ಚಂದ್ರು ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವರ್ಗ
ಬೆಂಗಳೂರು: ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದ, ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇಲ್ಲಿ ಯಾರ ಹೇಳಿಕೆಯೂ ಮುಖ್ಯವಲ್ಲ, ಸತ್ಯ ಹೊರಬರಬೇಕು ಅಷ್ಟೇ. ಯಾರು ವಾಗ್ದಾಳಿ ಮಾಡುತ್ತಾರೋ, ಯಾರು ಹೇಳಿಕೆ ಕೊಡುತ್ತಾರೋ ಅದು ಮುಖ್ಯವಾಗುವುದಿಲ್ಲ. ಘಟನೆಯ ಸತ್ಯಾಂಶ ಜನರಿಗೆ ಗೊತ್ತಾಗಬೇಕಿದೆ ಅಷ್ಟೇ ಎಂದು ಹೇಳಿದರು.
ಈ ಹಿನ್ನೆಲೆ ನಿನ್ನೆ ನಾನು ಕಮಿಷನರ್ ಮತ್ತು ಡಿಜಿಯವರ ಬಳಿ ಮಾತನಾಡಿದ್ದೇನೆ. ಈ ಪ್ರಕರಣವನ್ನು ಸಿಐಡಿಗೆ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ. ಚಂದ್ರು ಹತ್ಯೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತೆನಿಖೆಯಾಗಿ ಸತ್ಯ ಹೊರಗಡೆ ಬರಬೇಕು. 3ನೇ ಪಾರ್ಟಿಯಿಂದಲೇ ತೆನಿಖೆಯಾಗಲಿ, ಒಟ್ಟಿನಲ್ಲಿ ಸತ್ಯ ಹೊರಗಡೆ ಬಂದರೆ ಸಾಕು ಎಂದರು.
ಸಾಕಷ್ಟು ವಿವಾದಕ್ಕೆ ಕಾರಣ ಚಂದ್ರು ಕೊಲೆ ಪ್ರಕರಣದಲ್ಲಿ ದೂರುದಾರನಾಗಿರುವ ಸ್ನೇಹಿತ ಸೈಮನ್ ರಾಜ್ ತನ್ನ ಹೇಳಿಕೆಯನ್ನು ಬದಲಿಸಿದಕ್ಕೆ. ಕೊಲೆ ನಡೆದ ಬೆಳಗ್ಗೆ ಜೆಜೆ ನಗರದ ಪೊಲೀಸ್ ಠಾಣೆಗೆ ಆಗಮಿಸಿದ್ದ ಸೈಮನ್ ರಾಜ್ ದೂರು ಸಲ್ಲಿಸಿ ವಿಡಿಯೋ ಹೇಳಿಕೆ ದಾಖಲಿಸಿದ್ದನು. ಈ ದೂರಿನಲ್ಲಿ ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ ಎಂದು ಹೇಳಿದ್ದನು.
ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಎಫ್ಐಆರ್ ನಲ್ಲೂ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಎಂದು ಉಲ್ಲೇಖವಾಗಿದೆ. ಆದರೆ ಇದೀಗ ಇದ್ದಕ್ಕಿದ್ದಂತೆ ನಿನ್ನೆ ಉರ್ದು ಮಾತಾಡ್ಲಿಲ್ಲ ಅಂತಾ ಕೊಲೆ ಮಾಡಿದ್ದರು ಅಂತಾ ಸೈಮನ್ ರಾಜ್ ಆರೋಪಿಸಿದ್ದಾನೆ. ಸಧ್ಯ ಇದು ಸಾಕಷ್ಟು ರಾಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ.