ಸಿಎಂ ಸಲಹೆ ಮೇರೆಗೆ ಕೋರ್ಟ್ ಮೊರೆ ಹೋದ್ರಾ ಬಾಂಬೆ ಫ್ರೆಂಡ್ಸ್..?
ಬೆಂಗಳುರು : ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ರಾಜ್ಯ ಸರ್ಕಾರದಲ್ಲಿ ಮಿಂಚಿನ ಸಂಚಲನ ಮೂಡಿಸಿದೆ. ಅದರಲ್ಲೂ ಬಾಂಬೆ ಫ್ರೆಂಡ್ಸ್ ಅಂತಾನೇ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಮಿತ್ರಮಂಡಳಿಯಲ್ಲಿ ಸುನಾಮಿ ಎಬ್ಬಿಸಿದೆ.
ಈ ಮಧ್ಯೆ ಕೆಲ ಸಚಿವರು ತಮಗೆ ಮಾನಹಾನಿ ಉಂಟು ಮಾಡುವ ಸುದ್ದಿಗಳನ್ನ ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿರುವುದು ಭಾರಿ ಕುತೂಹಲ, ಅನುಮಾನಗಳಿಗೆ ಕಾರಣವಾಗಿದೆ.
ಇಂದು ಏಳು ಮಂದಿಯಿಂದ ಕೋರ್ಟ್ಗೆ ಅರ್ಜಿ
ನಿನ್ನೆ ಆರು ಮಂದಿ ಸಚಿವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರೆ ಇಂದು ಏಳು ಮಂದಿ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿವೆ. ಈ ಮಧ್ಯೆ ಈ ಎಲ್ಲರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಲಹೆ ಮೇರೆಗೆ ಕೋರ್ಟ್ ಮೊರೆ ಹೋದ್ರಾ ಅನ್ನೋ ಪ್ರಶ್ನೆ ಉದ್ಭವವಾಗಿದೆ.
ಯಾಕೆಂದ್ರೆ ರಮೇಶ್ ಜಾರಕಿಹೊಳಿ ವಿಡಿಯೋ ಬ್ಲಾಸ್ಟ್ ಆಗುತ್ತಿದ್ದಂತೆ ಮಿತ್ರಮಂಡಳಿ ಸದಸ್ಯರು ಸಿಎಂ ಕಚೇರಿಯತ್ತ ಓಡೋಡಿ ಹೋಗಿದ್ದರು. ಇದಾದ ಬಳಿಕ ಮುಖ್ಯಮಂತ್ರಿಗಳೇ ಆ ಎಲ್ಲರನ್ನು ಕರೆದು ಮಾತನಾಡಿದ್ದರು.
ಆಗ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಮುಜುಗರ ತರುವಂತಹ ಕೆಲಸ ಆಗಬಾರದು ಎಂದು ಸೂಚಿಸಿದ್ರು. ಹಾಗೇ ನಿಮಗೇನಾದ್ರೂ ಅನುಮಾನವಿದ್ದರೇ ಕೋರ್ಟ್ ಮೊರೆ ಹೋಗಿ ಅಂತಾನೂ ಸಲಹೆ ನೀಡಿದ್ದರಂತೆ. ಈಗಾಗಿ ಬಾಂಬೆ ಸ್ನೇಹಿತರು ಇದೀಗ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ರಾಜಕಾರಣ ಪಡಸಾಲೆಯಲ್ಲಿ ಕೇಳಿಬರುತ್ತಿದೆ.