Congress – BJP | ದಲಿತರನ್ನು ಮುಗಿಸಲೆಂದೇ ಸಿದ್ದರಾಮಯ್ಯ – ಡಿಕೆಶಿ ಟೊಂಕಕಟ್ಟಿದ್ದಾರೆ
ಬೆಂಗಳೂರು : ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತದೆ. ದಲಿತರನ್ನು ಮುಗಿಸಲೆಂದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಟೊಂಕಕಟ್ಟಿ ನಿಂತಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ಶೀಘ್ರದಲ್ಲಿಯೇ ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಕೋಲಾರದಲ್ಲಿ ಹರಿದಾಡುತ್ತಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತದೆ.
ಅವಕಾಶ ಸಿಕ್ಕಿದಾಗಲೆಲ್ಲ, ದಲಿತ ನಾಯಕರ ರಾಜಕೀಯ ಜೀವನವನ್ನು ಸಮಾಧಿ ಮಾಡುತ್ತದೆ.
ಈಗ ಮತ್ತೊಬ್ಬ ಬಲಾಢ್ಯ ದಲಿತ ನಾಯಕನ ರಾಜಕೀಯ ಜೀವನವನ್ನು ಅಂತ್ಯಗೊಳಿಸುವುದರಲ್ಲಿ ಕಾಂಗ್ರೆಸ್ ಮಗ್ನವಾಗಿದೆ ಎಂದು ಕುಟುಕಿದೆ.
ಇದೇ ವೇಳೆ ದಲಿತರು ಮತ್ತು ಮುಸ್ಲಿಮರು ಮನಸ್ಸು ಮಾಡಿದ್ರೆ ದಲಿತ ಸಿಎಂ ಆಗುತ್ತಾರೆ ಎಂಬ ಜಿ ಪರಮೇಶ್ವರ್ ಹೇಳಿಕೆಗೆ ಟ್ವೀಟ್ ಮಾಡಿ, ಮಾನ್ಯ ಪರಮೇಶ್ವರ್ ಅವರೇ, ಇಷ್ಟೊಂದು ಆಸೆ ಇಟ್ಟುಕೊಳ್ಳಬೇಡಿ.
2013 ರಲ್ಲಿದ್ದಂತಹ ಸುವರ್ಣಾವಕಾಶವನ್ನೇ ನಿಮ್ಮಿಂದ ಕಿತ್ತುಕೊಂಡಿದ್ದಾರೆ.
ಇನ್ನು 2023 ರಲ್ಲಿ ನಿಮ್ಮನ್ನು ಬಿಡುವರೇ? ದಲಿತರನ್ನು ಮುಗಿಸಲೆಂದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಟೊಂಕಕಟ್ಟಿ ನಿಂತಿದ್ದಾರೆ ಎಂದು ಬಿಜೆಪಿ ಬರೆದುಕೊಂಡಿದೆ.