ಆಂಡಿ – ದಿಗಂತ್ ದಂಪತಿಗೆ ಸಿಸಿಬಿ ನೋಟಿಸ್..!
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಬಗೆದಷ್ಟು ದೊಡ್ಡದಾಗುತ್ತಿದೆ. ದಿನೇ ದಿನೇ ಹೊಸ ಹೊಸ ಮಾಹಿತಿಗಳು ಬಹಿರಂಗವಾಗುತ್ತಿದೆ. ಈಗಾಗಲೇ ಇಬ್ಬರು ನಟಿಯರಾದ ಸಂಜನಾ ಹಾಗೂ ರಾಗಿಣಿಯನ್ನೂ ಬಂಧಿಸಲಾಗಿದೆ. ಇನ್ನೂ ಹಲವು ತಾರೆಯರ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿದ್ದು, ಇದೀಗ ದಿಗಂತ್ ಹಾಗೂ ಐಂದ್ರತಾಗೂ ಸಂಕಷ್ಟ ಎದುರಾಗಿದೆ. ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈಗೆ ಸಿಸಿಬಿ ನೋಟಿಸ್ ನೀಡಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬನ್ನಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಚೇತರಿಕೆ
ಕೊರೊನಾ ಹಾಗೂ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರ ಚರಣ್ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಪುತ್ರ ಚರಣ್, ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಲ್ಲಾ ತರಹದ ಚಿಕಿತ್ಸೆಗೆ ತಂದೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಇನ್ನೂ ಅವರಿಗೆ ಆಹಾರವನ್ನು ನೇರವಾಗಿಯೇ ನೀಡಲಾಗುತ್ತಿದೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದ್ದಾರೆ.
ಉಪ್ಪಿ ಬರ್ತ್ ಡೇ ಗೆ ಕಬ್ಜ ಥೀಮ್ ಪೋಸ್ಟರ್ ರಿಲೀಸ್..!
ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಕಬ್ಜ ಚಿತ್ರತಂಡದಿಂದ ಉಪೇಂದ್ರ ಥೀಮ್ ಪೋಸ್ಟರ್ ಬಿಡುಗಡ ಮಾಡಲು ತಯಾರಿ ನಡೆಸಿಕೊಳ್ಲಲಾಗಿದೆ. ಈ ಮೂಲಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಉಡುಗೊರೆ ನೀಡುತ್ತಿದೆ. ಥೀಮ್ ಪೋಸ್ಟರ್ ಅನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸೆಪ್ಟೆಂಬರ್ 17ರ ಸಂಜೆ 5 ಕ್ಕೆ ಬಿಡುಗಡೆ ಮಾಡಲಿದ್ದಾರೆ.
ವಿಷ್ಣುದಾದಾ ಸ್ಮಾರಕದಲ್ಲಿ ಏನೇಲ್ಲಾ ಇರುತ್ತೆ ಗೊತ್ತಾ?
ಸಾಕಷ್ಟು ವಿವಾದ- ವಾದ, ಚರ್ಚೆಗಳ ಬಳಿಕ ಕೊನೆಗೂ ವಿಷ್ಣುದಾದಾ ಸ್ಮಾರಕ ನಿರ್ಮಾಣಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆನ್ ಲೈನ್ ಮೂಲಕ ಚಾಲನೆ ನೀಡಿದ್ದಾರೆ.
ಮೈಸೂರಿನ ಹಾಲಾಳು ಗ್ರಾಮದಲ್ಲಿ ಶಂಕು ಸ್ಥಾಪನೆಯ ಸಮಾರಂಭ ನಡೆದಿದ್ದು, ಹಿರಿಯ ನಟಿ ಭಾರತಿ ಅವರು ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಜಯ ಬಚ್ಚನ್ ಹೇಳಿಕೆಗೆ ಕಂಗನಾ ರಣಾವತ್ ಕಿಡಿ
ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿನ ಜಯ ಬಚ್ಚನ್ ಅವರ ಇತ್ತೀಚಿನ ಹೇಳಿಕೆಗೆ ಕಂಗನಾ ರಣಾವತ್ ಕಠಿಣ ಪ್ರಶ್ನೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಹಿರಿಯ ಬಾಲಿವುಡ್ ನಟಿ ಮತ್ತು ಸಂಸದೆ ಜಯಾ ಬಚ್ಚನ್ ಅವರು ಮನರಂಜನಾ ಉದ್ಯಮಕ್ಕೆ ರಕ್ಷಣೆ ಬೇಕಾಗಿದೆ. ಇಂದು ಚಿತ್ರರಂಗ ಮಾದಕ ವ್ಯಸನದಿಂದ ಕುಖ್ಯಾತಿಗೆ ಗುರಿಯಾಗಿದೆ ಮತ್ತು ಇಂದು ಇಡೀ ಉದ್ಯಮದ ಚಿತ್ರಣವನ್ನು ಕೆಲವರು ಕಳಂಕಿತಗೊಳಿಸುತ್ತಿದ್ದಾರೆ ಎಂದು ಹೇಳಿದ್ದರು.
ಜಯಾ ಬಚ್ಚನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂಗನಾ, ಜಯಾ ಜಿ ನನ್ನ ಸ್ಥಾನದಲ್ಲಿ ನಿಮ್ಮ ಮಗಳು ಶ್ವೇತಾಳನ್ನು ಊಹಿಸಿಕೊಳ್ಳಿ, ಅವರು ಹದಿಹರೆಯದವರಾಗಿದ್ದು ಮಾದಕವಸ್ತುವಿನಿಂದ ಕಿರುಕುಳಕ್ಕೆ ಒಳಗಾಗಿದ್ದರೆ, ಅಥವಾ ಅಭಿಷೇಕ್ ನಿರಂತರವಾಗಿ ಬೆದರಿಸುವಿಕೆ ಮತ್ತು ಕಿರುಕುಳದ ಬಗ್ಗೆ ದೂರು ನೀಡಿದ್ದರೆ ಅಥವಾ ಒಂದು ದಿನ ನೇಣು ಬಿಗಿದಿರುವುದು ಕಂಡು ಬರುತ್ತಿದ್ದರೆ ನೀವು ಇದೇ ಮಾತನ್ನು ಹೇಳುತ್ತೀರಾ? ನಮಗೂ ಸಹಾನುಭೂತಿ ತೋರಿಸಿ ಎಂದಿದ್ದಾರೆ.