ಈ ಬಾರಿ ತಪ್ಪು ನಮ್ದೆ..! ಕೊರೊನಾ 2.0 ಅಸಲಿಯತ್ತು.. ಸರ್ಕಾರ ಎಡವಿದ್ದೇಲ್ಲಿ..?
ಬೆಂಗಳೂರು : ಕೊರೊನಾ ಎರಡನೇ ಅಲೆ ದೇಶದಲ್ಲಿ ಸೋಂಕಿತರ ಪ್ರವಾಹವನ್ನೇ ಸೃಷ್ಠಿಸುತ್ತಿದೆ. ಪ್ರತಿ ದಿನ ದೇಶದಲ್ಲಿ ಕೊರೊನಾ ಬ್ಲಾಸ್ಟ್ ಆಗುತ್ತಿದ್ದು, 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಇದರಿಂದ ದೇಶದ ಪ್ರಮುಖ ನಗರಗಳು ಲಾಕ್ ಆಗಿವೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಬಿಗಿ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ.
ಈ ಬಾರಿ ತಪ್ಪು ನಮ್ದೆ..!
ನಮಗೆಲ್ಲರಿಗೂ ತಿಳಿದಂತೆ ಕೊರೊನಾ ವೈರಸ್ ಛೀನಾದಲ್ಲಿ ಜನಿಸಿ ಇಡೀ ವಿಶ್ವವನ್ನೇ ತನ್ನ ಕಬಂದ ಬಾಹುಗಳಲ್ಲಿ ಇಟ್ಟುಕೊಂಡಿದೆ. ಕೊರೊನಾ ಚೀನಾದಲ್ಲಿ ಮೊದಲು ಕಾಣಿಸಿಕೊಂಡು ಇಡೀ ಪ್ರಪಂಚಕ್ಕೆ ಹಬ್ಬಿದ್ದು, ಸಾಕಷ್ಟು ಸಾವು ನೋವುಗಳಾಗಿವೆ. ಕೊರೊನಾ ಮೊದಲ ಅಲೆಗೆ ಇಡೀ ವಿಶ್ವವೇ ಸ್ತಬ್ಧವಾಗಿದ್ದಿದ್ದು ನಿಜ. ಆದ್ರೆ ಕೊರೊನಾ ಎರಡನೇ ಅಲೆಗೆ ಕಾರಣ ಯಾರು..? ಕೊರೊನಾ 2.0 ಅಬ್ಬರಿಸಿ ಬೊಬ್ಬಿರಿಯಲು ಬಿಟ್ಟಿದ್ದು ಯಾರು..? ಅನ್ನೋ ಪ್ರಶ್ನೆಗಳನ್ನ ನಮ್ಮನ್ನ ನಾವೇ ಕೇಳಿಕೊಳ್ಳಬೇಕಾಗುತ್ತದೆ.
ಯಾಕೆಂದ್ರೆ ಕೊರೊನಾ ಮೊದಲ ಅಲೆ ಯಾರು ಕೂಡ ಊಹಿಸದೇ ಇದ್ದದ್ದು. ಕೊರೊನಾ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ. ಅದರ ತೀವ್ರತೆ ಎಷ್ಟು..? ಹೇಗೆ ವರ್ತಿಸುತ್ತೆ ಅನ್ನೋದು ತಿಳಿಯದೇ ಅದರ ವಿರುದ್ಧ ಹೋರಾಡಿದ್ವಿ. ಆದ್ರೆ ಕೊರೊನಾ 2.0 ಬಗ್ಗೆ ತಜ್ಞರು ಮೊದಲೇ ಎಚ್ಚರಿಸಿದ್ದರು. ಕೊರೊನಾ ಎರಡನೇ ಅಲೆ ಮೊದಲ ಕೊರೊನಾಗಿಂತ ಹೆಚ್ಚು ವೇಗವಾಗಿ ಹರಡುತ್ತೆ. ಇದರಲ್ಲಿ ಸಾವುಗಳು ಹೆಚ್ಚಾಗಬಹುದು ಎಂದು ಮೊದಲೇ ಹೇಳಿದ್ದರು. ಆದ್ರೆ ಇದನ್ನ ಆಳುವ ಸರ್ಕಾರವಾಗಲಿ ಅಥವಾ ಜನರಾಗಲಿ ತಲೆಗೆ ಹಾಕಿಕೊಳ್ಳಲು ಗೋಜಿಗೆ ಹೋಗಲಿಲ್ಲ.
