ಶ್ರೀಶೈಲದ ಮಲ್ಲಿಕಾರ್ಜುನನ್ನು ಕಾಣಲು ಉತ್ಸುಕನಾಗಿದ್ದ ಕೋಲಿನ್ ಮೆಕೆಂಜೆ; ಕೊನೆಗೂ ಲಿಂಗ ದರ್ಶನ ಪ್ರಾಪ್ತವಾಯ್ತಾ?
ನಮ್ಮ ಪ್ರಾಚಿನ ಭಾರತದಲ್ಲಿ ನಮ್ಮ ಪೂರ್ವಜರು ದೇವಾಲಯವನ್ನು ಕಟ್ಟಲು ಬಳಸುತ್ತಿದ್ದ ಸ್ಥಳ ಮತ್ತು ಪರಿಸರ ನಿಜಕ್ಕೂ ಅದ್ಭುತವಾಗಿರುತ್ತಿತ್ತು. ಇಂದಿಗೂ ಸಹಾ ನಾವುಗಳು ಯಾವುದೇ ಪ್ರಾಚೀನ ದೇವಾಲಯಕ್ಕೆ ಹೋದರೆ ಆ ಪರಿಸರದಲ್ಲಿ ಅನುಭವಿಸುವ ಧನಾತ್ಮಕ ಕಂಪನಗಳು ಇಂದಿನ ಕಾಂಕ್ರೀಟ್ ದೇವಾಲಯಗಳಲ್ಲಿ ನಮಗೆ ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ದೇವಾಲಯ ಕಟ್ಟುವುದು ಒಂದು ಭಾಗವಾದರೆ ಇನ್ನೊಂದು ಪ್ರಮುಖ ಭಾಗ ದೇವಾಲಯ ಕಟ್ಟುವ ಸ್ಥಳ ಮತ್ತು ಪರಿಸರಕ್ಕೆ ನೀಡಲಾಗುತ್ತಿತ್ತು, ಆದರೆ ಇಂದು ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮ ಭಾರತದಲ್ಲಿ ಒಟ್ಟು 12 ಜ್ಯೋತಿರ್ಲಿಂಗಗಳು ಮತ್ತು 18 ಶಕ್ತಿ ಪೀಠಗಳು ಇದ್ದು ಅವುಗಳಲ್ಲಿ ಎರಡು ಇರುವ (ಜ್ಯೋತಿರ್ಲಿಂಗ ಮತ್ತು ಶಕ್ತಿ ಪೀಠ) ಪುಣ್ಯಕ್ಷೇತ್ರ ಕೇವಲ ಮೂರು. ಇಂತಹ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಪ್ರಸಿದ್ಧ ಕ್ಷೇತ್ರವೇ ಆಂದ್ರಪ್ರದೇಶದ ಶ್ರೀಶೈಲ.
ಈ ಪುಣ್ಯಕ್ಷೇತ್ರದಲ್ಲಿ ಶಿವನು ಲಿಂಗ ಸ್ವರೂಪಿಯಾಗಿ ಶ್ರೀ ಮಲ್ಲಿಕಾರ್ಜುನ ಎಂದು ಪ್ರಖ್ಯಾತವಾಗಿದ್ದರೆ ಇನ್ನೊಂದು ಕಡೆ ಶಕ್ತಿ ಸ್ವರೂಪಿಯಾಗಿ ಪಾರ್ವತಿ ಭ್ರಮರಾಂಬ ಹೆಸರಿನಲ್ಲಿ ನೆಲೆಸಿದ್ದು ಭಕ್ತರ ಇಷ್ಟಾರ್ಥವನ್ನು ಸಾಕಾರಗೋಳಿಸುವ ಕಾಮಧೇನು ಆಗಿದ್ದಾರೆ. ಶ್ರೀಶೈಲದ ಬಗ್ಗೆ ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖ ಇದ್ದು ಇದರ ಸುತ್ತಮುತ್ತಲಿನ ಪರಿಸರ ಒಂದು ಕಾಲದಲ್ಲಿ ಭಾರತ ಖಂಡದ ಶ್ರೇಷ್ಠ ಲೋಹಶಾಸ್ತ್ರ ವಿದ್ಯೆಯನ್ನು ಬೋಧಿಸುವ ನಾಡಾಗಿತ್ತು. ಶಾತವಾಹನರಿಂದ ವಿಜಯನಗರದ ರಾಯರವರೆಗೆ ಈ ಪ್ರದೇಶವನ್ನು ಆಳಿದ ಅದೆಷ್ಟೋ ರಾಜಮನೆತನಗಳು ಈ ಪುಣ್ಯಕ್ಷೇತ್ರಕ್ಕೆ ತಮ್ಮದೇ ಆದ ಅಮೋಘ ಕಾಣಿಕೆಯನ್ನು ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ದೇವಾಲಯಕ್ಕೆ ಹಲವಾರು ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ಇನ್ನೂ ಈ ಹಿಂದುಗಳ ಪವಿತ್ರ ಪುಣ್ಯಕ್ಷೇತ್ರದಲ್ಲಿ ಒಂದಾಗಿರುವ ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವನ್ನು ಮೊಟ್ಟಮೊದಲ ಬಾರಿಗೆ ಕಣ್ಣಾರೆ ದರ್ಶನ ಮಾಡಿದ ಯುರೋಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಬ್ರಿಟೀಷ್ ಸರ್ವೇ ಅಧಿಕಾರಿ ಕೊಲಿನ್ ಮೆಕೆಂಜಿ. ಇನ್ನೂ ಹೆಚ್ಚು ಸ್ವಾರಸ್ಯಕರವಾದ ಸಂಗತಿ ಏನೆಂದರೆ ಕೊಲಿನ್ ಮೆಕೆಂಜಿ ಅಂದು ಶ್ರೀಶೈಲ ಮಲ್ಲಿಕಾರ್ಜುನ ಲಿಂಗವನ್ನು ಗರ್ಭಗೃಹ ಮತ್ತು ದೇವಾಲಯದ ಒಳಗೆ ಪ್ರವೇಶಿಸದೆ ನೋಡಿದ ಆ ಕ್ಷಣ ಮತ್ತು ನೋಡಲು ನೆರವಾದ ಕನ್ನಡಿಯ ವ್ಯವಸ್ಥೆ.
ಮಾರ್ಚ್ 1792 ರಲ್ಲಿ ಮೂರನೇ ಆಂಗ್ಲ ಮೈಸೂರು ಯುದ್ಧದ ಸಮಾಪ್ತಿಯ ನಂತರದಲ್ಲಿ ಟಿಪ್ಪು ಸುಲ್ತಾನ್ ಕಾವೇರಿ ನದಿಯ ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಇರುವ ತನ್ನ ರಾಜ್ಯದ ಪ್ರದೇಶವನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಸುಪರ್ದಿಗೆ ಕೊಡಬೇಕಾಗುತ್ತದೆ. ಈ ಯುದ್ಧದಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಜೊತೆಗೆ ಭಾಗವಹಿಸಿದ ಮರಾಠ, ನಿಜಾಮ್, ತಿರುವಾಂಕೂರು ಮತ್ತು ಕೊಡಗಿನ ರಾಜರಿಗೆ ಟಿಪ್ಪು ಸುಲ್ತಾನ್ ಇಂದ ವಶಪಡಿಸಿಕೊಂಡ ಪ್ರದೇಶಗಳನ್ನು ಭಾಗ ಮಾಡಲಾಗುತ್ತದೆ. ಅಂದು ನಿಜಾಮ್ ಗೆ ದೊರಕಿದ ಪ್ರದೇಶಗಳನ್ನು ಸರ್ವೇ ಮಾಡಲು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಕೊಲಿನ್ ಮೆಕೆಂಜಿ ಅವರನ್ನು ನೇಮಕ ಮಾಡುತ್ತಾರೆ. ಮೆಕೆಂಜಿ ಎಪ್ರಿಲ್ 1792 ಇಂದ 1799 ವರೆಗೂ ನಿಜಾಮ್ ಅವರ ರಾಜ್ಯದ ಸರ್ವೇ ಕಾರ್ಯಯನ್ನು ಕೈಗೊಳ್ಳುತ್ತಾನೆ, ಇದರ ಪ್ರಯುಕ್ತ ಹಲವಾರು ಪ್ರಮುಖ ಊರು, ಪೇಟೆ ಮತ್ತು ಕೋಟೆಯ ನಕ್ಷೆಗಳನ್ನು ತಯಾರಿಸುತ್ತಾನೆ. ಮೆಕೆಂಜಿ ತನ್ನ ಸರ್ವೇ ಕಾರ್ಯ ನಿಮಿತ್ತ ಕೃಷ್ಣ ನದಿಯ ದಂಡೆಯ ಮೇಲೆ ಇರುವ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಶೈಲಕ್ಕೆ ಬಂದಾಗ ಹಲವಾರು ಜನರ ಬಾಯಿಯಲ್ಲಿ ಕೇಳಿದ ಶ್ರೀ ಮಲ್ಲಿಕಾರ್ಜುನ ಲಿಂಗದ ದರ್ಶನ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ.
