ಕಲಬುರಗಿ: ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ಪ್ರಕರಣವು ಇದೀಗ ಮಹತ್ವದ ಹಂತ ತಲುಪಿದ್ದು, ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠವು ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ. ಪಥಸಂಚಲನ ನಡೆಸಲು ಬಯಸುವ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಿ, ನವೆಂಬರ್ 12ರೊಳಗೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದು, ನವೆಂಬರ್ 13 ರಂದು ಈ ಕುರಿತು ಅಂತಿಮ ತೀರ್ಪು ನೀಡುವುದಾಗಿ ಹೇಳಿ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಾಲಯದಲ್ಲಿ ನಡೆದಿದ್ದೇನು?
ಶುಕ್ರವಾರ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಏಕಸದಸ್ಯ ಪೀಠದ ಮುಂದೆ, ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ನಿರಾಕಿಸಿದ್ದನ್ನು ಪ್ರಶ್ನಿಸಿ ಆರ್ಎಸ್ಎಸ್ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದರು. “ನವೆಂಬರ್ 5 ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆದ ಸಭೆಯು ಅತ್ಯಂತ ಸೌಹಾರ್ದಯುತವಾಗಿತ್ತು. ನಾವು ಪಥಸಂಚಲನ ನಡೆಸಲು ನವೆಂಬರ್ 13 ಅಥವಾ 16 ರಂದು ಅವಕಾಶ ನೀಡುವಂತೆ ಪ್ರಸ್ತಾಪಿಸಿದ್ದೇವೆ. ಅಧಿಕಾರಿಗಳು ಉತ್ತಮವಾಗಿ ಸಹಕರಿಸಿದ್ದಾರೆ,” ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಇದಕ್ಕೆ ಸರ್ಕಾರದ ಪರವಾಗಿ ಪ್ರತಿವಾದಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, “ಸಭೆಯು ಫಲಪ್ರದವಾಗಿದ್ದು, ಕೇವಲ ಅರ್ಜಿದಾರರಷ್ಟೇ ಅಲ್ಲದೆ, ಎಲ್ಲಾ ಸಂಘಟನೆಗಳಿಗೂ ಸಮಾನ ಅವಕಾಶ ನೀಡುವ ದೃಷ್ಟಿಯಿಂದ ಒಂದು ವಾರದೊಳಗೆ ಅವರ ಮನವಿಗಳನ್ನು ಪರಿಗಣಿಸಿ ಅನುಮತಿ ನೀಡಲಾಗುವುದು. ಸರ್ಕಾರದ ಅಂತಿಮ ನಿರ್ಧಾರವನ್ನು ನವೆಂಬರ್ 13 ರಂದು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ನ್ಯಾಯಪೀಠದ ಖಡಕ್ ಪ್ರಶ್ನೆ
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಪೀಠವು, “ನೀವು ಸ್ವಯಂಪ್ರೇರಿತವಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಾ ಅಥವಾ ನ್ಯಾಯಾಲಯದ ಆದೇಶವನ್ನು ಬಯಸುತ್ತೀರಾ?” ಎಂದು ನೇರವಾಗಿ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, “ಇದು ಸರ್ಕಾರದ ಸ್ವಯಂಪ್ರೇರಿತ ಕ್ರಮವಾಗಿದೆ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವುದು ನಮ್ಮ ಉದ್ದೇಶ,” ಎಂದು ಸ್ಪಷ್ಟಪಡಿಸಿದರು.
ನ.13ಕ್ಕೆ ಎಲ್ಲವೂ ಅಂತಿಮ
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ, “ಎಲ್ಲವೂ ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಸರ್ಕಾರವು ನವೆಂಬರ್ 12ರೊಳಗೆ ದಿನಾಂಕ ನಿಗದಿಪಡಿಸಿ, ನವೆಂಬರ್ 13 ರಂದು ಮಧ್ಯಾಹ್ನ 2.30ಕ್ಕೆ ತನ್ನ ನಿಲುವನ್ನು ಅರ್ಜಿದಾರರಿಗೆ ತಿಳಿಸಬೇಕು. ನಂತರ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಲಾಗುವುದು. ಅಂದು ನಡೆಯುವ ವಿಚಾರಣೆಯಲ್ಲಿ ಎಲ್ಲರ ಸಹಕಾರವನ್ನು ದಾಖಲಿಸಿಕೊಳ್ಳಲಾಗುವುದು,” ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿತು.
ಒಟ್ಟಿನಲ್ಲಿ, ನ್ಯಾಯಾಲಯದ ಈ ನಿರ್ದೇಶನದಿಂದಾಗಿ ಚಿತ್ತಾಪುರ ಪಥಸಂಚಲನಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲ ಮತ್ತು ಕಲಹಕ್ಕೆ ಸದ್ಯದಲ್ಲೇ ತೆರೆ ಬೀಳುವ ನಿರೀಕ್ಷೆ ಮೂಡಿದೆ. ಸರ್ಕಾರದ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.







