ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಯಾರ್ಯಾರಿಗೆ ಕೊರೊನಾ ಸೋಂಕು ಇದೆ ಎಂಬುದರ ಪತ್ತೆ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ ಕಾವೇರಿ ನಿವಾಸದ ಮನೆಗೆಲಸದವರು, ಅಡುಗೆಯವರು ಹಾಗೂ ವಿಶೇಷ ಕರ್ತವ್ಯಾಧಿಕಾರಿ ಕಾರು ಚಾಲಕ ಸೇರಿದಂತೆ 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಯಡಿಯೂರಪ್ಪ ಅವರು ಅಡ್ಮಿಟ್ ಆಗಿರುವ ವಾರ್ಡ್ನಲ್ಲೇ ಪುತ್ರಿ ಪದ್ಮಾವತಿ ಅವರೂ ಕೂಡ ದಾಖಲಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಆರೋಗ್ಯ ವಿಚಾರಿಸಲು ಬರುವ ದೂರವಾಣಿ ಕರೆ ಸೇರಿದಂತೆ ಸಂಪರ್ಕದ ಎಲ್ಲಾ ಕಾರ್ಯಗಳನ್ನು ಪದ್ಮಾವತಿ ಅವರೇ ನೋಡಿಕೊಳ್ಳುತ್ತಿದ್ದಾರೆ.
ಸೋಂಕು ದೃಢಪಟ್ಟ ಎಲ್ಲಾ ಸಿಎಂ ನಿವಾಸದಲ್ಲಿ ಕೆಲಸದ ಮಾಡುತ್ತಿದ್ದ 6 ಜನ ಸಿಬ್ಬಂದಿಗಳನ್ನೂ ಆರೋಗ್ಯ ಇಲಾಖೆ ಸಿಬ್ಬಂದಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಿನ್ನೆಯೇ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಹಿಸ್ಟರಿ ಹಾಗೂ ಕೊರೊನಾ ಟೆಸ್ಟ್ ಮಾಡಿಸಿದಾಗ 6 ಜನರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪಾಸಿಟಿವ್ ಬಂದ ಎಲ್ಲಾ ಸಿಬ್ಬಂದಿಗಳನ್ನು ಆಂಬ್ಯುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ.