ಬಳ್ಳಾರಿ: ಕೊರೊನಾ ವೈರಸ್ ನಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ತಾವೇ ಸ್ವತಃ ತಮ್ಮ ಕೈಯಾರೆ ನಾಶಮಾಡುವ ಸ್ಥಿತಿ ಬಂದೊದಗಿದೆ. ಹೀಗೆ ಬೆಳೆಗಳನ್ನು ನಾಶ ಮಾಡುತ್ತಿರುವ ಬಡ ರೈತರ ಬೆನ್ನಿಗೆ ರಾಜ್ಯ ಕಾಂಗ್ರೆಸ್ ನಿಂತಿದೆ. ಬಳ್ಳಾರಿ ಜಿಲ್ಲೆಯ ಬಹುತೇಕ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಾಧ್ಯವಾಗದೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡ ಕಾಂಗ್ರೆಸ್ ಮುಖಂಡ ಸಿರಾಜ್ ಶೇಕ್ ರೈತರ ತೋಟಕ್ಕೆ ತಾವೇ ಸ್ವತಃ ತೆರಳಿ ಅವುಗಳನ್ನು ಖರೀದಿ ಮಾಡಿ ಮಾರುಕಟ್ಟೆಯ ಬೆಲೆ ನೀಡುತ್ತಿದ್ದಾರೆ. ಬಳಿಕ ಖರೀದಿ ಮಾಡಿದ್ದನ್ನು ಜಿಲ್ಲೆಯ ಬಡ ಜನರಿಗೆ ಹಂಚಿದ್ದಾರೆ.
ಸಿರಾಜ್ ಶೇರ್ ಅವರು ಹಗರಿ ಬೊಮ್ಮನಹಳ್ಳಿ ಸುತ್ತಮುತ್ತಲಿನ ಬಡ ರೈತರನ್ನು ಆಯ್ಕೆ ಮಾಡಿ ಅವರ ತೋಟಕ್ಕೆ ತೆರಳಿ ಅವರು ಬೆಳೆದ ಈರುಳ್ಳಿ, ತರಕಾರಿಗಳನ್ನು ಕೊಂಡುಕೊಂಡು ಸೂಕ್ತ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಬಡ ರೈತರಿಗೂ ಹಾಗೂ ಆಹಾರ ಇಲ್ಲದೇ ಹಸಿವಿನಿಂದ ಇರುವ ಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಇದೇ ರೀತಿಯಲ್ಲಿ ಸ್ಥಳೀಯ ನಾಯಕರು ಬಡ ರೈತರ ಬೆಳೆಗಳನ್ನು ಖರೀದಿ ಮಾಡಿ ಬಡ ಜನರಿಗೆ ಹಂಚಿದ್ರೆ ಇಬ್ಬರಿಗೂ ಅನುಕೂಲವಾಗಲಿದೆ. ಸರ್ಕಾರ ಸಹ ಇದೇ ರೀತಿಯಲ್ಲಿ ಯೋಜನೆ ಜಾರಿ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ ಸಿರಾಜ್ ಶೇಕ್.








