ಬೆಂಗಳೂರು, ಮೇ 28 : ಬೆಂಗಳೂರಿನ ಯಲಹಂಕದ ನೂತನ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ವಿರೋಧ ಪಕ್ಷ ನಾಯಕ, ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವ ಪ್ರಹ್ಲಾದ್ ಜೋಶಿ ಅವರು ಸಾವರ್ಕರ ಬಗ್ಗೆ ಮೊದಲು ಅರಿತು ತಿಳಿದು ನಂತರ ಮಾತನಾಡಿ, ತುಷ್ಟೀಕರಣ ಮತಬ್ಯಾಂಕ್ ಗುಂಗಿನಿಂದ ಹೊರಗೆ ಬನ್ನಿ ನಾಮದಾರ್ ಸಿದ್ಧರಾಮಯ್ಯನವರೇ ಎಂದು ಟ್ವೀಟ್ ನಲ್ಲಿ ತಿರುಗೇಟು ನೀಡಿದ್ದಾರೆ.
ಯಲಹಂಕದ ನೂತನ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟು ಲೋಕಾರ್ಪಣೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿರುವ ಪ್ರಹ್ಲಾದ್ ಜೋಶಿ, ‘ ಸ್ವಾತಂತ್ರ್ಯವೀರ ಸಾವರ್ಕರ ಅವರಿಗೆ ವಿರೋಧ ಮಾಡುವುದು ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಬುದ್ಧ ಆಡಳಿತಗಾರರು, ಜನರೇ ಅವರ ಸೂತ್ರಧಾರರು. ದೇಶದ ವಿವಿಧೆಡೆ ವೃತ್ತ, ಕಟ್ಟಡ ಸಂಸ್ಥೆಗಳಿಗೆ ನೆಹರೂ, ನಕಲಿ ಗಾಂಧಿಗಳ ನಾಮಕರಣವೇ ಸ್ವಾತಂತ್ರ್ಯಹೋರಾಟಗಾರರಿಗೆ ನಾಮದಾರ್ ಪಾರ್ಟಿ ಸಲ್ಲಿಸಿದ ಕೊಡುಗೆ ‘ ಎಂದು ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರಹ್ಲಾದ್ ಜೋಶಿ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
‘ನಿಮ್ಮ ಪಕ್ಷ ಎಷ್ಟು ಕಡೆ ನೆಹರೂ, ನಕಲಿ ಗಾಂಧಿಗಳ ನಾಮಕರಣ ಮಾಡಿದೆ ಎಂದು ನಿಮಗೆ ವಿವರ ಕೊಡಬಲ್ಲೆ, ಎಷ್ಟು ಕಡೆ ಸರ್ದಾರ ಪಟೇಲ್, ತಿಲಕ್, ನೇತಾಜಿ ಸುಭಾಷ್ ಚಂದ್ರ ಭೋಸ್, ಭಗತಸಿಂಗ್, ಚಂದ್ರಶೇಖರ್ ಆಜಾದ್ ಮೊದಲಾದವರ ನಾಮಕರಣ ನಿಮ್ಮ ಪಕ್ಷ ಮಾಡಿದೆ ಎಂದು ವಿವರ ಕೊಡಿ’ ಪ್ರಹ್ಲಾದ್ ಜೋಶಿ ಟ್ವಿಟರ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.