14ನೇ ಮಾರ್ಚ್ 1794 (14-03-1794) ರಂದು ಶ್ರೀಶೈಲಕ್ಕೆ ಆಗಮಿಸಿದ ಮೆಕೆಂಜಿ ದೇವಾಲಯದ ದಕ್ಷಿಣ ದ್ವಾರದ ಮೂಲಕ ಒಳಪ್ರಾಂಗಣವನ್ನು ಪ್ರವೇಶ ಮಾಡುತ್ತಾನೆ. ಮಧ್ಯದಲ್ಲಿ ಇರುವ ದೇವಾಲಯವು ಚೌಕಾಕಾರವಾಗಿದ್ದು ಅದರ ಸೂರಿನ ಮೇಲೆ ಹಂತ ಹಂತವಾಗಿ ಕಟ್ಟಿರುವ ಮೆಟ್ಟಿಲುಗಳ ಪಿರಮಿಡ್ ಆಕಾರದ ಗೋಪುರ ಮತ್ತು ಅದರ ಕಲಶದ ಬಗ್ಗೆ ವರ್ಣನೆ ಮಾಡುತ್ತಾನೆ. ದೇವಾಲಯದ ಗೋಪುರ ಮತ್ತು ಅದರ ಕಲಶಕ್ಕೆ ಹಿತ್ತಾಳೆಯ ಹೊದಿಕೆ ಹಾಕಿದ್ದು ಅದರ ಮೇಲೆ ಸ್ವರ್ಣಲೇಪನ ಮಾಡಿರುವ ಬಗ್ಗೆ ಉಲ್ಲೇಖ ಮಾಡುತ್ತಾನೆ. ಆ ದೇವಾಲಯದ ಕಂಬಗಳು, ಬಾಗಿಲು ಮತ್ತು ಚಾವಣಿ ಹಾಗೂ ಗೋಡೆ ಸೇರುವ ಜಾಗದಲ್ಲಿ (Frieze’s) ಹಿತ್ತಾಳೆಯ ಹೊದಿಕೆಯನ್ನು ಹೊಂದಿದ್ದು ಇದರ ಮೇಲೆ ಸ್ತ್ರೀ ಚಿತ್ರಗಳು ಇರುವ ಬಗ್ಗೆ ಮಾಹಿತಿ ನೀಡುತ್ತಾನೆ. ದೇವಾಲಯದ ದಕ್ಷಿಣ ದಿಕ್ಕಿನ ಮಹಾದ್ವಾರದ ಮುಂಭಾಗದಲ್ಲಿ ಇರುವ ತೆಳುವಾದ ಸ್ಥಂಭದ ಬಗ್ಗೆ ಮೆಕೆಂಜಿ ಅದ್ಭುತವಾದ ಮಾಹಿತಿ ನೀಡುತ್ತಾನೆ, ಈ ಕಂಬವು ಕನಿಷ್ಠ 24 ರಿಂದ 30 ಅಡಿ ಎತ್ತರ ಇದ್ದು ಇದಕ್ಕೂ ಸಹಾ ಹಿತ್ತಾಳೆಯ ಹೊದಿಕೆ ಹಾಕಲಾಗಿದ್ದು ಇದು ಒಂದು ಕಡೆ ವಾಲಿದ್ದು ಬಹುಶಃ ಹಿತ್ತಾಳೆಯ ಹೊದಿಕೆಯ ಒಳಗೆ ಬಿದಿರು ಇಟ್ಟಿರ ಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಈ ಸ್ತಂಭದ ಕಟ್ಟೆಯ ಪೀಠದ ಮೇಲೆ ಶಾಸನ ಇರುವ ಬಗ್ಗೆ ಮಾಹಿತಿ ನೀಡುತ್ತಾನೆ. ಆ ದೇವಾಲಯದಲ್ಲಿ ಹಲವಾರು ತಾಮ್ರ ಶಾಸನಗಳು (Copper Plate Inscriptions) ಇದ್ದು ಅವುಗಳನ್ನು ನೋಡಿರುವ ಬಗ್ಗೆ ಮಾಹಿತಿ ನೀಡುತ್ತಾನೆ ಮೆಕೆಂಜಿ.
ಕೊಲಿನ್ ಮೆಕೆಂಜಿ ಆ ದೇವಾಲಯಕ್ಕೆ ಬಂದ ಮೊದಲ ಯುರೋಪಿಯನ್ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿ ಆಗಿದ್ದರಿಂದ ಅಂದಿನ ಕಾಲದ ಆಚರಣೆಯ ಅನುಸಾರ ಮೆಕೆಂಜಿಯನ್ನು ದೇವಾಲಯದ ಬಾಗಿಲಿನ ಹೊರಗೆ ನಿಲ್ಲಿಸಿ ಶ್ರೀ ಮಲ್ಲಿಕಾರ್ಜುನ ಲಿಂಗದ ದರ್ಶನ ಮಾಡಿಸುತ್ತಾರೆ, ಆದರೆ ಸಂಜೆ ಆದ್ದರಿಂದ ಮೆಕೆಂಜಿಗೆ ಏನು ಕಾಣಿಸುವುದಿಲ್ಲ. ಲಿಂಗವನ್ನು ಸ್ಪಷ್ಟವಾಗಿ ನೋಡಲು ಆಗದೆ ಮೆಕೆಂಜಿ ಹತಾಶನಾಗಿ ಹೇಗಾದರೂ ಮಾಡಿ ಲಿಂಗದ ದರ್ಶನ ಮಾಡಿಸಿ ಎಂದು ದೇವಾಲಯದ ಬ್ರಾಹ್ಮಣರಲ್ಲಿ ಕೇಳಿ ಕೊಳ್ಳತ್ತಾನೆ. ಬ್ರಾಹ್ಮಣರು ಮೆಕೆಂಜಿಗೆ ನಾಳೆ ಹೇಗಾದರೂ ಮಾಡಿ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಮಾಡಿಸುತ್ತೇವೆ ಎಂದು ಹೇಳಿ ಸಮಾಧಾನ ಮಾಡಿ ಕಳಿಸುತ್ತಾರೆ. ಮಾರನೆ ದಿನ ಅಂದರೆ 15 ಮಾರ್ಚ್ 1794ರಂದು ಮೆಕೆಂಜಿ ದೇವಾಲಯದ ಹತ್ತಿರ ಹೋದಾಗ ಸ್ಥಳೀಯರು ಅವನಿಗೆ ಸ್ವಾಮಿಯ ದರ್ಶನ ಮಾಡಿಸಲು ವಿಶೇಷ ವ್ಯವಸ್ಥೆ ಮಾಡಿದ್ದು ಅದರ ಬಗ್ಗೆ ಮಾಹಿತಿ ನೀಡುತ್ತಾರೆ, ಆದರೆ ಅದು ಮೆಕೆಂಜಿಯ ತಲೆಗೆ ಹೋಗುವುದಿಲ್ಲ. ಸರಿಯಾಗಿ 10 ಗಂಟೆಗೆ ದೇವಾಲಯದ ಬಾಗಿಲು ತೆರೆದ ಮೇಲೆ ಒಬ್ಬ ಹುಡುಗ 2 ಅಡಿ ವೃತ್ತದ ಬಿಳಿಯ ಬಣ್ಣದ ಲೋಹದಿಂದ ಮಾಡಿದ ಉಬ್ಬಿದ ಕನ್ನಡಿಯನ್ನು (Convex Mirror) ಅದರ ಅಲಂಕಾರಿಕ ಹಿತ್ತಾಳೆ ಹಿಡಿಕೆ ಇಂದ ಹಿಡಿದು ಸೂರ್ಯನ ಬೆಳಕನ್ನು ಗರ್ಭಗೃಹದ ಕಡೆಗೆ ಕೇಂದ್ರಿಸಲು ಪ್ರಯತ್ನಿಸಿದರು ವಿಫಲನಾಗುತ್ತಾನೆ. ತದನಂತರ ಇನ್ನೊಂದು ಸಣ್ಣ ಒಳಬಾಗಿದ ಕನ್ನಡಿಯನ್ನು (Concave Mirror) ತೆಗೆದುಕೊಂಡು ಬಂದು ಸೂರ್ಯನ ಕಿರಣದಿಂದ ಗರ್ಭಗುಡಿಯನ್ನು ಪ್ರಜ್ವಲಿಸುತ್ತಾನೆ. ಬ್ರಾಹ್ಮಣರು ಮೆಕೆಂಜಿಗೆ ತನ್ನ ಪಾದರಕ್ಷೆಯನ್ನು ಬಿಚ್ಚಿ ದೇವಾಲಯದ ಹೊಸಲಲ್ಲಿ ನಿಲ್ಲಲು ಸೂಚಿಸುತ್ತಾರೆ. ಮೆಕೆಂಜಿ ಅಂದು ಸೂರ್ಯನ ಬೆಳಕಿನಲ್ಲಿ ಲಿಂಗ ಸ್ವರೂಪಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನವನ್ನು ಪಡೆಯುತ್ತಾನೆ. ಮೆಕೆಂಜಿ ಅಂದು ದೇವಾಲಯದಲ್ಲಿ ಕಂಡ ಎಲ್ಲಾ ದೃಶ್ಯಗಳನ್ನು ಚಿತ್ರಿಸಿ ಅದರ ಬಗ್ಗೆ ಬರೆಯುತ್ತಾನೆ. ಮೆಕೆಂಜಿಯ ಸಾವಿನ ನಂತರದಲ್ಲಿ ಲಂಡನ್ ಅಲ್ಲಿ ಇರುವ ಅವನ ಸಂಗ್ರಹದಲ್ಲಿ ಶ್ರೀಶೈಲದ ಬಗ್ಗೆ ಮೆಕೆಂಜಿ ಬರೆದ ಮಾಹಿತಿಯನ್ನು Asiatick Researches ನಲ್ಲಿ ಉಲ್ಲೇಖವಾಗುತ್ತದೆ ಆದರೆ ಅದರಲ್ಲಿ ಮೆಕೆಂಜಿ ಬರೆದ ಶ್ರೀಶೈಲ ದೇವಾಲಯದ ಚಿತ್ರಗಳನ್ನು ಕೈಬಿಡಲಾಗುತ್ತದೆ. ಇಂದು ನಾನು ಈ ಚಿತ್ರಗಳು ಮತ್ತು ಮೆಕೆಂಜಿ ಸಂಗ್ರಹಿಸಿದ ಮಾಹಿತಿ ಎರಡನ್ನೂ ಇಲ್ಲಿ ಒದಗಿಸುತ್ತಿರುವೆ.
1472ರಲ್ಲಿ ರಷ್ಯಾ ದೇಶದ ಪ್ರವಾಸಿ ಅಥಾನಾಸಿಯಸ್ ನಿಕಿಟಿನ್ (Athanasius Nikitin) ಬಹಮನಿ ಸುಲ್ತಾನರ ಬೀದರ್ ನಲ್ಲಿ ಮೂರು ವರ್ಷಗಳ ಕಾಲ ನೆಲೆಸುತ್ತಾನೆ. ಅಂದು ನಿಕಿಟಿನ್ ಶ್ರೀಶೈಲದ ಪೆರ್ವಟ್ಟುಂ ಅನ್ನು ಸಂದರ್ಶಿಸಿ ಅದನ್ನು ಹಿಂದೂಗಳ ಪಾಲಿನ ಜೆರುಸ್ಲೇಮ್ ಎಂದು ಬಣ್ಣಿಸುತ್ತಾನೆ. ನಿಕಿಟಿನ್ ಶ್ರೀಶೈಲವನ್ನು ಸಂದರ್ಶಿಸಿದರು ಯುರೋಪಿಯನ್ ಮೂಲದ ಒಬ್ಬ ವ್ಯಕ್ತಿ ಮೊಟ್ಟಮೊದಲು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಲಿಂಗದ ದರ್ಶನ ಪಡೆದ ಕೀರ್ತಿಗೆ ಭಾಜನರಾಗಿದ್ದು ಕೊಲಿನ್ ಮೆಕೆಂಜಿ. ಶಕ್ತಿ ಪೀಠ ಮತ್ತು ಜ್ಯೋತಿರ್ಲಿಂಗವನ್ನು ಹೊಂದಿರುವ ಪುಣ್ಯಕ್ಷೇತ್ರ ಶ್ರೀಶೈಲ ಮತ್ತು ಅದರ ಪರಿಸರ ಇಂದಿಗೂ ಸಹಾ ಹಲವಾರು ಕೌತುಕದ ವಿಷಯಗಳನ್ನು ತನ್ನ ಮಡಲಿನಲ್ಲಿ ಇಟ್ಟುಕೊಂಡಿದೆ. ಇನ್ನೊಂದು ವಿಶೇಷ ಅಂದರೆ ಶ್ರೀಶೈಲ ಸುತ್ತಲೂ ಹರಿಯುವ ಕೃಷ್ಣ ನದಿಯು ಲಿಂಗದ ಆಕೃತಿಯಲ್ಲಿ ಇರುವುದು.
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ








