂತೆ ತಂದೆ- ತಾಯಿಯನ್ನೇ ಮರೆಯುತ್ತಿದ್ದಾರೆ. ಈ ಆಸೆಗೆ ಮಕ್ಕಳು ತಣ್ಣೀರು ಎರಚುತ್ತಿದ್ದಾರೆ. ಸದ್ಯ ಚಿಕ್ಕೋಡಿಯಲ್ಲಿ (Chikkodi) ಅನಾರೋಗ್ಯದಿಂದ ಸಾವನ್ನಪ್ಪಿದ ತಂದೆಯ ಅಂತ್ಯಕ್ರಿಯೆಗೆ ವಿದೇಶದಲ್ಲಿರುವ ಮಕ್ಕಳು ಬಂದಿಲ್ಲ. ಹೀಗಾಗಿ ಚಿಕ್ಕೋಡಿ ಪೊಲೀಸರು (Police) ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರ ಮೂಲದ 72 ವರ್ಷದ ಚಂದ್ರ ಶರ್ಮಾ ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ಇವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಹೀಗಾಗಿ ಓರ್ವ ವ್ಯಕ್ತಿ ಗುತ್ತಿಗೆ ಆಧಾರದ ಮೇಲೆ ಅವರನ್ನು ನೋಡಿಕೊಳ್ಳುತ್ತಿದ್ದರು. ಚಿಕಿತ್ಸೆ ನಂತರ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಡ್ನಲ್ಲಿ ಮೂಲಚಂದ್ರ ಶರ್ಮಾ ಅವರನ್ನು ವ್ಯಕ್ತಿ ಇರಿಸಿದ್ದ.
ಆ ವ್ಯಕ್ತಿ ಗುತ್ತಿಗೆ ವಾಯಿದೆ ಮುಗಿದ ನಂತರ ಮೂಲಚಂದ್ರ ಶರ್ಮಾರನ್ನು ಲಾಡ್ಡ್ನಲ್ಲಿಯೇ ಬಿಟ್ಟು ತೆರಳಿದ್ದ. ಆಗ ಲಾಡ್ಜ್ ಮಾಲೀಕನ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ವ್ಯಕ್ತಿ ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ. ಅಲ್ಲದೇ, ಮಗ ದಕ್ಷಿಣ ಆಫ್ರಿಕಾದಲ್ಲಿ, ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ಹೇಳಿದ್ದರು. ನಂತರ ಪೊಲೀಸರು, ಮಕ್ಕಳ ಫೋನ್ ನಂಬರ್ ಪಡೆದು ನಿರಂತರ ಕರೆ ಮಾಡಿದ್ದಾರೆ. ಮಗ ಮತ್ತು ಮಗಳು ಪೊಲೀಸರ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊನೆಗೆ ವ್ಯಕ್ತಿ ಸಾವನ್ನಪ್ಪಿದ ನಂತರ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.