ಕೊರೊನಾ ಮೊದಲ ಅಲೆಯನ್ನ ಕಣ್ಣಾರೆ ಕಂಡಿದ್ದ ಜನರು ಕೂಡ ಕೊರೊನಾ ಎರಡನೇ ಅಲೆಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೊರೊನಾದ ಜೊತೆ ಬದುಕುವುದನ್ನ ಕಲಿಯಬೇಕು ಎಂದುಕೊಂಡು ಜನರು ಕನಿಷ್ಠ ಎಚ್ಚರಿಕಾ ಕ್ರಮಗಳನ್ನೇ ಮರೆತು ಹೋದರು. ಮಾಸ್ಕ್, ಸಾಮಾಜಿಕ ಅಂತರ ಮರೆತು ಸಿಕ್ಕ ಸಿಕ್ಕ ಕಡೆ ಓಡಾಡಿದರು. ಕೊರೊನಾ ಜೊತೆ ಬದುಕಿ ಅಂದ್ರೆ ಜನರ ಕೊರೊನಾವನ್ನ ಅಪ್ಪಿತಬ್ಬಿಕೊಂಡಂತೆ ಬೇಕಾಬಿಟ್ಟಿ ತಿರುಗಾಡಿದ್ರು. ಇದು ಕೊರೊನಾ ಮತ್ತೆ ಅಬ್ಬರಿಸಲು ಪ್ರಮುಖ ಕಾರಣ. ಕೊರೊನಾ ಮೊದಲ ಅಲೆಗೆ ಚೀನಾ ಕಾರಣವಾದ್ರೆ.. ಕೊರೊನಾ 2.0ಗೆ ನಾವೇ ಕಾರಣ ಅಂದ್ರೆ ಈ ಬಾರಿ ತಪ್ಪು ನಮ್ದೆ..!
ಸರ್ಕಾರ ಎಡವಿದ್ದೇಲ್ಲಿ…?
ಹೌದು..! ಜನರ ನಿರ್ಲಕ್ಷ್ಯದಿಂದಲೇ ಕೊರೊನಾ ಹೆಚ್ಚಾಗಿದೆ. ಆದ್ರೆ ಜನರ ಈ ನಡೆಗೆ ಸರ್ಕಾರವೇ ನೇರ ಕಾರಣ ಅನ್ನೋದು ನೂರಕ್ಕೆ ನೂರಷ್ಟು ಸತ್ಯ. ಕಳೆದ ವರ್ಷ ಕೊರೊನಾದ ತೀವ್ರತೆ ಅದರ ಹೊಡೆತ ಹೇಗಿರುತ್ತೆ ಅನ್ನೋದು ಸರ್ಕಾರಕ್ಕೆ ಚೆನ್ನಾಗಿಯೇ ಮನವರಿಕೆಯಾಗಿತ್ತು. ಅದನ್ನ ಗಮನದಲ್ಲಿಟ್ಟುಕೊಂಡು ಕೊರೊನಾ ಎರಡನೇ ಅಲೆಯನ್ನ ಎದುರಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಬೇಕಿತ್ತು. ಮುಖ್ಯವಾಗಿ ಜನರಲ್ಲಿನ ಬೇಜವಾಬ್ದಾರಿಯನ್ನ ಗಮನಿಸಿ ಕಾಲ ಕಾಲಕ್ಕೆ ಜನರನ್ನ ಎಚ್ಚರಿಸುವ ಕೆಲಸ ಮಾಡಬೇಕಿತ್ತು. ಟೆಸ್ಟ್ ಗಳನ್ನ ಹೆಚ್ಚಿಸಬೇಕಿತ್ತು. ಹಳ್ಳಿ ಹಳ್ಳಿಗೂ ಭೇಟಿ ನೀಡಿ ಕೊರೊನಾ ಬಗ್ಗೆ ಜಾಗೃತಿ ಜೊತೆಗೆ ಎಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕಿತ್ತು. ಅನವಶ್ಯಕ ಜನ ಸಂಚಾರದ ಮೇಲೆ ನಿಬರ್ಂಧ ಏರಬೇಕಿತ್ತು. ಆದ್ರೆ ಸರ್ಕಾರ ಇದ್ಯಾವುದನ್ನೂ ಮಾಡಲೇ ಇಲ್ಲ. ಕೇವಲ ಫೋನ್ ರಿಂಗ್ ಟೂನ್, ಅಪರೂಪಕ್ಕೊಂದು ವಿಡಿಯೋ ಹೇಳಿಕೆ. ಕೊರೊನಾದ ಜೊತೆ ಬದುಕುವುದು ಕಲೀರಿ ಎನ್ನುತ್ತಾ ಬೇಜವಾಬ್ದಾರಿಯ ಪರಮಾವಧಿಯನ್ನ ಮೆರೆಯಿತು. ಇದರ ಪರಿಣಾಮ ಈಗ ದೇಶದಲ್ಲಿ ಕೊರೊನಾ ಕೈ ಮೀರಿದೆ. ಪ್ರತಿ ದಿನ ಕೊರೊನಾ ಸ್ಫೋಟಿಸುತ್ತಿದೆ.