ಕಲ್ಲಿದ್ದಲು ಕಳ್ಳ ಸಾಗಾಣೆ ಪ್ರಕರಣ : ಮಮತಾ ಸೋದರಳಿಯ ಬಂಧನಕ್ಕೆ ಕೋರ್ಟ್ ತಡೆಯಾಜ್ಞೆ…
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಲು ಇಡಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಆದರೆ, ವಿಚಾರಣೆ ವೇಳೆ ಯಾವುದೇ ರೀತಿಯಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆಗೆ 24 ಗಂಟೆಗಳ ಮೊದಲು ಇಬ್ಬರಿಗೂ ನೋಟಿಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಯುಯು ಲಲಿತ್ ಇಡಿಗೆ ತಿಳಿಸಿದರು. ವಿಚಾರಣೆಗೆ ಕರೆದಾಗ ಟಿಎಂಸಿಯಿಂದ ಯಾವುದೇ ಗಲಾಟೆ, ಪ್ರತಿಭಟನೆ ಇರಬಾರದು ಎಂದು ನ್ಯಾಯಾಲಯವು ಅಭಿಷೇಕ್ಗೆ ಹೇಳಿದೆ. ಇಲ್ಲದಿದ್ದರೆ ನ್ಯಾಯಾಲಯ ರಕ್ಷಣೆಯನ್ನು ಹಿಂಪಡೆಯುತ್ತದೆ.
ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು
ಮಾರ್ಚ್ 22 ರಂದು, ಅಭಿಷೇಕ್ ಬ್ಯಾನರ್ಜಿ ಮತ್ತು ರುಜಿರಾ ಬ್ಯಾನರ್ಜಿ ವಿರುದ್ಧ ಇಡಿ ವಿಚಾರಣೆ ನೋಟಿಸ್ ಜಾರಿ ಮಾಡಿತ್ತು, ನಂತರ ಅವರು ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಆದರೆ, ಅಲ್ಲಿ ಅವರಿಗೆ ಸಮಾಧಾನವಾಗಲಿಲ್ಲ. ಇದೇ ವೇಳೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು.
ಅಭಿಷೇಕ್ ಮತ್ತು ರುಜಿರಾ ಹೆಸರು ತಳುಕು ಹಾಕೊಕೊಂಡಿದ್ದು ಹೇಗೆ ?
ಅಸನ್ಸೋಲ್ ಪ್ರದೇಶದಲ್ಲಿ ಅಕ್ರಮ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದ ನಂತರ ಸಿಬಿಐ ಮತ್ತು ಇಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಈಸ್ಟರ್ನ್ ಕೋಲ್ಡ್ ಫೀಲ್ಡ್ಗೆ ಸಂಬಂಧಿಸಿದ ಅನುಪ್ ಮಾಂಝಿ ಬಂಧನದ ನಂತರ, ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿಗೆ ನೋಟಿಸ್ ನೀಡಲಾಗಿದೆ. ಅಭಿಷೇಕ್ ಬ್ಯಾನರ್ಜಿ ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ನ ಸಂಸದ ಮತ್ತು ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ.