ಬೆಂಗಳೂರು : ರಾಜ್ಯದ ಜನರ ಮತ ಪಡೆದು ಲೋಕಸಭೆಗೆ ಚುನಾಯಿತರಾಗಿರುವ ಬಿಜೆಪಿಯ 25 ಸಂಸದರು ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನೆರೆ ಪರಿಹಾರ, ಜಿಎಸ್ ಟಿ ಹಣದ ವಿಚಾರವಾಗಿ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಅಸಹಾಯಕರಾಗಿದ್ದಾರೆ. ರಾಜ್ಯದಿಂದ 25 ಜನ ಸಂಸದರು ಗೆದ್ದು ಹೋಗಿದ್ದಾರೆ, ಆದ್ರೆ ಅವರು ಪ್ರಧಾನಿ ಮುಂದೆ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಎಂಪಿಗಳು ಸಿಎಂಗೆ ಸಾಥ್ ಕೊಡಬೇಕು, ಕೊಡುತ್ತಿಲ್ಲ. ಜಿಎಸ್ ಟಿ, ನೆರೆ ಪರಿಹಾರ ಬಗ್ಗೆ ಸಂಸದರು ಮಾತನಾಡುತ್ತಿಲ್ಲ. ಇದು ಬಿಜೆಪಿಯ 25 ಸಂಸದರು ರಾಜ್ಯಕ್ಕೆ ಮಾಡುತ್ತಿರೋ ದ್ರೋಹ. ನೆರೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳು ಬರ್ತಾರೆ, ಹೋಗ್ತಾರೆ, ಅವರನ್ನ ಕಾಯಬೇಕಿಲ್ಲ. ರಾಜ್ಯದ ಪ್ರಾಜೆಕ್ಸ್ ಗಳ ಬಗ್ಗೆ ಸಂಸದರೇ ಮಾತನಾಡಿ ತರಬಹುದು. ಹಿಂದೆಯೂ ಅವರು ಮಾತನಾಡಿಲ್ಲ. ಈಗ ಕುರ್ಚಿ ಭಯದಿಂದ ಅವರು ಮಾತನಾಡುತ್ತಿಲ್ಲ. ಮತದಾರರು ಮತ ನೀಡಿ ಅವರನ್ನ ಕಳಿಸಿ ಕೊಟ್ಟಿದ್ದಾರೆ. ರಾಜ್ಯದ ಜನರೇ ಪ್ರಶ್ನೆ ಮಾಡಬೇಕು ಎಂದು ಟೀಕಿಸಿದರು.
ಇದೇ ವೇಳೆ ಡ್ರಗ್ಸ್ ವಿಚಾರವಾಗಿ ಮಾತನಾಡಿದ ಶಿವಕುಮಾರ್, ಈಗ ಡ್ರಗ್ಸ್ ಕೇಸ್ ಬಗ್ಗೆ ಮಾತನಾಡಲ್ಲ. ಯಾಕೆಂದರೇ ಸಚಿವರು ವಿಭಿನ್ನವಾದ ಸ್ಟೇಟ್ ಮೆಂಟ್ ಕೊಡುತ್ತಿದ್ದಾರೆ. ಪೊಲೀಸರು ತನಿಖೆ ಮಾಡ್ತಾರೋ, ಇವರು ಮಾಡ್ತಾರೋ ಗೊತ್ತಿಲ್ಲ. ಗೃಹ ಸಚಿವರು ಸ್ಟೇಟ್ ಮೆಂಟ್ ಕೊಡೋದನ್ನ ನೋಡಿದ್ದೇನೆ. ಆದರೆ, ಇಲ್ಲಿ ಬೇರೆಯವರೇ ಹೇಳಿಕೆ ಕೊಡ್ತಾರೆ. ಮಕ್ಕಳ ಭವಿಷ್ಯ, ರಾಜ್ಯದ ಗೌರವದ ವಿಚಾರ. ಬರೀ ಇಬ್ಬರು ಹೆಣ್ಮಕ್ಕಳನ್ನೇ ತೋರಿಸೋದೇ ಆಗಿದೆ. ಸಮಸ್ಯೆಗಳ ಬಗ್ಗೆ ಎಲ್ಲಿಯೂ ಗಮನಹರಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.