10,000 ಕ್ಕೂ ಹೆಚ್ಚು ಭಾರತೀಯ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಚೀನಾ
ಹೊಸದಿಲ್ಲಿ, ಸೆಪ್ಟೆಂಬರ್15: ಚೀನಾದ ಸರ್ಕಾರ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಪರ್ಕ ಹೊಂದಿರುವ ಶೆನ್ಜೆನ್ ಮೂಲದ ತಂತ್ರಜ್ಞಾನ ಕಂಪನಿ 10,000 ಕ್ಕೂ ಹೆಚ್ಚು ಭಾರತೀಯ ವ್ಯಕ್ತಿಗಳ ಮೇಲೆ ನಿಗಾ ವಹಿಸುತ್ತಿದ್ದು ಬೇಹುಗಾರಿಕೆ ನಡೆಸುವ ಪಟ್ಟಿಯೊಂದನ್ನು ಸಿದ್ದಗೊಳಿಸಿದೆ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬಗಳವರೆಗೆ, ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಅಶೋಕ್ ಗೆಹ್ಲೋಟ್, ಅಮರಿಂದರ್ ಸಿಂಗ್, ಉದ್ಧವ್ ಠಾಕ್ರೆ, ನವೀನ್ ಪಟ್ನಾಯಕ್, ಶಿವರಾಜ್ ಸಿಂಗ್ ಚೌಹಾನ್, ಕ್ಯಾಬಿನೆಟ್ ಮಂತ್ರಿಗಳಾದ ರಾಜನಾಥ್ ಸಿಂಗ್ ಮತ್ತು ರವಿಶಂಕರ್ ಪ್ರಸಾದ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಮತ್ತು ಪಿಯೂಷ್ ಗೋಯಲ್; ಸೇನಾ, ನೌಕಾಪಡೆ ಮತ್ತು ವಾಯುಪಡೆಯ ಕನಿಷ್ಠ 15 ಮಾಜಿ ಮುಖ್ಯಸ್ಥರು, ರಕ್ಷಣಾ ಸಿಬ್ಬಂದಿ ಬಿಪಿನ್ ಸಿಂಗ್ ರಾವತ್, ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಬೊಬ್ಡೆ, ಸ್ಟಾರ್ಟ್-ಅಪ್ ಟೆಕ್ ಉದ್ಯಮಿಗಳಾದ ಭಾರತೀಯ ಪಾವತಿ ಅಪ್ಲಿಕೇಶನ್ ನ ಸ್ಥಾಪಕ ನಿಪುನ್ ಮೆಹ್ರಾ, ಖ್ಯಾತ ಕೈಗಾರಿಕೋದ್ಯಮಿಗಳಾದ ರತನ್ ಟಾಟಾ, ಗೌತಮ್ ಅದಾನಿ ಸೇರಿದಂತೆ 10,000 ಕ್ಕೂ ಹೆಚ್ಚು ಭಾರತೀಯರ ಮೇಲೆ ಕಣ್ಣಿಟ್ಟಿದೆ.
ರಾಜಕೀಯ ಮತ್ತು ಪ್ರಭಾವಶಾಲಿ ವ್ಯಕ್ತಿಗಳು ಮಾತ್ರವಲ್ಲದೇ ವಿಜ್ಞಾನಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು; ಚಿತ್ರತಾರೆಯರು, ಕ್ರೀಡಾಪಟುಗಳು ಧಾರ್ಮಿಕ ವ್ಯಕ್ತಿಗಳು, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರ ಹೆಸರುಗಳು ಪಟ್ಟಿಯಲ್ಲಿದೆ ಎಂದು ವರದಿ ತಿಳಿಸಿದ್ದು, ಇವರೆಲ್ಲರ ಮೇಲೆ ಚೀನಾ ನಿಗಾವಹಿಸಿ ಬೇಹುಗಾರಿಕೆ ನಡೆಸುತ್ತಿದೆ.
ಯಾವ ಉದ್ದೇಶಕ್ಕಾಗಿ ಭಾರತೀಯ ವ್ಯಕ್ತಿಗಳ ಮೇಲೆ ನಿಗಾ ವಹಿಸುತ್ತಿದೆ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ಲಭಿಸಿಲ್ಲವಾದರೂ ಇದೊಂದು ಆತಂಕಕಾರಿ ಬೆಳವಣಿಯಂತೆ ಗೋಚರಿಸುತ್ತಿದೆ. ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಅತಿ ಗಣ್ಯ ವ್ಯಕ್ತಿಗಳ ರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಲಡಾಖ್ನಲ್ಲಿನ ವಾಸ್ತವಿಕ ನಿಯಂತ್ರಣದ ರೇಖೆಯೊಂದಿಗೆ ಭಾರತದೊಂದಿಗೆ ಹೆಚ್ಚುತ್ತಿರುವ ಪ್ರತಿರೋಧದಲ್ಲಿ ಚೀನಾ ಮುಖಭಂಗಕ್ಕೆ ಒಳಗಾಗುತ್ತಿರುವಾಗ ಮತ್ತು ಆ ಪ್ರದೇಶ ಮತ್ತು ಅದರಾಚೆ ಭಾರತೀಯ ಸೈನಿಕರು ತಮ್ಮ ಪ್ರಾಬಲ್ಯ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಇದು ಮಹತ್ವವನ್ನು ಪಡೆದುಕೊಂಡಿದೆ. ವಾಸ್ತವವಾಗಿ, ಶೆನ್ಜೆನ್ ಮೂಲದ ತಂತ್ರಜ್ಞಾನ ಕಂಪನಿ ಚೀನಾದ ಗುಪ್ತಚರ, ಮಿಲಿಟರಿ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ ಎಂದು ವರದಿಗಳು ತಿಳಿಸಿವೆ